Site icon Vistara News

Patanjali Case: ಪತಂಜಲಿ ಕೇಸ್‌- ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌; IMA ಅಧ್ಯಕ್ಷನಿಗೆ ಛೀಮಾರಿ

Patanjali case

ನವದೆಹಲಿ: ಜನರನ್ನು ದಾರಿ ತಪ್ಪಿಸುವ ಕೆಲಸ (Misleading Advertisement) ಜಾಹೀರಾತು ಪ್ರಕಟ ಕೇಸ್‌ಗೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮ್‌ದೇವ್‌(Baba Ramdev) ಅವರ ಆಪ್ತ ಬಾಲಕೃಷ್ಣ ಮತ್ತು ಪತಂಜಲಿ ಸಂಸ್ಥೆ (Patanjali Case)ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ತೀರ್ಪನ್ನು ಸುಪ್ರೀಂಕೋರ್ಟ್‌(Supreme Court) ಕಾಯ್ದಿರಿಸಿದೆ. ಇದೇ ವೇಳೆ ಮಾಧ್ಯಮಗಳಲ್ಲಿ ಕೋರ್ಟ್‌ ಮಾಡಿರುವ ಅವಲೋಕನಗಳ ಬಗ್ಗೆ ಹೇಳಿಕೆ ನೀಡಿದಕ್ಕಾಗಿ ಕ್ಷಮೆಯಾಚಿಸಿ ಭಾರತೀಯ ಮೆಡಿಕಲ್‌ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಆರ್‌.ವಿ.ಅಶೋಕನ್‌ ಸಲ್ಲಿಸಿರುವ ಅರ್ಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಹಿಮಾ ಕೋಹ್ಲಿ ಮತ್ತು ಅಸಾದುದ್ದೀನ್‌ ಅಮಾನುಲ್ಲಾ ಇದ್ದ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಲು ಮೂರು ವಾರಗಳ ಗಡುವನ್ನು ಪತಂಜಲಿ ಸಂಸ್ಥೆಗೆ ಕೋರ್ಟ್‌ ನೀಡಿದೆ. ಬಾಬಾ ರಾಮ್‌ದೇವ್‌ ಅವರಿಗೆ ಸಾಕಷ್ಟು ಪ್ರಭಾವ ಇದೆ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಯೋಗ ಕ್ಷೇತ್ರಕ್ಕೆ ಅವರು ಉತ್ತಮ ಕೊಡುಗೆ ನೀಡಿದ್ದಾರೆ. ಆದರೆ ಪತಂಜಲಿ ಉತ್ಪನ್ನಗಳ ವಿಚಾರ ಬೇರೆಯಾಗಿದೆ ಎಂದು ಹೇಳಿದರು.

ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶಗಳ ಕುರಿತು ಪತ್ರಿಕೆಗಳಿಗೆ ಸಂದರ್ಶನ ನೀಡಿದ್ದಕ್ಕಾಗಿ ಐಎಂಎ ಅಧ್ಯಕ್ಷ ಡಾ ಆರ್‌ವಿ ಅಶೋಕನ್ ಅವರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಅವರು ಕ್ಷಮೆ ಕೋರಿ ಸಲ್ಲಿಸಿರುವ ಅಫಿಡವಿಟ್‌ನೊಂದಿಗೆ ಸಮಾಧಾನಕರವಾಗಿಲ್ಲ ಎಂದು ಹೇಳಿದೆ. ಪತಂಜಲಿ ಮಾಡಿದಂತೆಯೇ ನೀವೂ ಮಾಡುತ್ತಿದ್ದೀರಿ. ನೀವು ಜನಸಾಮಾನ್ಯರಲ್ಲ, ಅಂತಹ ವಿಷಯಗಳ ಪರಿಣಾಮಗಳು ನಿಮಗೆ ತಿಳಿದಿಲ್ಲವೇ?ನಾವು ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿದವರಲ್ಲಿ ಮೊದಲಿಗರು. ಆದರೆ ಕೆಲವು ಸಂದರ್ಭಗಳಲ್ಲಿ ಸ್ವಯಂ ಸಂಯಮ ಇರಬೇಕು. IMA ಅಧ್ಯಕ್ಷರಾಗಿ ನೀವು ಸ್ವಯಂ ಸಂಯಮವನ್ನು ಹೊಂದಿರಬೇಕು. ನಿಮ್ಮಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಪೀಠವು ನ್ಯಾಯಾಲಯದಲ್ಲಿ ಹಾಜರಿದ್ದ ಅಶೋಕನ್‌ಗೆ ಸೂಚಿಸಿತು.

ಐಎಂಎ ದೂರಿನನ್ವಯ ಈ ಹಿಂದೆ ಸುಪ್ರೀಂ ಕೋರ್ಟ್ ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್‌ದೇವ್ ಮತ್ತು ಸಿಇಒ ಆಚಾರ್ಯ ಬಾಲಕೃಷ್ಣಗೆ ಛೀಮಾರಿ ಹಾಕಿತ್ತು. ಈ ಸಂಬಂಧ ಹಲವು ದಿನಪತ್ರಿಕೆಗಳಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತಿನ ಬಗ್ಗೆ ಪತಂಜಲಿ ಆಯುರ್ವೇದ ಸಂಸ್ಥೆ, ಬಾಬಾ ರಾಮ್‌ದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಕ್ಷಮೆಯನ್ನೂ ಯಾಚಿಸಿದ್ದರು. ಸರ್ವೋಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಮತ್ತೊಮ್ಮೆ ಈ ತಪ್ಪನ್ನು ಪುನರಾವರ್ತಿಸುವುದಿಲ್ಲ ಎಂದು ಕಂಪನಿಯು ಏಪ್ರಿಲ್ 22ರಂದು ಬಹಿರಂಗವಾಗಿ ಕ್ಷಮೆ ಯಾಚಿಸಿತ್ತು.

Bomb Threat: ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮೂಲಕ ಸಂದೇಶ ರವಾನೆ

ಇದರ ಬೆನ್ನಲ್ಲೇ ಯೋಗ ಗುರು ಬಾಬಾ ರಾಮ್‌ದೇವ್‌ ಅವರ ಪತಂಜಲಿ ಹಾಗೂ ದಿವ್ಯಾ ಫಾರ್ಮಸಿ ಸಂಸ್ಥೆಗೆ ಸೇರಿದ 14 ಆಯುರ್ವೇದ ಉತ್ಪನ್ನಗಳಿಗೆ ನೀಡಲಾಗಿದ್ದ ಮಾರಾಟ ಪರವಾನಗಿಯನ್ನು ಉತ್ತರಾಖಂಡ ಸರಕಾರ ಬ್ಯಾನ್‌ ಮಾಡಿತ್ತು. ದೃಷ್ಟಿ ಐ ಡ್ರಾಫ್ಸ್‌, ಶ್ವಾಸರಿ ಗೋಲ್ಡ್‌, ಸ್ವಸರಿ ಪ್ರವಾಹಿ, ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್‌, ಲಿವಾಮೃತ್‌ ಅಡ್ವಾನ್ಸ್‌, ಲಿವೋಗ್ರಿಟ್‌ ಸೇರಿದಂತೆ 14 ಉತ್ಪನ್ನಗಳಿಗೆ ನೀಡಲಾಗಿದ್ದ ಮಾರಾಟ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಡ್ರಗ್ಸ್‌ ಆ್ಯಂಡ್‌ ಮ್ಯಾಜಿಕ್‌ ರೆಮಿಡಿಸ್‌ (ಅಬ್ಜಕ್ಷನೇಬಲ್‌ ಅಡ್ವೊರ್ಟೈಸ್‌ಮೆಂಟ್‌) ಕಾಯಿದೆ, 1954ನ್ನು ಪದೇ ಪದೇ ಉಲ್ಲಂಘಿಸಿದ ಆರೋಪದ ಮೇಲೆ ಪತಂಜಲಿ ಮುಖ್ಯಸ್ಥ ಬಾಬಾ ರಾಮದೇವ್‌ ಹಾಗೂ ಸಿಇಒ ಆಚಾರ್ಯ ಬಾಲಕೃಷ್ಣ ವಿರುದ್ಧ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಸರಕಾರ ಕ್ರಿಮಿನಲ್‌ ಕೇಸ್‌ ಕೂಡ ದಾಖಲಿಸಿದೆ.

Exit mobile version