Site icon Vistara News

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

peace accord between Manipur oldest armed group UNLF and Government

ನವದೆಹಲಿ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಸಂಬಂಧ ಕೇಂದ್ರ ಸರ್ಕಾರವು ಮಹತ್ವದ ಯಶಸ್ಸನ್ನು ಸಾಧಿಸಿದೆ. ಮಣಿಪುರದ ಅತ್ಯಂತ ಹಳೆಯ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (United National Liberation Front – UNLF) ಕೇಂದ್ರ ಸರ್ಕಾರದೊಂದಿಗೆ (Central Government) ಶಾಂತಿ ಒಪ್ಪಂದಕ್ಕೆ (peace accord) ಸಹಿ ಹಾಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ(Union Home Minister Amit Shah).

ಕೇಂದ್ರ ಸರ್ಕಾರವು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಈಶಾನ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಮೋದಿ ಸರ್ಕಾರದ ಅವಿರತ ಪ್ರಯತ್ನಗಳು ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್) ಇಂದು ನವದೆಹಲಿಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಹೊಸ ಅಧ್ಯಾಯವನ್ನು ಆರಂಭಿಸಲಾಗಿದೆ ಎಂದು ಎಕ್ಸ್ ವೇದಿಕೆಯಲ್ಲಿ ಕೇಂದ್ರ ಗೃಹ ಸಚಿವ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮಣಿಪುರದ ಅತ್ಯಂತ ಹಳೆಯ ಮತ್ತು ಕಣಿವೆ ಮೂಲದ ಸಶಸ್ತ್ರ ಗುಂಪು ಯುಎನ್‌ಎಲ್‌ಎಫ್ ಹಿಂಸಾಚಾರವನ್ನು ತ್ಯಜಿಸಲು ಮತ್ತು ಮುಖ್ಯವಾಹಿನಿಗೆ ಸೇರಲು ಒಪ್ಪಿಕೊಂಡಿದೆ. ನಾನು ಅವರನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಸ್ವಾಗತಿಸುತ್ತೇನೆ ಮತ್ತು ಶಾಂತಿ ಮತ್ತು ಪ್ರಗತಿಯ ಹಾದಿಯಲ್ಲಿ ಅವರ ಪ್ರಯಾಣದಲ್ಲಿ ಅವರಿಗೆ ಶುಭ ಹಾರೈಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಯುಎನ್‌ಎಲ್‌ಎಫ್ ಜೊತೆಗೆ ಹಲವಾರು ಇತರ ಉಗ್ರಗಾಮಿ ಸಂಘಟನೆಗಳನ್ನು ಗೃಹ ಸಚಿವಾಲಯ ನಿಷೇಧಿಸಿದ ದಿನಗಳ ನಂತರ ಈ ಶಾಂತಿ ಒಪ್ಪಂದವು ಏರ್ಪಟ್ಟಿದೆ. ಈ ಸಂಘಟನೆಗಳು ಮಣಿಪುರದಲ್ಲಿ ಭದ್ರತಾ ಪಡೆಗಳು, ಪೊಲೀಸರು ಮತ್ತು ನಾಗರಿಕರ ಮೇಲೆ ದಾಳಿಗಳು ಮತ್ತು ಹತ್ಯೆಗಳು ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿಯುಂಟುಮಾಡುವ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಕೇಂದ್ರ ಸರ್ಕಾರ ನಿಷೇಧ ಅಸ್ತ್ರವನ್ನು ಪ್ರಯೋಗಿಸಿತ್ತು.

1964ರ ನವೆಂಬರ್ 24ರಂದು ಅರೆಂಬಮ್ ಸಮ್ರೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಯುಎನ್‌ಎಲ್‌ಎಫ್ ಜನ್ಮ ತಳೆಯಿತು. ಇದು ಮಣಿಪುರದ ಅತ್ಯಂತ ಹಳೆಯ ಬಂಡಾಯ ಗುಂಪು ಎನಿಸಿಕೊಂಡಿದೆ. 70 ಮತ್ತು 80 ರ ದಶಕಗಳಲ್ಲಿ ಈ ಗುಂಪು ಮುಖ್ಯವಾಗಿ ಸಿದ್ಧತೆ ಮತ್ತು ನೇಮಕಾತಿಯ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತು. 1990ರಲ್ಲಿ ಭಾರತದಿಂದ ಮಣಿಪುರದ ‘ವಿಮೋಚನೆ’ಗಾಗಿ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಲು ನಿರ್ಧರಿಸಿತು. ಅದೇ ವರ್ಷದಲ್ಲಿ, ಇದು ಮಣಿಪುರ ಪೀಪಲ್ಸ್ ಆರ್ಮಿ ಎಂಬ ಸಶಸ್ತ್ರ ವಿಭಾಗವನ್ನು ಕೂಡ ಆರಂಭಿಸಿತ್ತು. ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಕೇಂದ್ರ ಸರ್ಕಾರವು ಈ ಸಂಘಟನೆಯನ್ನೂ ನಿಷೇಧಿಸಿತ್ತು.

ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರದಲ್ಲಿ ಪೊಲೀಸ್‌ ಅಧಿಕಾರಿಯ ಹತ್ಯೆ; ‘ಕುಕಿ’ ಜನರಿಂದ ದಾಳಿ

Exit mobile version