Site icon Vistara News

Sara Ali Khan: ಮತ್ತೆ ಮಹಾಕಾಳೇಶ್ವರನ ದರ್ಶನ ಪಡೆಯುವೆ; ಮುಸ್ಲಿಮಳೇ ಅಲ್ಲ ಅಂದವರಿಗೆ ಸಾರಾ ಅಲಿ ಖಾನ್‌ ತಿರುಗೇಟು

Sara Ali Khan At Mahakaleshwar Temple

Personal beliefs are my own: Sara Ali Khan replies to comments over her visit to Mahakaleshwar temple

ಮುಂಬೈ: ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ (Sara Ali Khan) ಅವರು ನಟಿಸಿರುವ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಸಿನಿಮಾ ಇದೇ ಶುಕ್ರವಾರ (June 2) ಬಿಡುಗಡೆಯಾಗಲಿದೆ. ಇದಕ್ಕಾಗಿ ಅವರು ಪ್ರಮೋಷನ್‌ನಲ್ಲಿ ತೊಡಗಿದ್ದಾರೆ. ಇನ್ನು ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯೇ ಸಾರಾ ಅಲಿ ಖಾನ್‌ ಅವರು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿದ್ದರು. ಸಾರಾ ಅಲಿ ಖಾನ್‌ ಅವರು ದೇವಾಲಯಕ್ಕೆ ತೆರಳಿ, ದರ್ಶನ ಪಡೆದ ಬಳಿಕ ಹಲವು ಟೀಕೆಗಳು ವ್ಯಕ್ತವಾಗಿದ್ದು, ಇದಕ್ಕೆ ಬಾಲಿವುಡ್‌ ನಟಿಯು ತಿರುಗೇಟು ನೀಡಿದ್ದಾರೆ.

“ನಾನು ನನ್ನ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ನಾನು ಜನರಿಗಾಗಿ ಕೆಲಸ ಮಾಡುತ್ತೇನೆ. ನಿಮಗೆ ನನ್ನ ಕೆಲಸ, ನಟನೆ ಇಷ್ಟವಾಗದಿದ್ದರೆ, ಅದನ್ನು ಟೀಕಿಸಿ. ನಾನು ಅಜ್ಮೇರ್‌ ಷರೀಫ್‌ಗೂ ಹೋಗುತ್ತೇನೆ, ಇದೇ ನಂಬಿಕೆಯೊಂದಿಗೆ ಬಾಂಗ್ಲಾ ಸಾಹಿಬ್‌ ಅಥವಾ ಮಹಾಕಾಳೇಶ್ವರನ ದರ್ಶನ ಪಡೆಯುತ್ತೇನೆ. ಇದು ನನ್ನ ವೈಯಕ್ತಿಕ ನಂಬಿಕೆ. ನಾನು ಮತ್ತೆ ಮಹಾಕಾಳೇಶ್ವರನ ದರ್ಶನ ಪಡೆಯುತ್ತೇನೆ. ಜನ ಏನು ಬೇಕಾದರೂ ಅಂದುಕೊಳ್ಳಲಿ, ನನಗೇನೂ ತೊಂದರೆ ಇಲ್ಲ. ನನಗೆ ದೈವದಲ್ಲಿ, ಅಮೂರ್ತ ಶಕ್ತಿಯಲ್ಲಿ ನಂಬಿಕೆ ಇದೆ” ಎಂದು ಟಿವಿ ಸಂದರ್ಶನವೊಂದರಲ್ಲಿ ಸಾರಾ ಅಲಿ ಖಾನ್‌ ಅವರು ಟೀಕಾಕಾರರಿಗೆ ಕುಟುಕಿದ್ದಾರೆ.

ಸಾರಾ ಅಲಿ ಖಾನ್‌ ಅವರು ಮಹಾಕಾಳೇಶ್ವರನ ದೇವಾಲಯಕ್ಕೆ ತೆರಳಿದ್ದಕ್ಕೆ ಕೆಲ ಮುಸ್ಲಿಮರು ಟೀಕಿಸಿದ್ದರು. “ಅಲ್ಲಾ ನಿನಗೆ ಸರಿಯಾದ ಶಿಕ್ಷೆ ನೀಡುತ್ತಾರೆ” ಎಂಬುದಾಗಿ ಒಬ್ಬ ಕಮೆಂಟ್‌ ಮಾಡಿದ್ದ. “ಮುಸ್ಲಿಮಳಾಗಿ ನೀನು ಹೀಗೆ ಮಾಡುವುದು ನಾಚಿಕೆಗೇಡು, ನೀನು ಮುಸ್ಲಿಮಳೇ ಅಲ್ಲ” ಎಂದು ಮತ್ತೊಬ್ಬ ಟೀಕಿಸಿದ್ದ. ಹೀಗೆ ತರಹೇವಾರಿಯಾಗಿ ಜನ ಪ್ರತಿಕ್ರಿಯಿಸಿದ್ದರು. ನಟ ವಿಕ್ಕಿ ಕೌಶಲ್‌ ಅವರು ಕೂಡ ಸಾರಾ ಅಲಿ ಖಾನ್‌ ಅವರ ಅಭಿಪ್ರಾಯವನ್ನು ಮೆಚ್ಚಿದ್ದಾರೆ. “ಸಾಮಾಜಿಕ ಜಾಲತಾಣಗಳಲ್ಲಿ ಯಾರು ಏನು ಬೇಕಾದರೂ ಹೇಳುತ್ತಾರೆ. ನಮಗೆ ಏನು ಬೇಕು, ನಮ್ಮ ಕೆಲಸ ಏನು ಎಂಬುದು ನಮಗೆ ಗೊತ್ತಿದ್ದರೆ ಸಾಕು” ಎಂದು ಹೇಳಿದ್ದಾರೆ. ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾಗೆ ವಿಕ್ಕಿ ಕೌಶಲ್‌ ಅವರೇ ನಾಯಕರಾಗಿದ್ದಾರೆ. ಲಕ್ಷ್ಮಣ್‌ ಉಟೇಕರ್‌ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಮಹಾಕಾಳೇಶ್ವರ ದೇವಾಲಯದಲ್ಲಿ ಸಾರಾ ಅಲಿ ಖಾನ್‌ ವಿಶೇಷ ಪ್ರಾರ್ಥನೆ.

ಇದನ್ನೂ ಓದಿ: Sara Ali Khan : ಉಜ್ಜಯಿನಿ ಮಹಾಕಾಳೇಶ್ವರ ದರ್ಶನ ಮಾಡಿದ ನಟಿ ಸಾರಾ ಅಲಿ ಖಾನ್‌, ಇಲ್ಲಿದೆ ವಿಡಿಯೊ

ಬುಧವಾರ ಬೆಳಗ್ಗೆಯೇ ನಟಿ ಸಾರಾ ಅಲಿ ಖಾನ್‌ ಅವರು ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಇತರೆ ಭಕ್ತರೊಂದಿಗೆ ದೇವರ ಪ್ರಾರ್ಥನೆ ಮಾಡಿದ್ದಾರೆ. ಹಾಗೆಯೇ ಅಲ್ಲಿನ ಪೂಜಾರಿಗಳ ಜತೆ ಮಾತನಾಡಿದ್ದಾರೆ. ಕಡು ಗುಲಾಬಿ ಬಣ್ಣದ ಚೂಡಿದಾರ್ ತೊಟ್ಟ ನಟಿ, ತಲೆಯ ಮೇಲೆ ದುಪ್ಪಟ್ಟಾ ಹೊದ್ದು ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಈ ದೇಗುಲದ ಭೇಟಿಗೂ ಮೊದಲು ಸಾರಾ ಹಾಗೂ ನಟ ವಿಕ್ಕಿ ಕೌಶಲ್‌ ಅವರು ಲಕ್ನೋದಲ್ಲಿ ಮತ್ತೊಂದು ದೇಗುಲಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿ ಇಬ್ಬರೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದ ನಟಿ, “ಜೈ ಭೋಲೆನಾಥ್‌” ಎಂದು ಕ್ಯಾಪ್ಶನ್‌ ಕೊಟ್ಟಿದ್ದರು. ಅದರಲ್ಲಿ ನಟಿ ಬಿಳಿ ಬಣ್ಣದ ಚೂಡಿದಾರ್ ಹಾಗೂ ವಿಕ್ಕಿ ಬೂದು ಬಣ್ಣದ ಶರ್ಟ್‌ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ ತೊಟ್ಟಿದ್ದನ್ನು ಕಾಣಬಹುದಾಗಿದೆ.

Exit mobile version