Site icon Vistara News

Viral Video | ಹಿಮಾಚಲ ಪ್ರದೇಶದಲ್ಲಿ ಆಂಬ್ಯುಲೆನ್ಸ್​ಗಾಗಿ ತಮ್ಮ ಬೆಂಗಾವಲು ಕಾರು ನಿಲ್ಲಿಸಿದ ಪ್ರಧಾನಿ ಮೋದಿ

PM Modi

ಶಿಮ್ಲಾ: ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರಕ್ಕಾಗಿ ಅಲ್ಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಕಂಗ್ರಾ ಜಿಲ್ಲೆಯಲ್ಲಿ, ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಡಲು ತಮ್ಮ ಬೆಂಗಾವಲು ವಾಹನ ನಿಲ್ಲಿಸಿದ ಘಟನೆ ನಡೆದಿದೆ. ಆದರೆ ಇದನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿವೆ. ಇದು ಫೋಟೋ-ವಿಡಿಯೊ ಮತ್ತು ಪ್ರಚಾರಕ್ಕಾಗಿ ಪ್ರಧಾನಮಂತ್ರಿ ಕಚೇರಿಯಿಂದ ಪೂರ್ವ ಯೋಜಿತವಾದ ಸನ್ನಿವೇಶ ಎಂದು ಹೇಳಿವೆ.

ಕಂಗ್ರಾದ ಚಂಬಿ ಎಂಬ ಗ್ರಾಮದಲ್ಲಿ ಪ್ರಧಾನಿ ಮೋದಿ ಇದ್ದ ವಾಹನ, ಬೆಂಗಾವಲು ವಾಹನಗಳು ಪ್ರಯಾಣ ಮಾಡುತ್ತಿದ್ದವು. ಆಗೊಂದು ಆಂಬ್ಯುಲೆನ್ಸ್ ಆ ದಾರಿಯಲ್ಲಿ ಬಂತು. ಆಗ ಅಲ್ಲಿ ನೆರೆದಿದ್ದ ಜನರೆಲ್ಲ ರಸ್ತೆ ಪಕ್ಕ ಸರಿದು ದಾರಿ ಮಾಡಿಕೊಟ್ಟರು. ಅಂತೆಯೇ ಪ್ರಧಾನಿ ಮೋದಿಯೂ ತಮ್ಮ ಬೆಂಗಾವಲು ಪಡೆಗಳಿಗೆ ವಾಹನಗಳನ್ನು ನಿಲ್ಲಿಸಿ, ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಡಲು ಸೂಚಿಸಿದ್ದಾರೆ. ಆ ವಿಡಿಯೊ ಕೂಡ ವೈರಲ್ ಆಗಿದೆ.
ಕೇಂದ್ರ ಸಚಿವರ ಪಿಯುಷ್​ ಗೋಯೆಲ್​, ಗುಜರಾತ್​ ಸಚಿವ ಪೂರ್ಣೇಶ್ ಮೋದಿ ಇತರರು ಈ ವಿಡಿಯೊ ಶೇರ್ ಮಾಡಿಕೊಂಡು ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ. ಇವರು ಜನಸ್ನೇಹಿ ಪ್ರಧಾನಮಂತ್ರಿ. ಸ್ಫೂರ್ತಿದಾಯಕ ನಡೆ, ನಮ್ಮ ಪ್ರಧಾನಿ, ನಮ್ಮ ಹೆಮ್ಮೆ ಎಂದೆಲ್ಲ ಹೊಗಳಿದ್ದಾರೆ.

ಹಾಗಿದ್ದಾಗ್ಯೂ ಟಿಆರ್​ಎಸ್​ ನಾಯಕ ವೈ. ಸತೀಶ್​ ರೆಡ್ಡಿ ಈ ವಿಡಿಯೊವನ್ನು ವ್ಯಂಗ್ಯ ಮಾಡಿದ್ದಾರೆ. ‘ಆಂಬ್ಯುಲೆನ್ಸ್​ ಸಡನ್​ ಆಗಿ ಆ ದಾರಿಯಲ್ಲಿ ಪಾಸ್​ ಆಗುವುದನ್ನು ಚಿತ್ರೀಕರಿಸಲು ಕ್ಯಾಮರಾ ಸಿಬ್ಬಂದಿಗೆ ಮೊದಲೇ ತಿಳಿಸಲಾಗಿತ್ತು. ಹಾಗೇ, ಬೆಂಗಾವಲು ವಾಹನಗಳನ್ನು ವಿವಿಧ ಆಯಾಮಗಳಲ್ಲಿ ಚಿತ್ರೀಕರಿಸಲಾಗಿದೆ. ಒಟ್ಟಾರೆ ಪ್ರಚಾರಕ್ಕಾಗಿ ಮಾಡಿದ ಒಂದು ಗಿಮಿಕ್​’ ಎಂದು ಹೇಳಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಗುಜರಾತ್​​ಗೆ ಮೋದಿ ಹೋಗಿದ್ದಾಗಲೂ ಇಂಥದ್ದೇ ಸನ್ನಿವೇಶ ಎದುರಾಗಿತ್ತು. ಆಗಲೂ ಆಂಬ್ಯುಲೆನ್ಸ್​ಗಾಗಿ ಪ್ರಧಾನಿ ಮೋದಿ ತಮ್ಮ ಕಾರು ನಿಲ್ಲಿಸಿದ್ದರು.

ಇದನ್ನೂ ಓದಿ: Viral Video | ಆಂಬ್ಯುಲೆನ್ಸ್​​ಗೆ ದಾರಿ ಬಿಡಲು, ತಮ್ಮ ಕಾರನ್ನು ರಸ್ತೆ ಪಕ್ಕ ನಿಲ್ಲಿಸಲು ಹೇಳಿದ ಪ್ರಧಾನಿ ಮೋದಿ

Exit mobile version