Site icon Vistara News

NIA Raid | ನಾವ್ಯಾರಿಗೂ ಹೆದರೋಲ್ಲ, ಶರಣಾಗೋದೂ ಇಲ್ಲ; ಎನ್ಐಎ ದಾಳಿ ಬೆನ್ನಲ್ಲೇ ಪಿಎಫ್​ಐ ಹೇಳಿಕೆ ಬಿಡುಗಡೆ

Popular Front Released Statement Over NIA Raid

ನವ ದೆಹಲಿ: ಇಂದು ದೇಶಾದ್ಯಂತ 13 ರಾಜ್ಯಗಳಲ್ಲಿ ಪಿಎಫ್​​ಐ ಸಂಘಟನೆಯ ನಾಯಕರ ಕಚೇರಿ, ಮನೆಗಳ ಮೇಲೆ ಎನ್​ಐಎ (ರಾಷ್ಟೀಯ ತನಿಖಾ ದಳ) ದಾಳಿ ನಡೆಸಿದೆ. ಇಂದು ಎನ್​ಐಎ ಅಧಿಕಾರಿಗಳು, ಇಡಿ ಅಧಿಕಾರಿಗಳು ಮತ್ತು ಆಯಾ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ರೇಡ್​ ಮಾಡಿದ್ದಾರೆ. ಪಿಎಫ್​ಐನ 105ಕ್ಕೂ ಹೆಚ್ಚು ಮುಖಂಡರನ್ನು ಅರೆಸ್ಟ್​ ಮಾಡಲಾಗಿದೆ.

ಹೀಗೆ ರಾಷ್ಟ್ರವ್ಯಾಪಿ ಎನ್​ಐಎ ದಾಳಿ ನಡೆದ ಬೆನ್ನಲ್ಲೇ ಪಾಪ್ಯುಲರ್​ ಫ್ರಂಟ್ ಆಫ್​ ಇಂಡಿಯಾ (ಪಿಎಫ್​ಐ) ಹೇಳಿಕೆ ಬಿಡುಗಡೆ ಮಾಡಿದೆ ಮತ್ತು ಈ ರೇಡ್​​ನ್ನು ಖಂಡಿಸಿದೆ. ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಿಎಫ್​ಐನ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ (ಎನ್​​ಇಸಿ), ‘ಎನ್​ಐಎ, ಇಡಿ ತನಿಖಾ ದಳಗಳು ತಮ್ಮ ರಾಷ್ಟ್ರೀಯ, ರಾಜ್ಯಗಳ ನಾಯಕರಿಗೆ ಸೇರಿದ ಸ್ಥಳಗಳ ಮೇಲೆ ರೇಡ್​ ಮಾಡಿದ್ದು ಅನ್ಯಾಯ. ಅವರನ್ನು ಬಂಧಿಸಿದ್ದೂ ತಪ್ಪು. ನಮ್ಮ ಸಂಘಟನೆಯ ಬೆಂಬಲಿಗರು, ಕಾರ್ಯಕರ್ತರ ಮೇಲೆ ಕೂಡ ತನಿಖಾ ದಳಗಳು ದೌರ್ಜನ್ಯ ಎಸಗುತ್ತಿವೆ’ ಎಂದು ಹೇಳಿದೆ.

ಎನ್​​ಐಎ ನಮ್ಮ ಮೇಲೆ ಮಾಡುತ್ತಿರುವ ಆರೋಪಗಳೆಲ್ಲ ಆಧಾರ ರಹಿತ ಮತ್ತು ಸಂವೇದನೆ ಇಲ್ಲದ್ದು. ಭಯೋತ್ಪಾದಕತೆ ವಾತಾವರಣ ಸೃಷ್ಟಿಸುವ ಉದ್ದೇಶದಿಂದಷ್ಟೇ ಹೀಗೆ ಮಾಡಲಾಗುತ್ತಿದೆ. ಕೇಂದ್ರೀಯ ತನಿಖಾ ದಳಗಳನ್ನು ತನ್ನ ಕೈಗೊಂಬೆಗಳಂತೆ ಬಳಸಿಕೊಳ್ಳುವ ನಿರಂಕುಶವಾದಿಗಳಿಗೆ ನಮ್ಮ ಪಿಎಫ್​ಐ ಎಂದಿಗೂ ಹೆದರುವುದಿಲ್ಲ, ಶರಣಾಗುವುದಿಲ್ಲ. ನಮ್ಮ ಪ್ರೀತಿಯ ದೇಶದ, ಹಾಳಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿಪಡಿಸಲು, ಸಂವಿಧಾನದ ಆಶಯವನ್ನು ಕಾಪಾಡಲು ನಾವು ಸದಾ ಬದ್ಧರಾಗಿರುತ್ತೇವೆ ಎಂದು ಪಿಎಫ್​ಐ ಹೇಳಿದೆ.

ಪಿಎಫ್​ಐ ಪ್ರತಿಭಟನೆ
ಇಂದು ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಸೇರಿ ಸುಮಾರು 13 ರಾಜ್ಯಗಳಲ್ಲಿ ಎನ್​ಐಎ ಅಧಿಕಾರಿಗಳು ಪಿಎಫ್​ಐಗೆ ಸೇರಿದ ಸ್ಥಳಗಳನ್ನು ಶೋಧಿಸಿದ್ದಾರೆ. ಅದರ ಬೆನ್ನಲ್ಲೇ ತಮಿಳುನಾಡು, ಕರ್ನಾಟಕದಲ್ಲೆಲ್ಲ ಪಿಎಫ್​ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಚೆನ್ನೈ, ಮಂಗಳೂರಿನಲ್ಲಿ ರಸ್ತೆ ಮೇಲೆ ಧರಣಿ ಕುಳಿತು ಪ್ರತಿಭಟಿಸುತ್ತಿದ್ದ ಪಿಎಫ್​ಐ ಕಾರ್ಯಕರ್ತರನ್ನು ಆಯಾ ರಾಜ್ಯಗಳ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: NIA Raid| ರಾಜ್ಯದಲ್ಲಿ 20 ಪಿಎಫ್‌ಐ ಮುಖಂಡರು ಎನ್‌ಐಎ ವಶದಲ್ಲಿ: ಇನ್ನಷ್ಟು ಮಂದಿಗೆ ಬಲೆ? ವಶದಲ್ಲಿರುವ ನಾಯಕರು ಯಾರು?

Exit mobile version