Site icon Vistara News

ಡಿ.ಕೆ. ಸುರೇಶ್‌ ದೇಶ ವಿಭಜನೆ ಹೇಳಿಕೆ; ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಪ್ರಲ್ಹಾದ್‌ ಜೋಶಿ ಆಗ್ರಹ

Pralhad Joshi

ನವದೆಹಲಿ: ದೇಶ ಒಡೆಯುವ ನೀತಿ ಕಾಂಗ್ರೆಸ್‌ನ ಪರಂಪರೆಯಾಗಿಬಿಟ್ಟಿದೆ. ಈಗ ಅದೇ ಪಕ್ಷದ ಸಂಸದ, ಅದೂ ಒಬ್ಬ ಉಪ ಮುಖ್ಯಮಂತ್ರಿ ಸಹೋದರ ದೇಶ ವಿಭಜನೆ ಹೇಳಿಕೆ ನೀಡಿರುವುದು ಖಂಡನೀಯ. ಈ ವಿಷಯವನ್ನು ಎಥಿಕ್ಸ್ ಕಮಿಟಿ ಮುಂದಿಡಬೇಕು. ದೇಶ ವಿಭಜನೆ ಕೂಗೆಬ್ಬಿಸಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ವಿರುದ್ಧ ಸಂವಿಧಾನಾತ್ಮಕ ಕ್ರಮ ಕೈಗೊಳ್ಳಬೇಕು ಮತ್ತು ಕಾಂಗ್ರೆಸ್ ಪಕ್ಷ ದೇಶದ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಒತ್ತಾಯಿಸಿದರು.

ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ ಜೋಶಿ ಅವರು, ಕಾಂಗ್ರೆಸ್ ಸಂಸದ ಸುರೇಶ ದೇಶ ವಿಭಜನೆ ಹೇಳಿಕೆ ನೀಡುವ ಮೂಲಕ ಭಾರತೀಯ ಸಂವಿಧಾನಕ್ಕೆ, ಡಾ. ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಅಪಮಾನ ಎಸಗಿದ್ದಾರೆ. ರಾಷ್ಟ್ರದ ಅಖಂಡತೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ಇವರ ವಿರುದ್ಧ ಕಾನೂನಾತ್ಮಕ ಕ್ರಮವಾಗಲೇಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ಪಕ್ಷದ ಸದಸ್ಯ, ಸಂಸದನ ದೇಶ ಒಡೆಯುವ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದೇಶದ ಕ್ಷಮೆ ಯಾಚಿಸಬೇಕು. ದೇಶವನ್ನು ವಿಭಜಿಸುವ ಡಿ.ಕೆ.ಸುರೇಶ್ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಸಂವಿಧಾನ ಮತ್ತು ಬಾಬಾಸಾಹೇಬ್ ಅಂಬೇಡ್ಕರ್‌ಗೆ ಘೋರ ಅವಮಾನ ಮಾಡಿರುವ ಡಿ.ಕೆ.ಸುರೇಶ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಕಾಂಗ್ರೆಸ್‌ಗೆ ಒತ್ತಾಯಿಸುತ್ತೇನೆ ಎಂದರು.

ಇದನ್ನೂ ಓದಿ | Divided Nation: ಲೂಟಿ ಮಾಡಿದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತೆ; ಡಿಕೆಸು ವಿರುದ್ಧ ಎಚ್‌ಡಿಕೆ ಕೆಂಡ

ಕಾಂಗ್ರೆಸ್ ಕ್ರಮ ಕೈಗೊಳ್ಳದೇ ಹೋದಲ್ಲಿ ದೇಶವನ್ನು ಛಿದ್ರಗೊಳಿಸುವ ಅವರ ಹೇಳಿಕೆಗೆ ಕಾಂಗ್ರೆಸ್ ಬೆಂಬಲವೂ ಇದೆ ಎಂದಂತಾಗುತ್ತದೆ. ದೇಶವನ್ನು ದಕ್ಷಿಣ ಭಾರತ- ಉತ್ತರ ಭಾರತ ಎನ್ನುವುದು ತಪ್ಪು. ನಾನೂ ಒಬ್ಬ ದಕ್ಷಿಣ ಭಾಗದ ಸಂಸದ. ದೇಶದ ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆ. ದೇಶ ವಿಭಜಿಸುವ ಹೇಳಿಕೆ ನೀಡಿದವರಿಗೆ ತಕ್ಕ ಶಾಸ್ತಿ ಅಗಲೇಬೇಕು ಎಂದು ಸಚಿವ ಜೋಶಿ ಪ್ರತಿಪಾದಿಸಿದರು.

ದೇಶ ಒಡೆಯುವ ಕೂಗು; ಡಿ.ಕೆ.ಸುರೇಶ್‌ರನ್ನು ಕಾಂಗ್ರೆಸ್‌ ವಜಾಗೊಳಿಸಲಿ ಎಂದ ಪ್ರಲ್ಹಾದ್‌ ಜೋಶಿ

Pralhad Joshi

ಹುಬ್ಬಳ್ಳಿ: ಒಂದು ಕಡೆ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡುತ್ತಾರೆ. ಮತ್ತೊಂದೆಡೆ ಸಂಸದ ಡಿ.ಕೆ. ಸುರೇಶ್‌ ಭಾರತ ತುಂಡರಿಸುವ ಮಾತು ಹೇಳುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಮಾನ ಮಾರ್ಯಾದೆ ಇದ್ದರೆ ಕೂಡಲೇ ಸಂಸದ ಸುರೇಶ್‌ರನ್ನು ವಜಾಗೊಳಿಸಬೇಕು. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದ್ದರೆ ಮೊದಲು ಅವರನ್ನು ಪಕ್ಷದಿಂದ ಹೊರ ಹಾಕಲಿ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.

ಸಂಸದ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಜೋಶಿ ಅವರು, ಡಿ.ಕೆ. ಸುರೇಶ್ ಅವರ ದೇಶ ವಿಭಜನೆ ಹೇಳಿಕೆ ಸಂಬಂಧ ಕಾನೂನಾತ್ಮಕ ಕ್ರಮ ಜರುಗಿಸಬೇಕು. ಇವರದ್ದು ದೇಶ ದ್ರೋಹದ ಮನಸ್ಥಿತಿ. ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ಬಣ್ಣಿಸಿದ ಕವಿ ಕುವೆಂಪುಗೆ ಮಾಡಿದ ಅವಮಾನವಾಗಿದೆ ಎಂದು ಜೋಶಿ ಖಂಡಿಸಿದ್ದಾರೆ.

ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುಳಿತು ದೇಶ ಒಡೆಯುವ ಹುನ್ನಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನೈತಿಕತೆ ಇದ್ದರೆ ಮೊದಲು ಅವರನ್ನು ಪಕ್ಷದಿಂದ ವಜಾಗೊಳಿಸಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ | Budget 2024: ಲೋಕಸಭೆ ಚುನಾವಣೆ ಪ್ರೇರಿತ ಅಲ್ಲ; ಅಭಿವೃದ್ಧಿಪರ ಅಭೂತಪೂರ್ವ ಬಜೆಟ್ ಎಂದ ಜೋಶಿ

ನಾವು ಹೆಚ್ಚು ಕಾಲ ವಿರೋಧ ಪಕ್ಷದಲ್ಲಿ ಇದ್ದೆವು, ನಾವು ಎಂದೂ ದೇಶ ಒಡೆಯುವ ಮಾತು ಆಡಿಲ್ಲ. ಸುರೇಶ್‌ ಅವರ ದೇಶದ್ರೋಹದ ಹೇಳಿಕೆ ವಿರುದ್ಧ ಕಾನೂನು ಕ್ರಮ ಆಗಬೇಕು. ಕಾಂಗ್ರೆಸ್ ಪಕ್ಷಕ್ಕೆ ಭಾರತ ದೇಶದ ಭಾವನಾತ್ಮಕ ಸಂಬಂಧ ಇಲ್ಲ ಎಂದು ಹೇಳಿದರು.

ಮಾಗಡಿ ಶಾಸಕ ಬಾಲಕೃಷ್ಣ ಗ್ಯಾರಂಟಿಗಳ ರದ್ದು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಗ್ಯಾರಂಟಿಗಳೇ ಬೋಗಸ್. ಮೋದಿ ಗ್ಯಾರಂಟಿ ಎಲ್ಲಾ ಗ್ಯಾರಂಟಿಗಳಿಗಿಂತ ಉತ್ತಮ. ಬಡವರನ್ನು ಬಡತನದಿಂದ ಮೇಲೆ ಎತ್ತಿದವರು ಮೋದಿ, ಆದರೆ, ಕಾಂಗ್ರೆಸ್ ಗ್ಯಾರಂಟಿ ಚುನಾವಣೆಗೆ ಮಾತ್ರ ಎಂದು ವ್ಯಂಗ್ಯವಾಡಿದರು.

ನಾವು ಚುನಾವಣೆಗಾಗಿ ಬೇಕಾದ ರೀತಿಯಲ್ಲಿ ಬಜೆಟ್ ಮಂಡನೆ ಮಾಡಬಹುದಾಗಿತ್ತು. ದೇಶದ ಆರ್ಥಿಕ, ಭದ್ರತೆ ಹಿತದೃಷ್ಟಿಯಿಂದ ಬಜೆಟ್ ಮಂಡನೆ ಮಾಡಿದ್ದೇವೆ. ಇದು ಅತ್ಯಂತ ಸಮತೋಲನದ ಬಜೆಟ್ ಮಂಡನೆ ಆಗಿದೆ. ಕೃಷಿ ಮೀನುಗಾರಿಕೆ ಸೇರಿದಂತೆ ಎಲ್ಲಾ ವಲಯಕ್ಕೆ ಆದ್ಯತೆ ನೀಡಲಾಗಿದೆ. ದೊಡ್ಡ ರೀತಿಯಲ್ಲಿ ಮೂಲ ಸೌಕರ್ಯ ನೀಡುವ ದೃಷ್ಟಿಯಿಂದ ಒತ್ತು ಕೊಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ತೆರಿಗೆ ಸೋರಿಕೆಗೆ ಕಡಿವಾಣ ಹಾಕಲಾಗಿದೆ, ಪರಿಸರ ಕಾಪಾಡಲು ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | Budget 2024: ಕೃಷಿ, ಹೂಡಿಕೆ, ಉದ್ಯೋಗ ಸೃಷ್ಟಿಗೆ ಇದು ಬೆಸ್ಟ್‌ ಬಜೆಟ್‌: ಎಚ್.ಡಿ. ಕುಮಾರಸ್ವಾಮಿ

ಬಜೆಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಒತ್ತು, ಮೂರು ಪ್ರಮುಖ ರೈಲ್ವೆ ಯೋಜನೆಗೆ ಕಾರಿಡಾರ್ ನಿರ್ಮಾಣ, ದೇಶದ ಖನಿಜ ಸಂಪತ್ತಿಗಾಗಿ ಮೈನಿಂಗ್ ಕಾರಿಡಾರ್ ನಿರ್ಮಾಣದ ಉದ್ದೇಶ, ಹೊಸ ಹೆದ್ದಾರಿ ನಿರ್ಮಾಣಕ್ಕೆ ನೀಲ ನಕ್ಷೆ, ಮಹಿಳಾ ಮೀಸಲಾತಿಗೆ ಒತ್ತು, ಹಸಿರು ಶಕ್ತಿ ಯೋಜನೆ ಜಾರಿ ಘೋಷಣೆ ಆಗಿದ್ದು, ಅಂಗನವಾಡಿ ಕಾರ್ಯಕರ್ತರನ್ನು ಆಯುಷ್ಮಾನ್ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯ ವಿಶ್ವಾಸವಿದೆ, ಆಗ ದೊಡ್ಡ ಕೊಡುಗೆ ಕೊಡಲಾಗುವುದು ಎಂದು ಹೇಳಿದರು.

Exit mobile version