Site icon Vistara News

Bharat Jodo Yatra: ಸಹೋದರಿ ಪ್ರಿಯಾಂಕಾ, ಕಾರ್ಯಕರ್ತರ ಜತೆ ರಾಹುಲ್ ಗಾಂಧಿ ಹಿಮ ಎರಚಾಟ! Video Viral

Rahul Gandhi snowing with sister Priyanka and party men at Bharat jodo yatra and Video viral

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ(Bharat Jodo Yatra) ಕಾಶ್ಮೀರದ ಶ್ರೀನಗರದಲ್ಲಿ ಜ.30, ಸೋಮವಾರ ಅಂತ್ಯ ಕಾಣಲಿದೆ. ಏತನ್ಮಧ್ಯೆ, ರಾಹುಲ್ ಗಾಂಧಿ ಅವರು ಶ್ರೀನಗರದಲ್ಲಿ ಸೋಮವಾರ ಬೆಳಗ್ಗೆ ಹಿಮವನ್ನು ತಮ್ಮ ಸಹೋದರಿ ಪ್ರಿಯಾಂಕಾ ಹಾಗೂ ಪಕ್ಷದ ಕಾರ್ಯಕರ್ತರಿಗೆ ಎಸೆದು, ಸಂತೋಷದಿಂದ ನಲಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ(Video Viral).

ಏನಿದೆ ವಿಡಿಯೋದಲ್ಲಿ?

ರಾಹುಲ್ ಗಾಂಧಿ ಅವರು ತಮ್ಮ ಕೈಗಳಲ್ಲಿ ಹಿಮವನ್ನು ಹಿಡಿದುಕೊಂಡು ಪ್ರಿಯಾಂಕಾ ಅವರತ್ತ ಬಂದು, ಅವರ ತಲೆ ಮೇಲೆ ಸುರಿಯುತ್ತಾರೆ. ಆಗ, ಪ್ರಿಯಾಂಕಾ ಕೂಡ ಹಿಮವನ್ನು ತಮ್ಮ ಸಹೋದರ ರಾಹುಲ್ ಮೇಲೆ ಹಾಕುತ್ತಾರೆ. ಬಳಿಕ ರಾಹುಲ್ ಅವರು ಮತ್ತಷ್ಟು ಹಿಮವನ್ನು ತೆಗೆದುಕೊಂಡು ಪಕ್ಕದಲ್ಲೇ ಇದ್ದ ಪಕ್ಷದ ಕಾರ್ಯಕರ್ತರು, ನಾಯಕರ ಮೇಲೆ ಎಸೆಯುತ್ತಾರೆ. ಇದೇ ರೀತಿ ಎಲ್ಲರೂ ಹಿಮವನ್ನು ಎರಚುವ ಮೂಲಕ ನಕ್ಕು ನಲಿಯುತ್ತಾರೆ. ಕೊನೆಗೆ, ಪ್ರಿಯಾಂಕಾ ಅವರು ರಾಹುಲ್ ಅವರನ್ನು ತಬ್ಬಿಕೊಳ್ಳುತ್ತಾರೆ. ಈ ವಿಡಿಯೋವನ್ನು ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಷೇರ್ ಮಾಡಿಕೊಂಡಿದ್ದು, Sheen Mubarak! A beautiful last morning at the #BharatJodoYatra campsite, in Srinagar ಎಂದು ಬರೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಅವರ, ವಿಡಿಯೋ ಸಹಿತ ಟ್ವೀಟ್ ಸಖತ್ ವೈರಲ್ ಆಗಿದೆ. ಬಹಳಷ್ಟು ಜನರು ರಾಹುಲ್ ಅವರ ಈ ಮಕ್ಕಳಾಟವನ್ನು ಮೆಚ್ಚಿದ್ದಾರೆ. ಯಾವುದೇ ಕಪಟವಿಲ್ಲದೇ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಮತ್ತೆ ಕೆಲವು ಟೀಕಿಸಿದ್ದಾರೆ. 3000 ರಿಟ್ವೀಟ್ ಆಗಿದ್ದು, ಸಾವಿರಾರು ಜನರು ಲೈಕ್ಸ್ ಮಾಡಿದ್ದಾರೆ.

ಶ್ರೀನಗರದಲ್ಲಿ ಇಂದು ಯಾತ್ರೆ ಅಂತ್ಯ

2022ರ ಸೆಪ್ಟೆಂಬರ್ 7ರಿಂದ ಆರಂಭವಾಗಿದ್ದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ((Bharat Jodo Yatra)) 2023ರ ಜನವರಿ 23ರಂದು ಸಮಾರೋಪಗೊಳ್ಳಲಿದೆ. ರಾಹುಲ್ ಗಾಂಧಿ(Rahul Gandhi) ನೇತೃತ್ವದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಎಲ್ಲ ನಾಯಕರು ಭಾಗವಹಿಸುತ್ತಿದ್ದಾರೆ. ಅದರಂತೆ, ಕರ್ನಾಟಕದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಅವರೂ ಪಾಲ್ಗೊಳ್ಳಬೇಕಿತ್ತು. ಆದರೆ, ಹವಾಮಾನ ವೈಫರೀತ್ಯದ ಪರಿಣಾಮ ಅವರು ಕಾಶ್ಮೀರದ ಶ್ರೀನಗರಕ್ಕೆ ತೆರಳಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ದೆಹಲಿಯಿಂದ ಕಾಶ್ಮೀರಕ್ಕೆ ವಿಮಾನ ಸಂಚಾರಗಳನ್ನು ರದ್ದುಪಡಿಸಲಾಗಿದೆ.

ರಾಹುಲ್ ಗಾಂಧಿ ನೇತೃತ್ವದ ಈ ಪಾದ ಯಾತ್ರೆ ಸುಮಾರು 5 ತಿಂಗಳಿಂದ ನಡೆದಿತ್ತು. ದೇಶದುದ್ದಕ್ಕೂ ಸಂಚರಿಸಿದ ಭಾರತ್ ಯಾತ್ರೆ, ದೇಶವನ್ನು ಪ್ರೀತಿ, ವಿಶ್ವಾಸಗಳಿಂದ ಜೋಡಿಸುವ ಪ್ರಯತ್ನವಾಗಿ ಕಾಂಗ್ರೆಸ್ ಹಮ್ಮಿಕೊಂಡಿತ್ತು. ಈ ಯಾತ್ರೆಯ ಹಿಂದೆ ರಾಜಕಾರಣ ಇಲ್ಲ ಎಂದು ಹೇಳಿತ್ತಾದರೂ, ಅಂತಿಮವಾಗಿ ರಾಹುಲ್ ಗಾಂಧಿ ಅವರಿಗೆ ನಾಯಕತ್ವದ ಇಮೇಜ್ ತಂದು ಕೊಡುವ ಪ್ರಯತ್ನ ಈ ಯಾತ್ರೆಯ ಹಿಂದೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Viral Video: ಕಾಶ್ಮೀರದ ಚಳಿಗೆ ನಡುಗಿದ ರಾಹುಲ್ ಗಾಂಧಿ; ಕೊನೆಗೂ ಜಾಕೆಟ್​ ಧರಿಸಿಯೇ ಪಾದಯಾತ್ರೆ ನಡೆಸಿದರು!

ಟಿಡಿಪಿ, ಟಿಎಂಸಿ ತಿರಸ್ಕಾರ

ಭಾರತ್ ಜೋಡೋ ಯಾತ್ರೆ ಸಮಾರೋಪ ಸಮಾರಂಭದಲ್ಲ ಪಾಲ್ಗೊಳ್ಳಲು 21 ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಲಾಗಿತ್ತು. ಈ ಪೈಕಿ ತೆಲುಗು ದೇಶಂ ಪಕ್ಷ(ಟಿಡಿಪಿ) ಮತ್ತು ತೃಣಮೂಲ ಕಾಂಗ್ರೆಸ್ ಕಾಂಗ್ರೆಸ್ ಆಹ್ವಾನವನ್ನು ತಿರಸ್ಕರಿಸಿವೆ. ಒಟ್ಟು 12 ಪಕ್ಷಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಜತೆಗೆ, ಉಳಿದ ರಾಜಕೀಯ ಪಕ್ಷಗಳ ಬೆಂಬಲಿಸಿ ಪತ್ರ ಬರೆದಿವೆ.

Exit mobile version