Site icon Vistara News

Raja Singh Row | ಬೂದಿಮುಚ್ಚಿದ ಕೆಂಡದಂತಿದೆ ಹೈದ್ರಾಬಾದ್, ಕೆಲವೆಡೆ ಶಾಲೆಗಳಿಗೆ ರಜೆ, ಅಂಗಡಿಗಳು ಬಂದ್!

Hyderabad

ಹೈದ್ರಾಬಾದ್: ಪ್ರವಾದಿ ವಿರುದ್ಧ ಬಿಜೆಪಿಯಿಂದ ಅಮಾನತುಗೊಂಡಿರುವ ಶಾಸಕ ರಾಜಾ ಸಿಂಗ್ (Raja Singh Row) ನೀಡಿದ್ದ ಅವಮಾನಕರ ಹೇಳಿಕೆ ಪ್ರಕರಣವು ಹೈದ್ರಾಬಾದ್‌ನಲ್ಲಿ ಬೂದಿ ಮುಚ್ಚಿದ ಕೆಂಡಂತಿದೆ. ಈಗಲೂ ತ್ವೇಷಮಯ ವಾತಾವರಣ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಹೈದ್ರಾಬಾದ್‌ನ ಆಶಾ ಟಾಕೀಸ್, ಮೊಘಲ್ಪುರ, ಲಾಲ್ ದರ್ವಾಜಾ, ಮದೀನಾ, ಶಾಲಿಬಂಡಾ, ಫತೇದರ್ವಾಜ್ಜಾ ಪ್ರದೇಶಗಳಲ್ಲಿ ಬಂದ್ ಮಾಡಲಾಗಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿನ ಪೆಟ್ರೋಲ್ ಪಂಪ್‌ಗಳು ಮತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಜತೆಗೆ, ಶಾಲಿಬಂಡಾ ಮತ್ತು ಹೈದ್ರಾಬಾದ್‌ನ ಓಲ್ಡ್ ಸಿಟಿಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ.

ತಮ್ಮ ಮಾತುಗಳಿಂದಲೇ ಸದಾ ವಿವಾದಕ್ಕೆ ಒಳಗಾಗುವ ಶಾಸಕ ರಾಜಾ ಸಿಂಗ್ ಬಿಜೆಪಿ ಪಕ್ಷದ ಶಾಸಕರಾಗಿದ್ದರು. ಸ್ಟ್ಯಾಂಡ್‌ಅಪ್ ಕಮೆಡಿಯನ್ ಮುನಾವರ್ ಫಾರೂಕಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜಾ ಸಿಂಗ್ ಅವರು ಪ್ರವಾದಿ ಮಹಮ್ಮದ ಅವರ ವಿರುದ್ಧ ಅಪಮಾನಕರ ಹೇಳಿಕೆಯನ್ನು ನೀಡಿದ್ದರು. ಇದು ಹೈದ್ರಾಬಾದ್‌ನಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಬಳಿಕ ಬಿಜೆಪಿಯು ರಾಜಾ ಸಿಂಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.

ಏತನ್ಮಧ್ಯೆ, ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೈದ್ರಾಬಾದ್‌ನ ಚಾರ್‌ಮಿನಾರ್ ಪ್ರದೇಶದಲ್ಲಿ ಪೊಲೀಸರು ಭಾರಿ ಬಂದೋಬಸ್ತ್ ಕೈಗೊಂಡಿದ್ದಾರೆ. ಇದೇ ವೇಳೆ, ಪೊಲೀಸರ ವಿರುದ್ಧ ಕೆಂಡ ಕಾರಿರುವ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರು, “”ಪೊಲೀಸರು ಪ್ರತಿಭಟನಾಕಾರರ ಮನೆಗಳಿಗೆ ನುಗ್ಗಿ, ಬಂಧಿಸಿದ್ದಾರೆ. ಐವರು ಯುವಕರನ್ನು ಬಂಧಿಸಿದ್ದಾರೆ. ಇದು ಸ್ವೀಕಾರ್ಹವಲ್ಲ” ಎಂದು ಟ್ವೀಟ್ ಮಾಡಿದ್ದಾರೆ. “”ಇಂದಿನ ಎಲ್ಲ ಪರಿಸ್ಥಿತಿಗೆ ರಾಜಾ ಸಿಂಗ್ ಅವರ ದ್ವೇಷಭಾಷಣವೇ ಕಾರಣ. ಕೂಡಲೇ ಅವರನ್ನು ಬಂಧಿಸಬೇಕು. ಜತೆಗೇ ಶಾಂತಿಯನ್ನು ಕಾಪಾಡುವಂತೆ ಜನರಲ್ಲಿ ಮಾಡಿಕೊಳ್ಳುತ್ತೇನೆ” ಎಂದು ಟ್ವೀಟ್‌ನಲ್ಲಿ ಅವರು ತಿಳಿಸಿದ್ದಾರೆ.

ರಾಜಾ ಸಿಂಗ್ ವಿರುದ್ದ ಇನ್ನಷ್ಟು ಕೇಸ್
ತಮ್ಮ ದ್ವೇಷದ ಮಾತುಗಳ ಮೂಲಕವೇ ವಿವಾದಗಳನ್ನು ಸೃಷ್ಟಿಸುವ ಶಾಸಕ ರಾಜಾ ಸಿಂಗ್ ವಿರುದ್ಧ ಮತ್ತಷ್ಟು ಪ್ರಕರಣಗಳು ದಾಖಲಾಗಿವೆ. ಪ್ರವಾದಿ ವಿರುದ್ಧ ಅವಮಾನಕರ ಹೇಳಿಕೆಯನ್ನು ಖಂಡಿಸಿ ಮತ್ತು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಹೈದ್ರಾಬಾದ್‌ನ ನಾಂಪಲ್ಲಿ, ಮಲಕ್‌ಪೇಟ್, ಮಂಗಳ್ಹಾಟ್, ಜೀಡಿಮೆಟ್ಲಾ, ವನಸ್ಥಲಿಪುರಂ ಮತ್ತು ಡಬೀರ್‌ಪುರ ಪೊಲೀಸ್ ಸ್ಟೇಷನ್‌ಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಮುದಾಯಗಳ ಮಧ್ಯೆ ವೈರತ್ವ ಭಾವನೆ ಬಿತ್ತಿದ ಆರೋಪವನ್ನು ರಾಜಾ ಸಿಂಗ್ ವಿರುದ್ಧ ಹೊರಿಸಲಾಗಿದೆ.

ರಾಜಾ ಸಿಂಗ್ ವಿರುದ್ಧ ಹೈದ್ರಾಬಾದ್‌ನಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ತೆಲಂಗಾಣ ಪೊಲೀಸರು ಭಾರೀ ಬಂದೋಬಸ್ತ್ ಕೈಗೊಂಡಿದ್ದಾರೆ.

ಇದನ್ನೂ ಓದಿ | Prophet Remarks | ರಾಜಾ ಸಿಂಗ್​ ಕಂಡಲ್ಲಿ ಹೊಡೆಯಿರಿ ಎಂದು ಮುಸ್ಲಿಮರಿಗೆ ಕರೆಕೊಟ್ಟ ಕಾಂಗ್ರೆಸ್​ ಶಾಸಕ

Exit mobile version