Site icon Vistara News

Ayodhya Ram Mandir: ಮಂದಿರವನ್ನು ಪ್ರವೇಶಿಸಿದ ರಾಮ ಲಲ್ಲಾ ವಿಗ್ರಹ, ಜ.22ಕ್ಕೆ ಪ್ರತಿಷ್ಠಾಪನೆ

Ram lalla statue enters Ayodhya Ram Mandir

ಅಯೋಧ್ಯೆ: ಜನವರಿ 22ರಂದು ನಡೆಯಲಿರುವ ರಾಮ ಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆಯ (Pran Pratishta) ಧಾರ್ಮಿಕ ವಿಧಿ ವಿಧಾನಗಳು ಜನವರಿ 16ರಿಂದಲೇ ಆರಂಭವಾಗಿದ್ದು, ಜ.17, ಬುಧವಾರ ಸಂಜೆ ರಾಮ ಲಲ್ಲಾ (Ram Lalla Statue) ವಿಗ್ರಹವನ್ನು ರಾಮ ಮಂದಿರಕ್ಕೆ ತರಲಾಯಿತು. ಭಗವಾನ್ ರಾಮನ ವಿಗ್ರಹ ಇರುವ ಟ್ರಕ್‌ ರಾಮ ಮಂದಿರ ಆವರಣಕ್ಕೆ ಬಂತು. ಈ ವೇಳೆ ಜಯ ಶ್ರೀ ರಾಮ್ ಘೋಷಣೆಗಳು ಮುಗಿಲು ಮುಟ್ಟಿದವು. ಬಳಿಕ ವಿಗ್ರಹವನ್ನು ಮಂದಿರದೊಳಗೆ ಒಯ್ಯಲಾಯಿತು.

ಸುಮಾರು 4.3 ಅಡಿ ಎತ್ತರ ರಾಮ ಲಲ್ಲಾ ವಿಗ್ರಹವನ್ನು ಜ.22, ಸೋಮವಾರ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಗುರುವಾರ ಈ ವಿಗ್ರಹವನ್ನು ಗರ್ಭ ಗುಡಿಗೆ ಧಾರ್ಮಿಕ ವಿಧಾನಗಳೊಂದಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಗ್ರಹ ಪ್ರತಿಷ್ಠಾಪನೆಯಾಗುವ ಪೀಠಕ್ಕೆ ಬುಧವಾರ ಪೂಜೆಗಳನ್ನು ಮಾಡಲಾಯಿತು.

ಈ ವಿಗ್ರಹವನ್ನು ರಾಮ ಮಂದಿರಕ್ಕೆ ತರಲು ಮಂಗಳವಾರ ರಾತ್ರಿಯಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹೂವಿನಿಂದ ಅಲಂಕೃತವಾಗಿರುವ ಟ್ರಕ್‌ಗೆ ಕ್ರೇನ್ ಮೂಲಕ ಇರಿಸಲಾಯಿತು. ಸುಮಾರು 150 ಕೆಜಿ ಇರುವ ಈ ವಿಗ್ರಹವನ್ನು ಹೊತ್ತ ಟ್ರಕ್ ಬುಧವಾರ ಸಂಜೆ ರಾಮ ಮಂದಿರ ಆವರಣವನ್ನು ಪ್ರವೇಶಿಸಿತು.

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿಯೇ ಮುಖ್ಯ ‘ಯಜಮಾನ’

ರಾಮ ಲಲ್ಲಾ (Ram Lalla) ಪ್ರಾಣ ಪ್ರತಿಷ್ಠಾಪನೆಗೆ (Pran Pratishta) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೇ ಪ್ರಧಾನ ಯಜಮಾನರಾಗಿರುತ್ತಾರೆ (Main Yajman) ಎಂದು ಕಾಶಿಯ ಹಿರಿಯ ವೈದಿಕ ಕರ್ಮಕಾಂಡ ವಿದ್ವಾಂಸ, ಪಂಡಿತ ಲಕ್ಷ್ಮೀಕಾಂತ್ ಮಥುರಾನಾಥ ದೀಕ್ಷಿತ್ ಅವರು ಹೇಳಿದ್ದಾರೆ. ಇವರು ರಾಮಲಲ್ಲಾ ವಿಗ್ರಹವನ್ನು ಪ್ರಾಣ ಪ್ರತಿಷ್ಠಾಪನೆಯ ವೈದಿಕ ವಿದ್ವಾಂಸರು ಮತ್ತು ಪುರೋಹಿತರ ತಂಡವನ್ನು ಮುನ್ನಡೆಸುತ್ತಿದ್ದಾರೆ.

ದೀಕ್ಷಿತ್ ಅವರು ‘ಪ್ರಾಣ ಪ್ರತಿಷ್ಠಾಪನೆ’ಯ ಪ್ರಧಾನ ಆಚಾರ್ಯರಾಗಿದ್ದಾರೆ. ಕಾಶಿ ವಿದ್ವಾಂಸ ಮತ್ತು ಪುರೋಹಿತ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು 121 ಆಚಾರ್ಯರ ತಂಡದೊಂದಿಗೆ ನಡೆಸುವ ವಿಧಿವಿಧಾನಗಳ ಮೇಲ್ವಿಚಾರಣೆ ಮತ್ತು ಸಮನ್ವಯತೆಯನ್ನು ನೋಡಿಕೊಳ್ಳಲಿದ್ದಾರೆ.

ಮಂಗಳವಾರದಿಂದ ಆರಂಭವಾದ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಪ್ರಧಾನಮಂತ್ರಿ ಅವರು ಲಭ್ಯವಾಗುವುದಿಲ್ಲ. ಹಾಗಾಗಿ, ಲಕ್ಷ್ಮೀಕಾಂತ್ ಮಥುರಾನಾಥ ದೀಕ್ಷಿತ್ ಅವರು ಯಜಮಾನನಂತೆ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.

86 ವಯಸ್ಸಿನ ದೀಕ್ಷಿತ್ ಅವರು ಮಂಗಳವಾರ ತಮ್ಮ ನಿವಾಸದಿಂದ ಹೊರಬರುತ್ತಿದ್ದಂತೆ ಅವರ ಮೇಲೆ ಜನರು ಪುಷ್ಪವೃಷ್ಟಿ ಮಾಡಿದರು. ಗೋಲ್ಘರ್ ತಲುಪುವವರೆಗೂ ಜನರು ಅವರ ಮೇಲೆ ಹೂವು ಸುರಿದರು. ನಗರ ದಕ್ಷಿಣದ ಬಿಜೆಪಿ ಶಾಸಕ ನೀಲಕಂಠ ತಿವಾರಿ ನೂರಾರು ಜನರೊಂದಿಗೆ ‘ಹರ್ ಹರ್ ಮಹಾದೇವ್’ ಮತ್ತು ‘ಜೈ ಶ್ರೀ ರಾಮ್’ ಘೋಷಣೆಗಳು ಕೂಗುತ್ತಾ ಮತ್ತು ಶಂಖ ಊದುವ ನಡುವೆ ಅವರನ್ನು ಬೀಳ್ಕೊಟ್ಟರು.

ಈ ಸುದ್ದಿಯನ್ನೂ ಓದಿ: Ram Mandir: ದೇವರನ್ನು ಆಟಿಕೆ ಎನ್ನುವ ಕಾಂಗ್ರೆಸ್‌ಗೆ ಈ ಹೇಳಿಕೆ ಅವನತಿಯ ಅಡಿಗಲ್ಲು: ಆರ್‌. ಅಶೋಕ್‌

Exit mobile version