Site icon Vistara News

Ramoji Rao passed away: ಮಾಧ್ಯಮ ಲೋಕದ ದಿಗ್ಗಜ ಇನ್ನಿಲ್ಲ; ರಾಮೋಜಿ ರಾವ್ ವಿಧಿವಶ

Ramoji Rao passed away

ಹೈದರಾಬಾದ್‌: ಮಾಧ್ಯಮ ಲೋಕದ ದಿಗ್ಗಜ, ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕ ರಾಮೋಜಿ ರಾವ್(Ramoji Rao passed away) ಅವರು ಇಂದು ವಿಧಿವಶರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್‌(Hyderabad)ನ ಸ್ಟಾರ್ ಆಸ್ಪತ್ರೆಯಲ್ಲಿ ಬೆಳಗಿನ ಜಾವ 3:45ಕ್ಕೆ ಕೊನೆಯುಸಿರೆಳೆದರು. ಇದೇ ತಿಂಗಳ 5ರಂದು ಹೃದಯ ಸಂಬಂಧಿ ಸಮಸ್ಯೆಯಿಂದ ಉಸಿರಾಟಕ್ಕೆ ತೀವ್ರ ತೊಂದರೆಯಾಗಿತ್ತು.ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯಕೀಯ ಪರೀಕ್ಷೆಯ ನಂತರ ಹೃದಯ ಸ್ಟೆಂಟ್ ಹಾಕಲಾಯಿತು. ಬಳಿಕ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಮುಂಜಾನೆ ಸಾವನ್ನಪ್ಪಿದ್ದಾರೆ. ಸದ್ಯ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇರುವ ಅವರ ಮನೆಗೆ ರವಾನೆ ಮಾಡಲಾಗಿದೆ. ರಾಮೋಜಿ ರಾವ್ ಅವರ ನಿವಾಸದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ರಾಮೋಜಿ ರಾವ್ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.

ರಾಮೋಜಿ ರಾವ್ ಅವರು ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಬಳಿಕ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಕ್ಯಾನ್ಸರ್‌ಗಿಂತ ರಾಮೋಜಿ ರಾವ್ ಅವರು ಗುಣಮುಖರಾಗಿದ್ದರು ಎಂದು ಕುಟುಂಬ ವರ್ಗದ ಮೂಲಗಳು ಮಾಹಿತಿ ನೀಡಿವೆ. ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಅವರು, ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಮತ್ತು ಫಿಲ್ಮ್ ಸ್ಟುಡಿಯೋ, ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿದರು. ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್‌ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌ಗಳು ರಾಮೋಜಿ ರಾವ್ ಒಡೆತನದ ಕಂಪನಿಗಳಾಗಿವೆ.

ರಾಮೋಜಿ ರಾವ್ ಅವರು 1984 ರ ಸೂಪರ್‌ ಹಿಟ್‌ ರೊಮ್ಯಾಂಟಿಕ್ ಸಿನಿಮಾ ಶ್ರೀವಾರಿಕಿ ಪ್ರೇಮಲೇಖ ಚಿತ್ರದೊಂದಿಗೆ ಚಲನಚಿತ್ರ ನಿರ್ಮಾಪಕರಾಗಿ ಸಿನಿರಂಗಕ್ಕೆ ಕಾಲಿಟ್ಟರು. ಅವರು ಮಯೂರಿ, ಪ್ರತಿಭಟನಾ, ಮೌನ ಪೋರಾಟಂ, ಮನಸು ಮಮತಾ, ಚಿತ್ರಂ, ಮತ್ತು ನುವ್ವೆ ಕಾವಲಿ ಮುಂತಾದ ಹಲವಾರು ಶ್ರೇಷ್ಠ ಚಿತ್ರಗಳನ್ನು ನಿರ್ಮಿಸಿದರು. ಅವರ ಚಲನಚಿತ್ರಗಳು ಪ್ರತಿಷ್ಠಿತ ನಂದಿ, ಫಿಲ್ಮ್‌ಫೇರ್ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹಲವಾರು ಬಾರಿ ಗೆದ್ದವು.

ಭಾರತ ಸರ್ಕಾರವು ರಾಮೋಜಿ ರಾವ್ ಅವರಿಗೆ ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅವರ ಅಮೂಲ್ಯ ಕೊಡುಗೆಗಳಿಗಾಗಿ 2016 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ನೀಡಿ ಗೌರವಿಸಿದೆ.

ಇದನ್ನೂ ಓದಿ:Viral Video: ಮಕ್ಕಳು ಆಟವಾಡ್ತಿದ್ದ ವಾಟರ್‌ ಪಾರ್ಕ್‌ಗೆ ಏಕಾಏಕಿ ನುಗ್ಗಿದ ಬುಲ್ಡೋಜರ್‌; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ

Exit mobile version