ನವದೆಹಲಿ: ನಿರುದ್ಯೋಗಿ ಯುವಕರಿಗೆ ಸ್ವಉದ್ಯೋಗ (Self Employment) ಕೈಗೊಳ್ಳಲು ಅಸ್ಸಾಮ್ ಸರ್ಕಾರವು (Assam Government) 2 ಲಕ್ಷ ರೂ.ವರೆಗೂ ಆರ್ಥಿಕ ಸಹಾಯ (Financial Help) ಕಲ್ಪಿಸುವ ಯೋಜನೆಯನ್ನು ಜಾರಿಗೆ ತರಲು ಹೊರಟಿದೆ. ಈ ಕುರಿತು ಮಾಹಿತಿ ನೀಡಿರುವ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Assam CM Himanta Biswa Sarma) ಅವರು, ಮುಖ್ಯಮಂತ್ರಿ ಆತ್ಮ ನಿರ್ಭರ್ ಅಸ್ಸೋಮ್ ಯೋಜನೆಯನ್ನು ಸೆಪ್ಟೆಂಬರ್ 23-24ರಿಂದ ಆರಂಭಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ದಿಲ್ಲಿಯ ಅಸ್ಸಾಂ ಹೌಸ್ನ ಕಾನ್ಫರೆನ್ಸ್ ಹಾಲ್ನಲ್ಲಿ ಬುಧವಾರ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಶರ್ಮಾ ನಡೆಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಿದರು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹೊಸ ಯೋಜನೆಯಡಿ 2 ಲಕ್ಷ ನಿರುದ್ಯೋಗಿ ಯುವಕರಿಗೆ 2 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಆ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತದೆ ಎಂದು ವಿಡಿಯೋ ಕಾನ್ಫರೆನ್ಸ್ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು ಎಂದು ಅಸ್ಸಾಮ್ ಸರ್ಕಾರವು ತನ್ನ ಅಧಿಕೃತ ಹೇಳಿಕೆಯಲ್ಲಿ ಹೇಳಿದೆ.
ಈ ಸುದ್ದಿಯನ್ನೂ ಓದಿ: Congress Guarantee: ಯುವಕರಿಗೆ ಕಾಂಗ್ರೆಸ್ನ 4 ನೇ ಗ್ಯಾರಂಟಿ: ಪದವೀಧರರಿಗೆ ʼಯುವ ನಿಧಿʼ; ಮಾಸಿಕ 3 ಸಾವಿರ ರೂ.
ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಆಯೋಜಿಸಿದ್ದ ಈ ಸಭೆಯಲ್ಲಿ ರಾಜ್ಯ ಸಭೆ ಸಂಸದ ಪಬಿತ್ರಾ ಮಾರ್ಗೇರಿಟಾ, ಅಸ್ಸಾಮ್ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ, ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ರವಿ ಕೋಟಾ, ರೆಸಿಡೆಂಟ್ ಕಮಿಷನರ್ ಎಂ ಎಂಸ್ ಮಣಿವಣ್ಣನ್ ಅವರು ಭಾಗಿಯಾಗಿದ್ದರು. ಈ ಸಭೆಯು ಸುಮಾರು 40 ನಿಮಿಷಗಳ ಕಾಲ ನಡೆಯಿತು.
ಕರ್ನಾಟಕದಲ್ಲೂ ಯುವನಿಧಿ ಹೆಸರಲ್ಲಿ ನಿರುದ್ಯೋಗ ಯುವಕರಿಗೆ ಮಾಸಿಕ ಆರ್ಥಿಕ ನೆರವು ನೀಡಲಾಗುತ್ತದೆ. ಫಲಾನುಭವಿಗೆ ಉದ್ಯೋಗ ಸಿಗೋವರೆಗೆ ಅಥವಾ ಮೂರು ವರ್ಷಗಳ ಕಾಲ ನೆರವು ದೊರೆಯುತ್ತದೆ. ಅಂಥದ್ದೇ ಯೋಜನೆಯನ್ನು ಸ್ವಲ್ಪ ಭಿನ್ನವಾಗಿ ಅಸ್ಸಾಮ್ ಸರ್ಕಾರವು ಈಗ ಜಾರಿ ಮಾಡಲು ಹೊರಟಿದೆ.