Site icon Vistara News

Shiv Pratap Yadav: ಸಮಾಜವಾದಿ ಪಕ್ಷದ ಶಾಸಕ ಶಿವ ಪ್ರತಾಪ್‌ ನಿಧನ; ಯೋಗಿ ಸಂತಾಪ

MLA Shiv Pratap Yadav

Samajwadi Party sitting MLA Shiv Pratap Yadav passes away; CM Yogi, Akhilesh express condolences

ಲಖನೌ: ಸಮಾಜವಾದಿ ಪಕ್ಷದ (Samajwadi Party) ನಾಯಕ, ಹಾಲಿ ಶಾಸಕ ಡಾ. ಶಿವಪ್ರತಾಪ್‌ ಯಾದವ್‌ (74) (Dr Shiv Pratap Yadav) ಅವರು ಶುಕ್ರವಾರ (ಜನವರಿ 26) ನಿಧನರಾಗಿದ್ದಾರೆ. ಬಲರಾಮ್‌ಪುರ ಜಿಲ್ಲೆಯ ಗೈನ್ಸಾರಿ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಶಿವಪ್ರತಾಪ್‌ ಯಾದವ್‌ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ (Medanta Hospital) ಕೊನೆಯುಸಿರೆಳೆದಿದ್ದಾರೆ.

ಲೋಕದಳ ಪಕ್ಷದಿಂದ ರಾಜಕೀಯ ಪ್ರವೇಶಿಸಿದ ಶಿವಪ್ರಸಾದ್‌ ಯಾದವ್‌ ಅವರು ಗೈನ್ಸಾರಿಯಿಂದ ನಾಲ್ಕು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರು ಸಮಾಜವಾದಿ ಪಕ್ಷದ ಆಡಳಿತದಲ್ಲಿ ಎರಡು ಬಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮುಲಾಯಂ ಸಿಂಗ್‌ ಯಾದವ್‌ ಹಾಗೂ ಅಖಿಲೇಶ್‌ ಯಾದವ್‌ ಸರ್ಕಾರದಲ್ಲಿ ಇವರು ಸಚಿವರಾಗಿದ್ದರು. ಪೂರ್ವಜರ ಊರಾದ ಬಲರಾಮ್‌ಪುರದಲ್ಲಿ ಶನಿವಾರ (ಜನವರಿ 27) ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಸಂತಾಪ ಸೂಚಿಸಿದ ಯೋಗಿ, ಅಖಿಲೇಶ್‌ ಯಾದವ್

ಶಿವಪ್ರಸಾದ್‌ ಯಾದವ್‌ ಅವರ ನಿಧನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರು ಸಂತಾಪ ಸೂಚಿಸಿದ್ದಾರೆ. “ಡಾ. ಶಿವಪ್ರತಾಪ್‌ ಯಾದವ್‌ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ತೀವ್ರವಾಗಿ ಘಾಸಿಯಾಯಿತು. ಅವರ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಕುಟುಂಬಸ್ಥರು ಹಾಗೂ ಆತ್ಮೀಯ ಬಳಗದವರಿಗೆ ಭಗವಾನ್‌ ಶ್ರೀರಾಮನು ದುಃಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಯೋಗಿ ಆದಿತ್ಯನಾಥ್‌ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Vilasbabu Alamelakar : ಮಾಜಿ ಶಾಸಕ ವಿಲಾಸಬಾಬು ಆಲಮೇಲಕರ ನಿಧನ

“ನಮ್ಮ ಪಕ್ಷದ ಶಾಸಕ ಶಿವಪ್ರತಾಪ್‌ ಯಾದವ್‌ ಅವರ ಅಗಲಿಕೆಯು ಪಕ್ಷ ಹಾಗೂ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ” ಎಂದು ಅಖಿಲೇಶ್‌ ಯಾದವ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಬಲರಾಮ್‌ಪುರದಲ್ಲಿಯೇ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version