Site icon Vistara News

ಬಿಜೆಪಿ ಪಟ್ಟಿ ಪ್ರಕಟ: ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌ Vs ಶಶಿ ತರೂರ್?‌

Shashi Tharoor And Rajeev Chandrasekhar

Shashi Tharoor versus Rajeev Chandrasekhar in Thiruvananthapuram?

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2023) ಹಿನ್ನೆಲೆಯಲ್ಲಿ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿ (BJP Candidates List) ಬಿಡುಗಡೆ ಮಾಡಿದೆ. 195 ಅಭ್ಯರ್ಥಿಗಳಲ್ಲಿ ಹೊಸ ಮುಖಗಳಿಗೆ, ಯುವಕರಿಗೆ, ಮಹಿಳೆಯರಿಗೆ ಆದ್ಯತೆ ನೀಡಿದೆ. ಅದರಲ್ಲೂ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev Chandrashekhar) ಅವರನ್ನು ತಿರುವನಂತಪುರಂನಿಂದ ಬಿಜೆಪಿ ಕಣಕ್ಕಿಳಿಸಿದ್ದು, ಈ ಕ್ಷೇತ್ರದ ಸಂಸದರಾಗಿರುವ ಶಶಿ ತರೂರ್‌ (Shashi Tharoor) ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ಭಾರಿ ಕದನ ನಡೆಯಲಿದೆ.

ತಿರುವನಂತಪುರಂ ಕ್ಷೇತ್ರದ ಹಾಲಿ ಸಂಸದರಾಗಿರುವ ಶಶಿ ತರೂರ್‌ ಅವರು ಕ್ಷೇತ್ರದಲ್ಲಿ 2009ರಿಂದಲೂ ಸಂಸದರಾಗಿದ್ದಾರೆ. ಇವರು ಸತತವಾಗಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಹಾಗಾಗಿ, ಈ ಬಾರಿಯೂ ಕಾಂಗ್ರೆಸ್‌ ಶಶಿ ತರೂರ್‌ ಅವರಿಗೇ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಹಾಗೊಂದು ವೇಳೆ, ಶಶಿ ತರೂರ್‌ ಅವರಿಗೆ ಟಿಕೆಟ್‌ ನೀಡಿದರೆ, ಕ್ಷೇತ್ರದಲ್ಲಿ ರಾಜೀವ್‌ ಚಂದ್ರಶೇಖರ್‌ ಅವರು ಶಶಿ ತರೂರ್‌ ಅವರಿಗೆ ಸವಾಲೊಡ್ಡಲಿದ್ದಾರೆ. ಇಬ್ಬರೂ ಕೇರಳ ಮೂಲದವರಾಗಿದ್ದು, ಜಿದ್ದಾಜಿದ್ದಿನ ಕದನ ಏರ್ಪಡಲಿದೆ.

ಕಣಕ್ಕಿಳಿದಿರುವ ಗಣ್ಯರು

ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ನ ಗಾಂಧಿನಗರ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಲಖನೌ, ಸ್ಮೃತಿ ಇರಾನಿ ಅವರು ಅಮೇಥಿಯಿಂದ, ಕಿರಣ್‌ ರಿಜಿಜು ಅರುಣಾಚಲ ಪಶ್ಚಿಮ, ಪೋರ್‌ಬಂದರ್‌ನಿಂದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ, ಕೇರಳದ ಪಥಣಂತಿಟ್ಟದಿಂದ ಎ.ಕೆ. ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿ, ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ತಿರುವನಂತಪುರಂನಿಂದ ಟಿಕೆಟ್‌ ನೀಡಲಾಗಿದೆ. ಮಧ್ಯಪ್ರದೇಶದ ವಿದಿಶಾದಿಂದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಣಕ್ಕಿಳಿದಿದ್ದಾರೆ.

ಉತ್ತರ ಪ್ರದೇಶದ ಮಥುರಾದಿಂದ ಹೇಮಾಮಾಲಿನಿ, ಉನ್ನಾವೋದಿಂದ ಸಾಕ್ಷಿ ಮಹಾರಾಜ್‌, ತೆಲಂಗಾಣದ ಕರೀಂ ನಗರದಿಂದ ಬಂಡಿ ಸಂಜೀವ್‌ ಕುಮಾರ್‌, ಸಿಕಂದರಾಬಾದ್‌ ಜಿ. ಕಿಶನ್‌ ರೆಡ್ಡಿ ಅವರಿಗೂ ಬಿಜೆಪಿ ಹೈಕಮಾಂಡ್‌ ಮಣೆ ಹಾಕಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ವಿದಿಶಾದಿಂದ ಟಿಕೆಟ್‌ ನೀಡಲಾಗಿದೆ. ಇನ್ನುಳಿದಂತೆ ದೆಹಲಿ ಉತ್ತರ ಮನೋಜ್‌ ತಿವಾರಿ ಅವರು ಕಣಕ್ಕಿಳಿದಿದ್ದಾರೆ. ಉತ್ತರ ಗೋವಾದಿಂದ ಶ್ರೀಪಾದ್‌ ನಾಯಕ್‌ ಅವರು ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಸುಷ್ಮಾ ಸ್ವರಾಜ್‌ ಪುತ್ರಿಗೆ ಟಿಕೆಟ್‌

ಬಿಜೆಪಿಯು ಈ ಬಾರಿ ಹಲವು ಬದಲಾವಣೆ ಮಾಡಿದೆ. ಅದರಲ್ಲೂ, ನವದೆಹಲಿ ಕ್ಷೇತ್ರದ ಸಂಸದೆ, ಸಚಿವೆಯೂ ಆಗಿರುವ ಮೀನಾಕ್ಷಿ ಲೇಖಿ ಅವರನ್ನು ಕೈಬಿಡಲಾಗಿದೆ. ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಪುತ್ರಿ ಬನ್ಸೂರಿ ಸ್ವರಾಜ್‌ ಅವರಿಗೆ ಸ್ಪರ್ಧಿಸಲಿದ್ದಾರೆ. ಇನ್ನು ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರನ್ನು ಕೈಬಿಡಲಾಗಿದ್ದು, ಅಲೋಕ್‌ ಶರ್ಮಾ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ಇದನ್ನೂ ಓದಿ: BJP Candidates List: ಲೋಕಸಭೆಗೆ ಬಿಜೆಪಿಯ 195 ಅಭ್ಯರ್ಥಿಗಳ ಪಟ್ಟಿ ರಿಲೀಸ್; ಇವರೇ ಕ್ಯಾಂಡಿಡೇಟ್ಸ್

Exit mobile version