Site icon Vistara News

KS Chitra: ರಾಮನಾಮ ಜಪಿಸಿ ಎಂದ ಗಾಯಕಿ ಕೆ ಎಸ್ ಚಿತ್ರಾ ಪರ, ವಿರೋಧ ಚರ್ಚೆ

Singer KS Chithra urge people to chant ram naam and bjp supports it

ನವದೆಹಲಿ: ಅಯೋಧ್ಯೆ ರಾಮ ಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ (Pran Pratishta) ನಡೆಯಲಿರುವ ಜನವರಿ 22ರಂದು ರಾಮ ನಾಮ ಜಪಿಸಬೇಕು (chant Ram hymns) ಮತ್ತು ಸಂಜೆ ಮನೆಗಳಲ್ಲಿ ದೀಪ ಬೆಳಗಿಸಬೇಕು ಎಂದು ವಿಡಿಯೋ ಸಂದೇಶ ಕರೆ ನೀಡಿದ್ದ ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್‌ ಚಿತ್ರಾ (Singer KS Chitra) ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಚಿತ್ರಾ ಅವರ ಬೆಂಬಲಕ್ಕೆ ಭಾರತೀಯ ಜನತಾ ಪಾರ್ಟಿ ಧಾವಿಸಿದೆ. ಚಿತ್ರಾ ಅವರು ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿದ್ದಾರೆ.

60 ವರ್ಷದ ಗಾಯಕಿ ಕೆ ಎಸ್ ಚಿತ್ರಾ ಹಲವು ಭಾಷೆಗಳಲ್ಲಿ 25,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಮತ್ತು ತಮ್ಮ ಹಿನ್ನೆಲೆ ಗಾಯನಕ್ಕಾಗಿ 6 ಬಾರಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ರಾಮನಾಮ ಜಪಿಸುವ ಕುರಿತು ಅವರು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ. ಜನವರಿ 22ರಂದು ಜಯ ರಾಮ, ಜಯ ಜಯ ರಾಮ ಎಂದು ರಾಮ ಜಪ ಮಾಡಬೇಕು ಮತ್ತು ಐದು ಬತ್ತಿಗಳಿಂದ ದೀಪಗಳನ್ನು ಬೆಳಗಿಸಲು ಅವರು ವಿಡಿಯೋ ಮೂಲಕ ಕರೆ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪರ ವಿರೋಧಕ್ಕೆ ಕಾರಣವಾಗಿದೆ.

ಕೆ ಎಸ್ ಚಿತ್ರಾ ಅವರ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಈ ವಿಡಿಯೋ ಕಂಡು ಬರುತ್ತಿಲ್ಲ. ಆದರೂ, ಅವರ ವಿರುದ್ಧ ಕೆಲವರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ಕಾಲಕ್ಕೆ, ಕೇರಳದ ಭಾರತೀಯ ಜನತಾ ಪಾರ್ಟಿಯು ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.

ಅಲಿ ಸೈದ್ ಎಂಬ ಬಳಕೆದಾರರು, “ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣವನ್ನು ಯಾವುದೇ ಜಾತ್ಯತೀತ ವ್ಯಕ್ತಿ ಒಪ್ಪಲು ಸಾಧ್ಯವಿಲ್ಲ. ಇದು ಭಾರತದ ಹೃದಯವನ್ನು ಹೋಳು ಮಾಡಿದ ರಾಜಕೀಯವಾಗಿದೆ. ಅಲ್ಲಿ ದೇವರಿಗೆ ಸ್ಥಳವಿಲ್ಲ. ಇದು ಸಂಘಪರಿವಾರದ ರಾಜಕೀಯಕ್ಕೆ ಮಾತ್ರ ಸ್ಥಳವಾಗಿದೆ. ಇದನ್ನು ಚಿತ್ರಾ ಅರ್ಥಮಾಡಿಕೊಳ್ಳಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬರು ನೀವು ಇಷ್ಟಪಡುವ ಯಾವುದೇ ಧರ್ಮದಲ್ಲಿ ನೀವು ನಂಬಿಕೆ ಇಡಬಹುದು. ಆದರೆ, ಪದಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಹಿರಿಯ ಗಾಯಕಿಗೆ ಬೆಂಬಲವೂ ವ್ಯಕ್ತವಾಗಿದೆ. ಕೆ ಎಸ್ ಚಿತ್ರಾ ಅವರು ತಮ್ಮ ಅಭಿಪ್ರಾಯಗಳು ಮತ್ತು ಧಾರ್ಮಿಕ ನಂಬಿಕೆಗಳ ಬಗ್ಗೆ ಮಾತನಾಡಲು ಸ್ವತಂತ್ರರಾಗಿದ್ದಾರೆ ಎಂದು, ಸಹ ಗಾಯಕ ಜಿ ವೇಣುಗೋಪಾಲ್ ಅವರು ಚಿತ್ರಾ ಅವರ ಬೆಂಬಲಕ್ಕೆ ಧಾವಿಸಿದ್ದಾರೆ.

ಅವರು(ಚಿತ್ರಾ) ಎಂದಿಗೂ ವಿವಾದಕ್ಕೆ ಸಿಲುಕದ ವ್ಯಕ್ತಿಗೆ ನೀವು ಈ ಕಾಮೆಂಟ್‌ಗಳು ಮತ್ತು ಪ್ರತಿಕ್ರಿಯೆಗಳು ಮೂಲಕ ದುಃಖ ಮಾಡುತ್ತಿರುವುದು ತರವಲ್ಲ. ಕಳೆದ 44 ವರ್ಷಗಳಿಂದ ಅವರು ಕೇವಲ ಹಾಡುಗಳನ್ನು ಹಾಡಿದ್ದಾರೆ. ಅವರು ಎಂದಿಗೂ ರಾಜಕೀಯ ನಂಬಿಕೆಗಳನ್ನು ಪ್ರದರ್ಶಿಸಲಿಲ್ಲ. ಈ ವಿಷಯದಲ್ಲಿ ಅವರು ರಾಮನ ಮೇಲಿ ಭಕ್ತಿಯನ್ನು ಪ್ರದರ್ಶಿಸಿದ್ದಾರೆ ಎಂದು ಜಿ ವೇಣುಗೋಪಾಲ್ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Rama Mandir: ಹಿಂದು ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ ಜ. 21ರವರೆಗೆ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ

Exit mobile version