Site icon Vistara News

ಮನಮೋಹನ್‌ ಸಿಂಗ್‌ ನಿರ್ಧಾರಗಳಿಗೆ ಸೋನಿಯಾ ಗಾಂಧಿ ಕೊಕ್ಕೆ; ಮಾಜಿ ಕಾರ್ಯದರ್ಶಿ ಸ್ಫೋಟಕ ಹೇಳಿಕೆ

Sonia Gandhi

Sonia Gandhi used to change PM Manmohan Singh's decisions: RK Singh's explosive claim on UPA govt

ನವದೆಹಲಿ: ಡಾ.ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ದೇಶವನ್ನು 10 ವರ್ಷಗಳ ಕಾಲ ಹಿಂಬಾಲಿಗಿನಿಂದ ಆಳಿದರು. ಮನಮೋಹನ್‌ ಸಿಂಗ್‌ (Manmohan Singh) ಅವರು ಸೋನಿಯಾ ಗಾಂಧಿ (Sonia Gandhi) ಅವರ ರಿಮೋಟ್‌ ಕಂಟ್ರೋಲ್‌ ಆಗಿದ್ದರು ಎಂಬುದಾಗಿ ಬಿಜೆಪಿ ನಾಯಕರು ಆಗಾಗ ಟೀಕಿಸುತ್ತಲೇ ಇರುತ್ತಾರೆ. ಇದರ ಬೆನ್ನಲ್ಲೇ, ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. “ಯುಪಿಎ 1 ಹಾಗೂ 2ರ ಅವಧಿಯಲ್ಲಿ ಡಾ.ಮನಮೋಹನ್‌ ಸಿಂಗ್‌ ಅವರು ತೆಗೆದುಕೊಂಡ ತೀರ್ಮಾನಗಳನ್ನು ಸೋನಿಯಾ ಗಾಂಧಿ ಅವರು ಬದಲಿಸುತ್ತಿದ್ದರು” ಎಂಬುದಾಗಿ ಕೇಂದ್ರ ಸಚಿವರೂ ಆದ ಮಾಜಿ ಗೃಹ ಕಾರ್ಯದರ್ಶಿ ಆರ್‌.ಕೆ.ಸಿಂಗ್‌ (RK Singh) ಹೇಳಿದ್ದಾರೆ. ಇದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಎಬಿಪಿ ನ್ಯೂಸ್‌ ಚಾನೆಲ್‌ನ ‘ನೇತಾಜಿ ಆನ್‌ ಬ್ರೇಕ್‌ಫಾಸ್ಟ್’‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರ್‌.ಕೆ.ಸಿಂಗ್‌ ಅವರು, ಯುಪಿಎ ಆಡಳಿತದ ವೈಖರಿಯನ್ನು ಬಹಿರಂಗಪಡಿಸಿದ್ದಾರೆ. “ಮನಮೋಹನ್‌ ಸಿಂಗ್‌ ಅವರು ತೆಗೆದುಕೊಂಡ ತೀರ್ಮಾನಗಳನ್ನು ಸೋನಿಯಾ ಗಾಂಧಿ ಅವರು ಬದಲಾಯಿಸುತ್ತಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಚನೆಗೆ ಪ್ರಧಾನಿ ಅವರು ಅನುಮೋದನೆ ನೀಡಿದ್ದರು. ಆದರೆ, ಇದೇ ವೇಳೆ ಸೋನಿಯಾ ಗಾಂಧಿ ಅವರು ಮಧ್ಯಪ್ರವೇಶಿಸಿದರು. ಕೆಲವು ಬದಲಾವಣೆಗಳನ್ನು ಮಾಡಿದರು. ನಾನಾಗ ಗೃಹ ಕಾರ್ಯದರ್ಶಿಯಾಗಿದ್ದೆ” ಎಂದು ಸುದ್ದಿಸಂಸ್ಥೆಗೆ ಆರ್‌.ಕೆ.ಸಿಂಗ್‌ ತಿಳಿಸಿದ್ದಾರೆ. ಇವರು ಯುಪಿಎ ಸರ್ಕಾರದ ಅವಧಿಯಲ್ಲಿ ಅಂದರೆ, 2011ರಿಂದ 2013ರ ಅವಧಿಯಲ್ಲಿ ಗೃಹ ಕಾರ್ಯದರ್ಶಿಯಾಗಿದ್ದರು.

“ರಾಷ್ಟ್ರೀಯ ವಿಪತ್ತು ನಿರ್ವಹಣೆಗಾಗಿ ನಾವೊಂದು ಕರಡು ಸಿದ್ಧಪಡಿಸಿದ್ದೆವು. ಇದಕ್ಕಾಗಿ ನಾಔು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚಿಸಿದ್ದೆವು. ಇದರ ಮುಖ್ಯಸ್ಥರು ಪ್ರಧಾನಿಯೇ ಆಗಿರುತ್ತಾರೆ ಎಂಬುದು ತೀರ್ಮಾನವಾಗಿತ್ತು. ಕೇಂದ್ರ ಸಚಿವರು ಇದರ ಸದಸ್ಯರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸೋನಿಯಾ ಗಾಂಧಿ ಅವರು ಮಧ್ಯಪ್ರವೇಶಿಸಿದರು. ಅವರು ಮನಮೋಹನ್‌ ಸಿಂಗ್‌ ಅವರ ನಿರ್ಧಾರವನ್ನು ಬದಲಾಯಿಸಿದರು” ಎಂಬುದಾಗಿ ಆರ್‌.ಕೆ.ಸಿಂಗ್‌ ತಿಳಿಸಿದ್ದಾರೆ.

“ಕೇಂದ್ರ ಸಚಿವರು ಪ್ರಾಧಿಕಾರದ ಸದಸ್ಯರಾಗುವ ಬದಲು ಪ್ರಧಾನಿಯವರು ನಾಮನಿರ್ದೇಶನ ಮಾಡಿದವರೇ ಸದಸ್ಯರಾಗಬೇಕು ಎಂದು ಸೋನಿಯಾ ಗಾಂಧಿ ಪತ್ರ ಬರೆದರು. ಆ ಪತ್ರವನ್ನು ಆಗ ಗೃಹ ಸಚಿವರಾಗಿದ್ದ ಶಿವರಾಜ್‌ ಪಾಟೀಲ್‌ ಅವರು ನನಗೆ ತೋರಿಸಿದರು. ಅದನ್ನು ನೋಡಿದ ನಾನು ಇದು ಸರಿಯಲ್ಲ ಎಂದೆ. ನನ್ನ ಅಭಿಪ್ರಾಯವನ್ನು ಶಿವರಾಜ್‌ ಪಾಟೀಲ್‌ ಅವರೂ ಒಪ್ಪಿದರು. ಆದರೆ, 20-25 ದಿನಗಳ ಬಳಿಕ ಸೋನಿಯಾ ಗಾಂಧಿ ಅವರ ಆಶಯದಂತೆಯೇ ಆದೇಶ ಹೊರಬಿತ್ತು. ಅದಕ್ಕೆ, ಮನಮೋಹನ್‌ ಸಿಂಗ್‌ ಅವರ ಸಹಿ ಇತ್ತು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದೇಶಕ್ಕೆ ಮನಮೋಹನ್‌ ಸಿಂಗ್‌ ಕೊಡುಗೆ ಅಪಾರ; ರಾಜ್ಯಸಭೆಯಲ್ಲಿ ಮೋದಿ ಬಣ್ಣನೆ

Exit mobile version