Site icon Vistara News

Ayodhya Ram Mandir: ರಾಮ ಅಯೋಧ್ಯೆಗೆ ಮರಳಿ ಬರುವ ಸಂತಸದ ಹಾಡು ಸೋನು ನಿಗಮ್ ಧ್ವನಿಯಲ್ಲಿ!

Sonu Nigam Shri Ram Lalla Out

ಬೆಂಗಳೂರು: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಐತಿಹಾಸಿಕ ಸಮಾರಂಭದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆಗೂ ಮುನ್ನ “ಶ್ರೀ ರಾಮ್ ಲಲ್ಲಾ” ಹೆಸರಿನ ಭಜನೆಯನ್ನು ದೂರದರ್ಶನ ಚಾನೆಲ್‌ ಜನವರಿ 18ರಂದು ಬಿಡುಗಡೆ ಮಾಡಿದೆ. ಈ ಹಾಡನ್ನು ಸೋನು ನಿಗಮ್ ಹಾಡಿದ್ದಾರೆ.

ಈ ವಿಡಿಯೊದಲ್ಲಿ ಅಯೋಧ್ಯೆಯ ಡ್ರೋನ್ ಶಾಟ್‌ಗಳು ಮತ್ತು ದೇವಾಲಯವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯ ಕೂಡ ಇದೆ. ʻಶ್ರೀ ರಾಮ್ ಲಲ್ಲಾ” ಹಾಡು ಸೋನು ನಿಗಮ್ ಅವರ ಧ್ವನಿಯಲ್ಲಿ ಮೂಡಿಬಂದಿದೆ. ಭಗವಾನ್ ರಾಮನು ಅಯೋಧ್ಯೆಗೆ ಮರಳಿ ಬರುವ ಸಂತೋಷದ ಕುರಿತಾಗಿದೆ ಈ ಹಾಡು.

ʻಈ ವಿಶೇಷ ಹಾಡು ಸಂಗೀತದ ಅಪ್ಪುಗೆಯಂತಿದೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಸೋನು ನಿಗಮ್ ಭಜನ್ ಹಾಡಿದ್ದರೆ, ಸಾಹಿತ್ಯವನ್ನು ಮುಕುಲ್ ವರ್ಮಾ ಮತ್ತು ಅಮಿತಾಭ್‌ ಎಸ್ ವರ್ಮಾ ಬರೆದಿದ್ದಾರೆ. ಅಮಿತಾಭ್‌ ಎಸ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ: Ayodhya Ram Mandir: ರಾಮ ಮಂದಿರದ 2000 ಅಡಿ ಆಳದಲ್ಲಿರುತ್ತೆ ಟೈಮ್‌ ಕ್ಯಾಪ್ಸೂಲ್!‌ ಏನಿದರ ವಿಶೇಷತೆ?

1,500ಕ್ಕೂ ಹೆಚ್ಚು ಕಾರ್ಯಕ್ರಮಗಳು ನಿಗದಿ

ದೆಹಲಿಯಲ್ಲಿ ಪ್ರಾಣ ಪ್ರತಿಷ್ಠೆ ದಿನ 1,500ಕ್ಕೂ ಕಾರ್ಯಕ್ರಮಗಳು ನಿಗದಿಯಾಗಿವೆ. ದೇಗುಲಗಳು, ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸಿವೆ ಎಂದು ಛೇಂಬರ್‌ ಆಫ್‌ ಟ್ರೇಡ್‌ ಆ್ಯಂಡ್‌ ಇಂಡಸ್ಟ್ರಿಯ (CTI) ಅಧ್ಯಕ್ಷ ಬ್ರಿಜೇಶ್‌ ಗೋಯಲ್‌ ತಿಳಿಸಿದ್ದಾರೆ. “‘ಸುಂದರ್ ಕಾಂಡ್’ ಮತ್ತು ‘ಧಾರ್ಮಿಕ್ ಪತ್’ ಪ್ರದರ್ಶಿಸುವ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದೆ” ಎಂದು ಗೋಯಲ್ ಹೇಳಿದ್ದಾರೆ.

ಪ್ರತಿಷ್ಠಾಪನಾ ಸಮಾರಂಭ ಮತ್ತು ವಿವಾಹ ಋತು ಏಕಕಾಲಕ್ಕೆ ನಡೆಯುತ್ತಿರುವುದು ಕೂಡ ಬ್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚಾಗಲು ಇನ್ನೊಂದು ಕಾರಣ. ಇದು ಎಷ್ಟರ ಮಟ್ಟಿಗೆ ಎಂದರೆ ಸಾಮರ್ಥ್ಯಕ್ಕಿಂತ ಅಧಿಕ ಬುಕ್ಕಿಂಗ್‌ ನಡೆಯುತ್ತಿದೆ. ಬ್ಯಾಂಡ್‌ ಗ್ರೂಪ್‌ಗಳು ಬೇಡಿಕೆ ಈಡೇರಿಸಲು ಹೈರಾಣಾಗಿವೆ ಎಂದು ಮೂಲಗಳು ತಿಳಿಸಿವೆ.

“ಈ ವರ್ಷ ‘ರಾಮ್ ಭಾರತ್‌ʼ ಕೈಗೊಂಡ ಕಾರಣ ಡೋಲು, ಬ್ಯಾಂಡ್‌ಗಳ ಬೇಡಿಕೆ ಗಣನೀಯ ಪ್ರಮಾಣದಲ್ಲಿ ವೃದ್ಧಿಸಿದೆ. ಬೇಡಿಕೆ ಪೂರೈಸಲು ನಾವು ಈಗ ಪ್ರತಿದಿನ ಬೆಳಗ್ಗೆ 4 ಗಂಟೆಗೆ ಕೆಲಸ ಪ್ರಾರಂಭಿಸುತ್ತಿದ್ದೇವೆ. ಸಣ್ಣ ಮತ್ತು ದೊಡ್ಡ ಬ್ಯಾಂಡ್‌ಗಳೂ ವ್ಯಾಪಕ ತಯಾರಿ ನಡೆಸುತ್ತಿವೆ” ಎಂದು ಜೀಯಾ ಬ್ಯಾಂಡ್ ಮಾಲಕ ಸತ್ಯ ಅನಿಲ್ ತಡಾನಿ ಹೇಳಿದ್ದಾರೆ.

ಪ್ರಾಣ ಪ್ರತಿಷ್ಠಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿರುವ ಹಿನ್ನೆಲೆಯಲ್ಲಿ ಮದುವೆಯ ಹಾಡುಗಳನ್ನು ಹಾಡುತ್ತಿದ್ದ ಬ್ಯಾಂಡ್ ಸದಸ್ಯರು ಈಗ ಭಗವಾನ್ ರಾಮನಿಗೆ ಸಮರ್ಪಿತವಾದ ಭಕ್ತಿಗೀತೆಗಳನ್ನು ಸಿದ್ಧಪಡಿಸುತ್ತಿದ್ದಾರೆ.

“ನಾವು ದಿನವಿಡೀ ವಿಶೇಷ ಹಾಡುಗಳನ್ನು ಅಭ್ಯಾಸ ಮಾಡುತ್ತಿದ್ದೇವೆ. ಆರತಿ ಸಮಯದಲ್ಲಿ ಜನಪ್ರಿಯ ಭಜನೆ ‘ರಾಮ್ ಆಯೆಂಗೆ ತೋ ಜ್ಞಾನ ಸಜೌಂಗಿ’ ಮತ್ತು ವಿಶೇಷ ಧೋಲ್ ಬೀಟ್‌ಗಳನ್ನು ನುಡಿಸಲು ತಯಾರಿ ನಡೆಸುತ್ತಿದ್ದೇವೆ” ಎಂದು ಬ್ಯಾಂಡ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ. ಅಂದು ಬ್ಯಾಂಡ್‌ ಸದಸ್ಯರು ಕೇಸರಿ ಬಣ್ಣದ ವಿಶೇಷ ಸಮವಸ್ತ್ರ ಧರಿಸಲಿದ್ದಾರೆ.

Exit mobile version