Site icon Vistara News

INDIA Bloc: ಉತ್ತರ ಪ್ರದೇಶದಲ್ಲಿ ಎಸ್‌ಪಿ-ಕಾಂಗ್ರೆಸ್ ಸೀಟ್ ಷೇರಿಂಗ್ ಫೈನಲ್, ಸೂತ್ರ ಹೀಗಿದೆ

SP-Congress seat sharing final in Uttar Pradesh and INDIA Bloc intact

ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಸೀಟು ಹಂಚಿಕೆ (Seat Sharing) ಸಂಬಂಧ ಕಾಂಗ್ರೆಸ್ (Congress Party) ಮತ್ತು ಸಮಾಜವಾದಿ ಪಕ್ಷದ (SP Party) ನಡುವೆ ಉಂಟಾಗಿದ್ದ ಬಿಕ್ಕಟ್ಟು ಶಮನವಾಗಿದೆ. ಉಭಯ ಪಕ್ಷಗಳು ಅಂತಿಮ ಪರಿಹಾರವನ್ನು ಕಂಡುಕೊಳ್ಳಲು ಯಶಸ್ವಿಯಾಗಿದ್ದು, ಇಂಡಿಯಾ ಕೂಟದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸಮಾಜವಾದಿ ಪಕ್ಷವು ಹೇಳಿದೆ. ಉತ್ತರ ಪ್ರದೇಶದಲ್ಲಿ 80 ಲೋಕ ಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ಗಿಂತಲೂ ಸಮಾಜವಾದಿ ಪಕ್ಷವು ಹೆಚ್ಚು ಬಲಿಷ್ಠವಾಗಿದೆ(INDIA Bloc).

ಸೀಟು ಷೇರಿಂಗ್ ಕುರಿತು ಮಾಹಿತಿ ನೀಡಿರುವ ಉತ್ತರ ಪ್ರದೇಶದ ಮಾಜಿ ಸಿಎಂ ಆಗಿರುವ ಎಸ್ ಪಿ ನಾಯಕ ಅಖಿಲೇಶ್ ಯಾದವ್ ಅವರು, ಇಂಡಿಯಾ ಕೂಟದಲ್ಲಿ ಯಾವುದೇ ಒಡಕಿಲ್ಲ. ಎಲ್ಲವೂ ಸರಿಯಾಗಿದೆ. “ನಾವು ಕಾಂಗ್ರೆಸ್ ಜೊತೆ ಪಾಲುದಾರರಾಗುತ್ತೇವೆ, ಮೈತ್ರಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ” ಎಂದು ಅಖಿಲೇಶ್ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದು, “ಅಂತ್ ಭಲಾ ತೋ ಸಬ್ ಭಲಾ” (ಅಂತ್ಯವು ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ) ಎಂದು ಹೇಳಿದ್ದಾರೆ.

ಇದೇ ವೇಳೆ, ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಈ ಬಾರಿ ಸೋಲು ಕಾಣಲಿದೆ ಎಂದು ಹೇಳಿದರು. ಅಲ್ಲದೇ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಗರಿಷ್ಠ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದೂ ಸ್ಪಷ್ಟಪಡಿಸಿದರು. ಈ ಮಧ್ಯೆ, ಕಾಂಗ್ರೆಸ್ ಮತ್ತು ಎಸ್‌ಪಿ ಸಂಜೆ ಪತ್ರಿಕಾಗೋಷ್ಠಿ ನಡೆಸಿ, ವಿವರ ನೀಡಲಿವೆ ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ, ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ವಾರಾಣಸಿಯಲ್ಲಿ ಎಸ್ ‌ಪಿ ತನ್ನ ಅಭ್ಯರ್ಥಿಯನ್ನು ಕೈ ಬಿಡುವ ಸಾಧ್ಯತೆಗಳಿದ್ದು, ಅದನ್ನು ಕಾಂಗ್ರೆಸ್ ಪಡೆಯಲಿದೆ ಎನ್ನಲಾಗುತ್ತಿದೆ. ಈ ಮೊದಲು ಸಮಾಜವಾದಿ ಪಾರ್ಟಿಯು ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಉತ್ತರ ಪ್ರದೇಶದ ಅಧ್ಯಕ್ಷ ಅಜಯ್ ರಾಯ್ ಅವರು ಸ್ಪರ್ಧಿಸುತ್ತಾ ಬಂದಿದ್ದಾರೆ. ಸದ್ಯ ಈ ಕ್ಷೇತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿದ್ದಾರೆ.

ಮತ್ತೊಂದೆಡೆ, ಸೀತಾಪುರಕ್ಕೆ ಬದಲಾಗಿ ಅಖಿಲೇಶ್ ಯಾದವ್ ನೇತೃತ್ವದ ಪಕ್ಷಕ್ಕೆ ಹತ್ರಾಸ್ ನೀಡಲಾಗುವುದು. ಹೆಚ್ಚುವರಿಯಾಗಿ, ಬುಲಂದ್‌ಶಹರ್ ಅಥವಾ ಮಥುರಾದಿಂದ ಎಸ್‌ಪಿ ಒಂದು ಸ್ಥಾನವನ್ನು ಪಡೆಯಬಹುದು ಮತ್ತು ಕಾಂಗ್ರೆಸ್ ಶ್ರಾವಸ್ತಿ ಸ್ಥಾನವನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ. ಜಾತಿ ಸಮೀಕರಣ ಮತ್ತು ಎರಡೂ ಪಕ್ಷಗಳ ಹಿಂದಿನ ಮತಗಳ ಆಧಾರದ ಮೇಲೆ ಎಸ್‌ಪಿ ಸ್ಥಾನ ಹಂಚಿಕೆ ಪ್ರಸ್ತಾಪವನ್ನು ಪರಿಗಣಿಸಬೇಕು ಎಂದು ಹಳೆಯ ಪಕ್ಷ ಹೇಳಿದೆ.

ಈ ಸುದ್ದಿಯನ್ನೂ ಓದಿ : INDIA Bloc: ಪಂಜಾಬ್‌, ಚಂಡೀಗಢದಲ್ಲಿ ಸ್ಪತಂತ್ರ ಸ್ಫರ್ಧೆ ಎಂದ ಕೇಜ್ರಿವಾಲ್; ಇಂಡಿಯಾ ಕೂಟ ಛಿದ್ರ

Exit mobile version