Site icon Vistara News

Tamil Nadu: ಮಹಾತ್ಮ ಗಾಂಧಿ ಬಗ್ಗೆ ತಮಿಳುನಾಡು ರಾಜ್ಯಪಾಲ ಕೊಂಕು ಮಾತು! ತಿರುಗೇಟು ನೀಡಿದ ಸಿಎಂ

Tamil Nadu governor remark about Gandhi and CM hits back

ಚೆನ್ನೈ: ಮಹಾತ್ಮ ಗಾಂಧಿ (Mahatma Gandhi) ಕುರಿತು ಅಬದ್ಧವಾಗಿ ಮಾತನಾಡಿದ ರಾಜ್ಯಪಾಲ ಆರ್ ಎನ್ ರವಿ (Tamil Nadu Governor RN Ravi) ಅವರನ್ನು ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ (CM MK Stalin) ತರಾಟೆಗೆ ತೆಗೆದುಕೊಂಡಿದ್ದಾರೆ. ರವಿ ಅವರ ಹೇಳಿಕೆಗಳು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪರಂಪರೆಗೆ ಕಳಂಕ ತರುವ ಪ್ರಯತ್ನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ರಾಜ್ಯಪಾಲ-ಸಿಎಂ ನಡುವಿನ ಮತ್ತೊಂದು ಸಂಘರ್ಷಕ್ಕೆ ಮುನ್ನುಡಿ ಬರೆದಂತಾಗಿದೆ.

ಮಹಾತ್ಮ ಗಾಂಧಿ ಅವರು 1942ರ ಬಳಿಕ ಮಹತ್ವವನ್ನು ಕಳೆದುಕೊಂಡಿದ್ದರು ಎಂದು ತಮಿಳು ನಾಡು ರಾಜ್ಯಪಾಲ ಆರ್ ಎನ್ ರವಿ ಹೇಳಿದ್ದರು. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ತಾವು ಹಾಗೆ ಹೇಳಿಲ್ಲ. ತಮ್ಮ ಮಾತುಗಳನ್ನು ತಪ್ಪಾಗಿ ವರದಿ ಮಾಡಲಾಗಿದೆ ಎಂದು ಮಾಧ್ಯಮಗಳನ್ನು ದೂಷಿಸಿದ್ದಾರೆ.

ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 127ನೇ ಜನ್ಮದಿನಾಚರಣೆಯಲ್ಲಿ ಅವರು ಮಾಡಿದ ಭಾಷಣ ಕುರಿತು ಸ್ಪಷ್ಟಣೆ ನೀಡಿರುವ ರವಿ ಅವರು, “ನನ್ನ ಜೀವನಕ್ಕೆ ಮಾರ್ಗದರ್ಶನ ನೀಡುವ ಮಹಾತ್ಮ ಗಾಂಧಿಯವರ ಬೋಧನೆಗಳಿಗೆ ಯಾವುದೇ ಅಗೌರವವನ್ನು ನಾನು ಅರ್ಥೈಸಲಿಲ್ಲ” ಎಂದು ಹೇಳಿದ್ದಾರೆ. ಮಾಧ್ಯಮಗಳು ನನ್ನ ಆಯ್ದ ಮಾತುಗಳಿಗೆ ಟ್ವಿಸ್ಟ್ ನೀಡಿವೆ ಎಂದು ಆರೋಪಿಸಿದ್ದಾರೆ.

ಧಾರ್ಮಿಕ ರಾಷ್ಟ್ರೀಯತೆಯ ವಿರುದ್ಧ ಗಾಂಧಿಯವರ ನಿಲುವನ್ನು ಒತ್ತಿ ಹೇಳಿದ ಸ್ಟಾಲಿನ್ ಅವರು, ಧಾರ್ಮಿಕ ಮತಾಂಧತೆಯನ್ನು ವಿರೋಧಿಸಿ ನಾಯಕ ತನ್ನ ಜೀವನವನ್ನು ತ್ಯಾಗ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಯವರ ಪ್ರಮುಖ ಪಾತ್ರವನ್ನು ದುರ್ಬಲಗೊಳಿಸುವ ಮೂಲಕ ರಾಜ್ಯಪಾಲರು ಮತ್ತು ಇತರರು ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬಲಪಂಥೀಯರು ಸುಳ್ಳಿನ ಮೂಲಕ ರಾಷ್ಟ್ರಪಿತನನ್ನು ದೂಷಿಸುತ್ತಾರೆ. ಗಾಂಧಿ ಜಯಂತಿಯನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಬದಲಾಯಿಸುವುದರಲ್ಲಿ ಅವರ ಗಾಂಧಿ ಖ್ಯಾತಿಯ ವಿನಾಶ ಅಡಗಿದೆ. ಇದು ಪ್ರಸ್ತುತ ಕಾಲವು ಕೋಮುವಾದದ ಕೆಸರಿನಲ್ಲಿ ಹೇಗೆ ಸಿಲುಕಿದೆ ಎಂಬುದನ್ನು ಸೂಚಿಸುತ್ತದೆ. ನಾವು ಇದನ್ನು ನಿಲ್ಲಿಸಬೇಕಾಗಿದೆ ಎಂದು ಸ್ಟಾಲಿನ್ ಅವರು ಹೇಳಿದ್ದಾರೆ.

ಗಾಂಧಿಯವರ ಹತ್ಯೆಯಾದ ಜನವರಿ 30 ರಂದು ಕೋಮು ಸೌಹಾರ್ದ ಪ್ರತಿಜ್ಞೆಯನ್ನು ನಡೆಸುವ ಪಕ್ಷದ ಯೋಜನೆಗಳನ್ನು ಘೋಷಿಸಿದ ಸ್ಟಾಲಿನ್ ಅವರು, ವಿಭಜಕ ಶಕ್ತಿಗಳ ವಿರುದ್ಧ ನಾಗರಿಕರು ಒಂದಾಗಬೇಕು ಮತ್ತು ಮಹಾತ್ಮರು ಸಾಕಾರಗೊಳಿಸಿದ ಕೋಮು ಸೌಹಾರ್ದತೆಯ ತತ್ವಗಳನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ: ನಮ್ಮನ್ನು ಕೆಣಕಬೇಡಿ ಎಂದ ತಮಿಳುನಾಡು ಸಿಎಂ ಸ್ಟಾಲಿನ್; ನಮ್ಮನ್ನು ಮುಟ್ಟಬೇಡಿ ಎಂದ ಬಿಜೆಪಿ ಚೀಫ್​ ಅಣ್ಣಾಮಲೈ

Exit mobile version