Site icon Vistara News

Udhayanidhi Stalin : ಸನಾತನ ಧರ್ಮ ಅಳಿಸುವೆ ಎಂದ ಉದಯನಿಧಿಯ ಅಮ್ಮ ದೇವರಿಗೆ ಚಿನ್ನದ ಕಿರೀಟ ಸಮರ್ಪಿಸಿದ್ದರು!

udyanidhi satlin mother

ಚೆನ್ನೈ: ತಮಿಳುನಾಡು ಸರ್ಕಾರದ ಸಚಿವ ಹಾಗೂ ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್​ ಅವರ ಪುತ್ರ ಉದಯನಿಧಿ ಸ್ಟಾಲಿನ್​ ಭಾರತದ ಕೋಟ್ಯಂತರ ಹಿಂದುಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ. ಸನಾತನ ಧರ್ಮವನ್ನು ಮಾರಕ ರೋಗಗಳಾದ ಡೆಂಗಿ ಹಾಗೂ ಕೊರೊನಾಗೆ ಹೋಲಿಸಿದ ಅವರು ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಧಾರ್ಮಿಕ ಪರಂಪರೆಯನ್ನು ರಾಜಕೀಯ ಲಾಭಕ್ಕಾಗಿ ಲೇವಡಿ ಮಾಡಿದ್ದಾರೆ. ಆ ತಪ್ಪಿಗೆ ಅವರು ವಿಶ್ವದ ಮೂಲೆಮೂಲೆಗಳಿಂದ ಪ್ರತಿರೋಧಗಳನ್ನು ಎದುರಿಸುತ್ತಿದ್ದಾರೆ. ಹಿಂದು ವಿದ್ವಾಂಸರು ಹಾಗೂ ಹಲವಾರು ರಾಜಕೀಯ ನಾಯಕರು ಖಡಕ್​ ಉತ್ತರವನ್ನೇ ಕೊಟ್ಟಿದ್ದಾರೆ. ಅಂದ ಹಾಗೆ ಉದಯನಿಧಿ ಅವರ ಮಾತುಗಳನ್ನು ಆಲಿಸಿದ ತಕ್ಷಣ ಅವರೊಬ್ಬ ನಾಸ್ತಿಕ ಕುಟುಂಬಕ್ಕೆ ಸೇರಿದವರು ಎಂದು ಅಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. , ರಾಜಕೀಯ ಉದ್ದೇಶಕ್ಕೆ ಸನಾತನ ಧರ್ಮಿಗಳನ್ನು ಕೆರಳಿಸಿರುವ ಉದಯನಿಧಿಯ ಕುಟುಂಬದಲ್ಲಿ ಅಪ್ಪಟ ದೈವ ಭಕ್ತರಿದ್ದಾರೆ ಎಂಬುದು ಸತ್ಯ..

ಉದಯ ನಿಧಿಗೆ ಜನ್ಮ ನೀಡಿದ ಅವರ ತಾಯಿ ಹಾಗೂ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರೇ ಈ ಮಹಾನ್​ ದೈವ ಭಕ್ತರು. ತಮ್ಮ ಇಷ್ಟಾರ್ಥಗಳನ್ನು ಪೂರೈಕೆಗಾಗಿ ಅವರು ದೇಗುಗಳಿಗೆ ಭೇಟಿ ನೀಡುವುದು ಸರ್ವೇಸಾಮಾನ್ಯ ಹಾಗೂ ಹರಕೆಯನ್ನು ಹೊತ್ತುಕೊಂಡಿದ್ದಾರೆ ಕೂಡ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅದರಲ್ಲೊಂದು ಅವರು ಕೇರಳದ ವಿಶ್ವ ಪ್ರಸಿದ್ಧ ಕೃಷ್ಣನ ದೇಗುಲ ಗುರುವಾಯೂರ್​​ಗೆ ಸುಮಾರು 14 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ಸಮರ್ಪಿಸಿರುವುದು. ಅಂದ ಹಾಗೆ ದುರ್ಗಾ ಅವರು ಭಗವಾನ್​ ಶ್ರೀಕೃಷ್ಣನಿಗೆ ಈ ಹರಕೆಯನ್ನು ಹೊತ್ತುಕೊಂಡಿದ್ದು ತಮ್ಮ ಪತಿ ಸಿಎಂ ಆಗಲಿ, ಪುತ್ರ ಉದಯನಿಧಿ ಸಚಿವನಾಗಲಿ ಎಂದು ಹಾರೈಸಿ ಎಂದು ಅವರ ಆಪ್ತರ ನುಡಿ! ದೇವರು ತಮ್ಮ ಇಷ್ಟವನ್ನು ನೆರವೇರಿಸಿದ ತಕ್ಷಣ ದುರ್ಗಾ ಅವರು ಕಳೆದ ಆಗಸ್ಟ್​​ನಲ್ಲಿ ಶ್ರದ್ಧಾ, ಭಕ್ತಿಯಿಂದ ಮತ್ತು ‘ಸನಾತನ ಸಂಸ್ಕೃತಿ’ಯ ಪ್ರಕಾರ ಹರಕೆ ಸಲ್ಲಿಸಿದ್ದಾರೆ.

ಅತ್ಯಾಕರ್ಷಕ ಚಿನ್ನದ ಕಿರೀಟವನ್ನು ಅರ್ಪಿಸಿದ ಬಗ್ಗೆ ಹಲವು ಪತ್ರಿಕೆಗಳಲ್ಲಿ ವರದಿಗಳು ಪ್ರಕಟಗೊಂಡಿದ್ದವು. ಜತೆಗೆ ಅವರು ಅಲ್ಲಿನ ಪ್ರಸಿದ್ಧ ಹರಕೆಯಾಗಿರುವ ತುಲಾಭಾರ ಕೂಡ ಮಾಡಿಸಿಕೊಂಡಿದ್ದಾರೆ. ಹೀಗಾಗಿ ತಮ್ಮ ಅಮ್ಮನಿಗೆ ಅತ್ಯಂತ ಇಷ್ಟವಾಗಿರುವ ಸನಾತನ ಸಂಸ್ಕೃತಿಯನ್ನು ಹೀಯಾಳಿಸಿದ ಉದಯನಿಧಿ ಅವರ ನಿಲುವು ಮಾತ್ರ ಪ್ರಶ್ನಾರ್ಹ.

ಗಂಧ ಅರೆಯುವ ಯಂತ್ರವೂ ನೀಡಿದ್ದರು

32 ಪವನ್ ಚಿನ್ನದಿಂದ ವಿನ್ಯಾಸಗೊಳಿಸಲಾದ ಕಿರೀಟವನ್ನು ಭಕ್ತಿಯ ಸಂಕೇತವಾಗಿ ದುರ್ಗಾ ಅವರು ದೇಗುಲಕ್ಕೆ ನೀಡಿದ್ದಾರೆ. ಚಿನ್ನದ ಕಿರೀಟದ ಜೊತೆಗೆ ಅವರು ಶ್ರೀಗಂಧವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುವ ಯಂತ್ರವನ್ನು ಸಹ ನೀಡಿದ್ದಾರೆ. ಈ ಯಂತ್ರದ ಮೌಲ್ಯ 2 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಇದು ದೇವಸ್ಥಾನದಲ್ಲಿ ಅರ್ಚನೆ ಬಳಿಕ ಉಳಿದ ಶ್ರೀಗಂಧವನ್ನು ರುಬ್ಬಿ ಗಂಧ ಪ್ರಸಾದವನ್ನಾಗಿ ಪರಿವರ್ತಿಸುತ್ತದೆ. ಕೇರಳದಲ್ಲಿ ಹಣೆಗೆ ಗಂಧ ಇಟ್ಟುಕೊಳ್ಳುವುದು ಸನಾತನ ಧಾರ್ಮಿಕ ಸಂಕೇತವಾಗಿದೆ.

ದೇಗುಲದ ದೇವಸ್ವಂ ಅಧ್ಯಕ್ಷ ಡಾ.ವಿ.ಕೆ. ವಿಜಯನ್, ವ್ಯವಸ್ಥಾಪನಾ ಸಮಿತಿ ಸದಸ್ಯ ಸಿ. ಮನೋಜ್, ಆಡಳಿತಾಧಿಕಾರಿ ಕೆ.ಪಿ.ವಿನಯನ್, ದೇವಾಲಯದ ಡಿ.ಎ.ಪಿ.ಮನೋಜ್ ಕುಮಾರ್ ಅವರ ತಂಡ ತಮಿಳುನಾಡು ಸಿಎಂ ಸ್ಟಾಲಿನ್ ಪತ್ನಿ ದುರ್ಗಾ ಅವರನ್ನು ದೇವಸ್ಥಾನಕ್ಕೆ ಸ್ವಾಗತಿಸಿದ್ದರು.

ಈ ಮೊದಲು, ಕಿರೀಟವನ್ನು ತಯಾರಿಸುವ ಲೆಕ್ಕಾಚಾರವನ್ನು ದುರ್ಗವಾ ಅವರು ತೆಗೆದುಕೊಂಡು ತಯಾರಿಸಿದ್ದರು. ಆಚರಣೆಗೆ ಮೊದಲು, ಕಿರೀಟವನ್ನು ಬಾಳೆ ಎಲೆಯ ಮೇಲೆ ಇಟ್ಟು ‘ಸನಾತನ ಆಚರಣೆಯ’ ಪ್ರಕಾರ ಹಸ್ತಾಂತರಿಸಲಾಗಿತ್ತು. ಸ್ವರ್ಣ ಕಿರೀಟದಿಂದ ಅಲಂಕರಿಸಲ್ಪಟ್ಟ ವಿಗ್ರಹದ ‘ದರ್ಶನ’ ಮತ್ತು ಮಧ್ಯಾಹ್ನದ ಹೂವಿನ ಅಲಂಕಾರವನ್ನು ದುರ್ಗಾ ಪೂರೈಸಿದ್ದರು. ದುರ್ಗಾ ಸ್ಟಾಲಿನ್ ಅವರು ಗುರುವಾಯೂರಪ್ಪನ್ ಎಂದು ಕರೆಯಲ್ಪಡುವ ಗುರುವಾಯೂರು ದೇವರ ಕಟ್ಟಾ ಭಕ್ತರಾಗಿದ್ದಾರೆ. ದೇವಾಲಯಕ್ಕೆ ಸತತವಾಗಿ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ: Sanatan Dharma: ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮ ಹೇಳಿಕೆಗೆ ಪೇಜಾವರ ಶ್ರೀ ಖಂಡನೆ

ದೇಗುಲದ ಪೂಜೆಗೆ ಬೇಕಾದ ಶ್ರೀಗಂಧವನ್ನು ದೇವಸ್ವಂ ಮಂಡಳಿ ಅರಣ್ಯ ಇಲಾಖೆಯಿಂದ ಪ್ರತಿ ಕೆ.ಜಿ.ಗೆ 17,000 ರೂ.ಗೆ ಖರೀದಿಸಲಾಗುತ್ತದೆ. ಆದರೆ ಉಳಿದ ಗಂಧದ ತುಂಡುಗಳನ್ನು ಅದನ್ನು ತ್ಯಾಜ್ಯ ಪರಿಗಣಿಸಲಾಗುತ್ತದೆ. ಅದನ್ನು ಇಲಾಖೆಗೆ ಹಿಂದಿರುಗಿಸಿದಾಗ ಕೆ.ಜಿ.ಗೆ 1000 ರೂ.ಗಳನ್ನು ನೀಡಲಾಗುತ್ತದೆ. ಹೀಗಾಗಿ ಅದನ್ನು ಅರೆದು ಪ್ರಸಾದ ಮಾಡುವ ಯೋಜನೆ ದೇವಸ್ಥಾನ ಕೈಗೊಂಡಿತ್ತು. ಅದಕ್ಕೆ ಬೇಕಾದ ಯಂತ್ರವನ್ನು ದುರ್ಗಾ ಅವರು ನೀಡಿದ್ದಾರೆ.

ಗುರುವಾಯೂರು ದೇವಾಲಯದಲ್ಲಿ ಭಗವಾನ್ ಕೃಷ್ಣನ ತಂದೆ ವಾಸುದೇವನಿಂದ ಪೂಜಿಸಲ್ಪಟ್ಟ ವಿಗ್ರಹವಿದೆ ಎಂದು ನಂಬಲಾಗಿದೆ. ನಾಲ್ಕು ತೋಳುಗಳ ವಿಷ್ಣುವಿನ ‘ಮೂರ್ತಿ’ಯನ್ನು ಬಾಲ್ಯದ ಶ್ರೀಕೃಷ್ಣನ ಅಭಿವ್ಯಕ್ತಿಯಾಗಿ ಪೂಜಿಸಲಾಗುತ್ತದೆ. ಪ್ರೀತಿಯಿಂದ ‘ಉಣ್ಣಿ ಕಣ್ಣನ್’ (ಬಾಲ ಕೃಷ್ಣ) ಎಂದು ಕರೆಯಲಾಗುತ್ತದೆ.

Exit mobile version