Site icon Vistara News

Wayanad Landslide: ವಯನಾಡಿಗಾಗಿ ಮಿಡಿಯಿತು ವಿದೇಶಿಗರ ಮನ; ಸಂತ್ರಸ್ತರ ನೆರವಿಗೆ ಧಾವಿಸಿದ ಇಂಗ್ಲೆಂಡ್‌ನ ವಿದ್ಯಾರ್ಥಿನಿಯರು

Wayanad Landslide

ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಮೃತರ ಸಂಖ್ಯೆ 350 ದಾಟಿದ್ದು, ಇನ್ನೂ ನೂರಾರು ಮಂದಿ ಪತ್ತೆಯಾಗಬೇಕಿದೆ (Wayanad Landslide). ಅವರಿಗಾಗಿ ಸತತ 6ನೇ ದಿನ ಹುಡುಕಾಟ ಮುಂದುವರಿದಿದೆ. ಭೀಕರ ಪ್ರವಾಹಕ್ಕೆ ಎರಡು-ಮೂರು ಗ್ರಾಮಗಳ ಕೊಚ್ಚಿ ಹೋಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಈ ಮಧ್ಯೆ ಇಡೀ ದೇಶದವೇ ವಯನಾಡಿನ ಸಹಾಯಕ್ಕೆ ಧಾವಿಸಿದೆ. ವಿವಿಧ ಭಾಗಗಳ ಜನರು ಸಹಾಯಹಸ್ತ ಚಾಚುತ್ತಿದ್ದಾರೆ. ಈ ಮಧ್ಯೆ ವಿದೇಶಿ ವಿದ್ಯಾರ್ಥಿಗಳ ಮನಸ್ಸು ವಯನಾಡಿಗಾಗಿ ಮಿಡಿದಿದ್ದು, ಧಾವಿಸಿ ಬಂದಿದ್ದಾರೆ. ಸದಾ ರಕ್ಷಣಾ ಕಾರ್ಯಾಚರಣೆಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರಾದ ಅಮೇಲಿಯಾ ರೋಕ್‌, ಶಲೆಟ್‌ ಸತರ್ಲಾಂಟ್‌ , ಮಿಲಿಸೆಂಟ್‌ ಕ್ರೂ ವಯನಾಡಿನ ದುರಂತಕ್ಕಾಗಿ ಮಿಡಿದ್ದಾರೆ. ತಮ್ಮಿಂದಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಇವರು ಇಂಟರ್ನ್‌ಶಿಪ್‌ ಮಾಡಲು ಒಂದು ತಿಂಗಳ ಹಿಂದೆ ಕೇರಳಕ್ಕೆ ಆಗಮಿಸಿದ್ದರು. ಇವರು ಸದ್ಯ ತ್ರಿಶೂರ್‌ನ ಮಿನಲೂರಿನಲ್ಲಿ ಉಳಿದುಕೊಂಡಿದ್ದಾರೆ. ಕೇರಳಕ್ಕೆ ಆಗಮಿಸಿ ಕೆಲವೇ ದಿನಗಳಾಗಿದ್ದರೂ ಇಲ್ಲಿನ ಪ್ರಕೃತಿ, ಜನರು, ಸಂಸ್ಕೃತಿಯನ್ನು ಇಷ್ಟಪಟ್ಟಿರುವುದಾಗಿ ತಿಳಿಸಿರುವ ಇವರು ಇದೀಗ ಇಲ್ಲಿನ ದುಸ್ಥಿತಿ ನೋಡಿ ಮನಸ್ಸು ಒದ್ದಾಡುತ್ತಿದೆ. ಹೀಗಾಗಿ ತಮ್ಮಿಂದಾದ ದಹಾಯ ಮಾಡುವುದಾಗಿ ತಿಳಿಸಿದ್ದಾರೆ.

ʼʼನಾವು ಈ ರಾಜ್ಯವನ್ನು ಪ್ರೀತಿಸುತ್ತೇವೆ. ಇಲ್ಲಿನ ಜೀವನ ರೀತಿಯನ್ನು, ಶಿಕ್ಷಣವನ್ನು, ಸ್ತ್ರೀ ಸಬಲೀಕರಣವನ್ನು, ಪ್ರಕೃತಿಯನ್ನು ಇಷ್ಟಪಡುತ್ತೇವೆ. ಆದ್ದರಿಂದ ವಯನಾಡಿನ ದುಃಖ ನಮ್ಮದೂ ಹೌದುʼʼ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಇದೀಗ ಈ ವಿದೇಶಿ ವಿದ್ಯಾರ್ಥಿನಿಯರು ಕೇರಳಕ್ಕಾಗಿ, ವಯನಾಡಿಗಾಗಿ ಸ್ಪಂದಿಸುತ್ತಿರುವ ರೀತಿಯನ್ನು ಗಮನಿಸಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೂ ಈ ನಡೆಯನ್ನು ಶ್ಲಾಘಿಸಿದ್ದಾರೆ. ಈ ಮಾಸಾಂತ್ಯಕ್ಕೆ ಇಂಗ್ಲೆಂಡ್‌ಗೆ ಮರಳಲಿರುವ ಅವರು ಅದುವರೆಗೆ ವಯನಾಡಿನಲ್ಲಿ ಸೇವೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ವಯನಾಡು ಈ ದುರಂತದಿಂದ ಚೇತರಿಸಿಕೊಂಡ ಬಳಿಕ ಮತ್ತೊಮ್ಮೆ ಭೇಟಿ ನೀಡುವುದಾಗಿಯೂ ಅವರು ತಿಳಿಸಿದ್ದಾರೆ.

ಸಂತ್ರಸ್ತರಿಗೆ ತಾತ್ಕಾಲಿಕ ಮನೆ ಒದಗಿಸಲು ಆನ್‌ಲೈನ್‌ ಪೋರ್ಟಲ್‌

ವಯನಾಡು ದುರಂತದಿಂದ ಮನೆ-ಮಠ ಕಳೆದುಕೊಂಡ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಒದಗಿಸಲು ವಿದೇಶಗಳಲ್ಲಿ ಇರುವ ಮಲೆಯಾಳಿಗಳು ಮುಂದಾಗಿದ್ದಾರೆ. ಇದಕ್ಕಾಗಿ ಆನ್‌ಲೈನ್‌ ಪೋರ್ಟಲ್‌ ಒಂದನ್ನು ಆರಂಭಿಸಿದ್ದಾರೆ. ʼsupportwayanad.com’ ಹೆಸರಿನ ಈ ಫ್ಲಾಟ್‌ಫಾರಂನಲ್ಲಿ ಮನೆ ಅಗತ್ಯ ಇರುವವರು ಮತ್ತು ಮನೆ ಒದಗಿಸಲು ತಯಾರಿರುವ ದಾನಿಗಳು ಹೆಸರು ನೋಂದಾಯಿಸಬಗುದು ಎಂದು ಮೂಲಗಳು ತಿಳಿಸಿವೆ.

ವಿದೇಶಗಳಲ್ಲಿ ನೆಲೆಸಿರುವ ಸದ್ಯ ಖಾಲಿ ಇರುವ ಮನೆಗಳನ್ನು ಗುರುತಿಸುವ ಉದ್ದೇಶದಿಂದ ಈ ಫ್ಲಾಟ್‌ಫಾರಂ ಆರಂಭಿಸಲಾಯಿತಾದರೂ ಈಗ ತಮ್ಮ ಮನೆಯಲ್ಲಿ ಆಶ್ರಯ ನೀಡಲು ತಯಾರಿರುವವರೂ ಇದನ್ನು ಬಳಸಬಹುದಾಗಿದೆ. ಕ್ರಮೇಣ ಸರ್ಕಾರದ ಸೌಲಭ್ಯಗಳನ್ನೂ ಇದರಲ್ಲಿ ಸೇರಿಸಲು ಉದ್ದೇಶಿಸಲಾಗಿದೆ. ʼʼಈ ಪೋರ್ಟಲ್‌ ಮೂಲಕ ಖಾಲಿ ಮನೆಗಳನ್ನು ನೋಂದಾಯಿಸಬಹುದು. ಈ ಮೂಲಕ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಬಹುದುʼʼ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Wayanad Landslide: ವಯನಾಡು ಸಂತ್ರಸ್ತರಿಗೆ ಮಿಡಿದ ಕರುನಾಡು; ಸರ್ಕಾರದ ಜತೆಗೆ ಜನರಿಂದಲೂ ನೆರವು!

Exit mobile version