Site icon Vistara News

Bageshwar Dham: ಯಾರು ಈ ಬಾಗೇಶ್ವರ್ ಬಾಬಾ? ಯಾಕೆ ಸುದ್ದಿಯಲ್ಲಿದ್ದಾರೆ ಈ ವ್ಯಕ್ತಿ?

Who is Baba of Bageshwar Dham and why is on trending

ನವದೆಹಲಿ: ಕೇವಲ 26 ವರ್ಷದ ಬಾಗೇಶ್ವರ್ ಬಾಬಾ (Bageshwar Dham) ಎಂಬ ಸ್ವಯಂ ಘೋಷಿತ ದೇವಮಾನವ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸುದ್ದಿ ಮಾಡುತ್ತಿದ್ದಾರೆ. ಮಧ್ಯಪ್ರದೇಶದ ಛತ್ತರ್‌ಪುರ್ ಜಿಲ್ಲೆಯ ಬಾಗೇಶ್ವರ್ ಧಾಮ್ (Bageswhar Dham) ದೇಗುಲದ ಪೀಠಾಧೀಶ್ವರ ಆಗಿರುವ ಬಾಗೇಶ್ವರ್ ಬಾಬಾ ಕಳೆದ ಕೆಲವು ದಿನಗಳಿಂದ ಟೀವಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗುತ್ತಿದ್ದಾರೆ. ಬಾಗೇಶ್ವರ್ ಬಾಬಾ ಅವರ ಹೆಸರು ಧೀರೇಂದ್ರ ಕೃಷ್ಣ ಶಾಸ್ತ್ರಿ. ಆದರೆ, ಅವರು ಬಾಗೇಶ್ವರ ಬಾಬಾ ಎಂದೇ ಜನರಲ್ಲಿ ಪ್ರಸಿದ್ಧರಾಗಿದ್ದಾರೆ. ಜತೆಗೆ, ಅವರನ್ನು ನೋಡಲು ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ನಾಯಕರು ಮುಂದಾಗುತ್ತಿದ್ದಾರೆ. ಪವಾಡ ಬಯಲು ತಜ್ಞರು, ಬಾಗೇಶ್ವರ್ ಬಾಬಾ ಅವರಿಗೆ ಸವಾಲು ಹಾಕಿದ್ದು, ಪವಾಡಗಳ ಕುರಿತು ಸತ್ಯ ಶೋಧನೆ ಮುಂದಾಗಿದ್ದಾರೆ. ಏತನ್ಮಧ್ಯೆ, ಜನರಲ್ಲಿ ಮೂಢ ನಂಬಿಕೆಗಳನ್ನು ಬಿತ್ತುತ್ತಿದ್ದಾರೆಂಬ ಆರೋಪವೂ ಇದೆ(Bageshwar Dham Row).

ಬಾಗೇಶ್ವರ್ ಬಾಬಾ ಅಲಿಯಾಸ್ ಶಾಸ್ತ್ರಿ ಅವರು ಸ್ವಯಂ ಘೋಷಿತ ದೇವಮಾನವ ಎನಿಸಿಕೊಂಡಿದ್ದಾರೆ. ಕಥಾ ಎಂಬ ಧಾರ್ಮಿಕ ಪ್ರವಚನ ನೀಡುವುದಕ್ಕಾಗಿ ಅವರು ದೇಶಾದ್ಯಂತ ಪ್ರವಾಸ ಕೈಗೊಳ್ಳುತ್ತಾರೆ. ಇತ್ತೀಚೆಗೆ, ಮಹಾರಾಷ್ಟ್ರ ಮೂಲದ ಮೂಢನಂಬಿಕೆ ವಿರೋಧಿ ಸಂಘಟನೆಯು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ತಮಗಿರುವ ನಿಗೂಢ, ಪವಾಡ ಶಕ್ತಿಯನ್ನು ಪದರ್ಶಿಸುವಂತೆ ಸವಾಲು ಹಾಕಿದ್ದರು.

ಆದರೆ, ಈ ಸವಾಲು ಪ್ರತಿಕ್ರಿಯಿಸಿದ ಬಾಬಾ, ಬಾಗೇಶ್ವರ ಬಾಲಾಜಿ ಮೇಲೆ ನನಗೆ ನಂಬಿಕೆ ಇದೆ. ಯಾರಾದರೂ ನನ್ನು ಮಾತುಗಳಿಗಾಗಿ ಕ್ಯಾಮೆರಾದ ಮುಂದೆ ಸವಾಲು ಹಾಕಬಹುದು. ನನಗೆ ಪ್ರೇರಣೆಯಾಗುವುದನ್ನು ನಾನು ಬರೆಯುತ್ತೇನೆ ಮತ್ತು ನಾನು ಬರೆದಿದ್ದು ನಿಜವಾಗುತ್ತದೆ ಎಂದು ಅವರು ತಿಳಿಸಿದ್ದರು.

ಕಥಾ ವಿಡಿಯೋ ವೈರಲ್

ಬಾಗೇಶ್ವರ್ ಬಾಬಾ ನಡೆಸುವ ಕಥಾ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಹೀಗೆ ವೈರಲ್ ಆದ ವಿಡಿಯೋವೊಂದರಲ್ಲಿ ಜನರ ಮಧ್ಯೆದಿಂದ ಪತ್ರಕರ್ತರೊಬ್ಬರನ್ನು ಬಾಬಾ ಕರೆಯುತ್ತಾರೆ. ಬಳಿಕ, ಅವರ ಕುಟುಂಬದ ಸದಸ್ಯರ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಬಾಬಾಗೆ, ತಮ್ಮ ಕುಟುಂಬದ ಸಂಪೂರ್ಣ ಮಾಹಿತಿ ತಿಳಿದಿರುವುದು ಅಸಾಧಾರಣ ಕಾರ್ಯವೆಂದು ಆ ಪತ್ರಕರ್ತರು ಘೋಷಿಸುತ್ತಾರೆ. ಆದರೆ, ಈ ಪತ್ರಕರ್ತನ ಬಗ್ಗೆ ಬಾಬಾ ಹೇಳಿದ ಮಾಹಿತಿ ಎಲ್ಲವೂ ಸೋಷಿಯಲ್ ಮೀಡಿಯಾಗಳಲ್ಲಿದೆ ಎಂದು ಜನರು ಹೇಳಿಕೊಂಡಿದ್ದಾರೆ.

ಬಿಜೆಪಿ ನಾಯಕರ ಬೆಂಬಲ

ಬಾಗೇಶ್ವರ್ ಬಾಬಾ ಅವರಿಗೆ ಬಿಜೆಪಿಯ ಅನೇಕ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಪಕ್ಷದ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಅವರು ಬಹಿರಂವಾಗಿಯೇ ಬಾಬಾ ಅವರನ್ನು ಬೆಂಬಲಿಸಿದ್ದಾರೆ. ದ್ವೇಷ ಭಾಷಣದಿಂದಲೇ ಕುಖ್ಯಾತಿ ಗಳಿಸಿರುವ ಬಿಜೆಪಿಯ ಮತ್ತೊಬ್ಬ ನಾಯಕ ಕಪಿಲ್ ಮಿಶ್ರಾ ಅವರು, ಶಾಸ್ತ್ರಿ ಪರವಾಗಿ ದಿಲ್ಲಿಯಲ್ಲಿ ರ್ಯಾಲಿಯನ್ನು ನಡೆಸಿದ್ದಾರೆ. ಬಾಬಾ ಅವರು ಲವ್ ಜಿಹಾದ್ ವಿರುದ್ಧ ಮಾತನಾಡಿದ್ದಕ್ಕಾಗಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಯಾರು ಬಾಬಾ

ಬಾಗೇಶ್ವರ್ ಬಾಬಾ ಅವರು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿರುವ ಬಾಗೇಶ್ವರ್ ಧಾಮ್ ಕ್ಷೇತ್ರದ ಧಾರ್ಮಿಕ ಮುಖಂಡರಾಗಿದ್ದಾರೆ. ಇವರ ಪೂರ್ತಿ ಹೆಸರು ಧೀರೇಂದ್ರ ಕೃಷ್ಣ ಶಾಸ್ತ್ರಿ. ಇವರು ಬಾಗೇಶ್ವರ ಬಾಬಾ ಎಂದೇ ಖ್ಯಾತರಾಗಿದ್ದಾರೆ. ಅವರ ಬೋಧಿಸುವ ಕಥಾಗಳು ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿವೆ. ಜತೆಗೆ, ಪವಾಡಗಳನ್ನು ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಜನರು ಆಕರ್ಷಿತರಾಗುತ್ತಿದ್ದಾರೆ. ಆದರೆ, ಪವಾಡಗಳ ಮೂಲಕ ಇವರು ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿದೆ.

ಇದನ್ನೂ ಓದಿ Balaji Temple | ಭಕ್ತರ ಪಾಲಿನ ಪವಾಡ ಪುರುಷ ಬಾಲಾಜಿ

ಕಳೆದ ಮೂರು ತಲೆಮಾರುಗಳಿಂದ ನಡೆದು ಬರುತ್ತಿರುವ ಪದ್ಧತಿಯಂತೆ ಆಂಜನೇಯ ಉಪಾಸನೆ ಮಾಡಿದ್ದಾರೆ. ಲಕ್ಷಾಂತರ ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಮೊದಲೇ ಅವರು ಅವರ ಸಮಸ್ಯೆಗಳ ಬಗ್ಗೆ ಬಾಬಾ ಮಾಹಿತಿ ನೀಡುತ್ತಾರೆ. ಇದು ಜನರನ್ನು ಆಕರ್ಷಿಸಲು ಕಾರಣವಾಗಿದೆ.

Exit mobile version