ರಾಂಚಿ: ಕಲ್ಲು ಗಣಿಗಾರಿಕೆ ಗುತ್ತಿಗೆ ವಿಚಾರದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರ ಗಾದಿಗೆ ಕುತ್ತು ಬಂದಿದ್ದು, ಅಧಿಕಾರ ಉಳಿಸಿಕೊಳ್ಳಲು ಅವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆಡಳಿತ ಪಕ್ಷಗಳಾದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಹಾಗೂ ಆರ್ಜೆಡಿ ಮೈತ್ರಿ ಶಾಸಕರು ರಾಜಭವನ ತಲುಪಿದ್ದು, ರಾಜ್ಯಪಾಲರ ಜತೆ ಚರ್ಚಿಸಲು ತೀರ್ಮಾನಿಸಿದ್ದಾರೆ.
ಗಣಿ ಗುತ್ತಿಗೆ ಮಂಜೂರು ಮಾಡಿಕೊಂಡ ಹಿನ್ನೆಲೆಯಲ್ಲಿ ಸಂಕಷ್ಟ ಸಿಲುಕಿರುವ ಹೇಮಂತ್ ಸೊರೆನ್ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ರಾಜ್ಯಪಾಲರ ಭೇಟಿ ಬಳಿಕ ಸಂಪುಟ ಸಭೆಯನ್ನೂ ಕರೆದಿರುವುದರಿಂದ ಅವರು ರಾಜೀನಾಮೆ ನೀಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಮೂರೂ ಪಕ್ಷಗಳ ಶಾಸಕರು ರಾಜ್ಯಪಾಲರನ್ನು ಭೇಟಿಯಾಗುತ್ತಿರುವುದು ಕುತೂಹಲ ಕೆರಳಿಸಿದೆ. ಜಾರ್ಖಂಡ್ನ ಒಟ್ಟು ೮೧ ಶಾಸಕರ ಪೈಕಿ ಮೈತ್ರಿ ಪಕ್ಷಗಳ ೪೯ ಶಾಸಕರು ರಾಜಭವನಕ್ಕೆ ತೆರಳಿದ್ದಾರೆ.
ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ಒಡೆತನದ ಗಣಿಗಾರಿಕೆಗೆ ತಾವೇ ಗುತ್ತಿಗೆ ಅನುಮತಿ ನೀಡಿರುವ ಕುರಿತು ಬಿಜೆಪಿ ನೀಡಿದ ದೂರಿನ ಮೇರೆಗೆ ಚುನಾವಣೆ ಆಯೋಗವು ಸೊರೆನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು ಎಂದು ಶಿಫಾರಸು ಮಾಡಿದೆ. ಹಾಗಾಗಿ, ಸೊರೆನ್ ಅವರು ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಇದನ್ನೂ ಓದಿ | ಶಾಸಕರು, ಸಚಿವರೊಂದಿಗೆ ಜಾರ್ಖಂಡ ಸಿಎಂ ಹೇಮಂತ್ ಸೊರೆನ್ ಫುಲ್ ಮಸ್ತಿ; ಬೋಟ್ ರೈಡ್