Site icon Vistara News

Viral Video | ಈ ಮಹಿಳೆ ಹೃದಯದಲ್ಲಿ ಇನ್ನೂ ರಾಮನಾಗಿಯೇ ಉಳಿದ ಅರುಣ್​ ಗೋವಿಲ್​; ಭಾವನಾತ್ಮಕ ನಮನ

Ramayana

ಮುಂಬೈ: ರಮಾನಂದ್​ ಸಾಗರ್​ ನಿರ್ದೇಶನದ ‘ರಾಮಾಯಣ’ ಧಾರಾವಾಹಿ ಮುಕ್ತಾಯಗೊಂಡು 34ವರ್ಷವೇ ಕಳೆದು ಹೋಗಿದೆ. ನಿರ್ದೇಶಕ ರಮಾನಂದ್​ ಸಾಗರ್ ಕೂಡ ಬದುಕಿಲ್ಲ. ಆದರೆ ರಾಮಾಯಣ ಧಾರಾವಾಹಿ ಮತ್ತು ಅದರ ಪಾತ್ರಧಾರಿಗಳ ಮೇಲೆ ವೀಕ್ಷಕರು ಇಟ್ಟಿದ್ದ ಪ್ರೀತಿ ಮಾತ್ರ ಇನ್ನೂ ಹಾಗೇ ಇದೆ. ಕಳೆದ ಲಾಕ್​ಡೌನ್​ ಸಮಯದಲ್ಲಿ ರಾಮಾಯಣವನ್ನು ಮರುಪ್ರಸಾರ ಮಾಡಿದಾಗ ಜನರು ಅದನ್ನು ಅಭೂತಪೂರ್ವವಾಗಿ ಸ್ವಾಗತಿಸಿದ್ದರು. ಅನೇಕರು ನೋಡಿ ಖುಷಿಪಟ್ಟಿದ್ದರು.

ರಾಮಾಯಣ ಪ್ರಸಾರವಾಗುತ್ತಿದ್ದ ಕಾಲದಲ್ಲಿ ಅದೆಷ್ಟರ ಮಟ್ಟಿಗೆ ಜನರು ಈ ಧಾರಾವಾಹಿಯನ್ನು, ಅದರ ಪಾತ್ರಧಾರಿಗಳನ್ನು ಪ್ರೀತಿಸುತ್ತಿದ್ದರು ಎಂದರೆ, ಅದರಲ್ಲಿರುವ ರಾಮ-ಲಕ್ಷ್ಮಣ, ಸೀತೆ, ಆಂಜನೇಯನೇ ನಿಜವಾದ ದೇವರುಗಳು ಎಂದು ಭಾವಿಸಿದವರೂ ಇದ್ದರು. ಅದರಲ್ಲೂ ಈ ಸೀರಿಯಲ್​​ನಲ್ಲಿ ರಾಮನ ಪಾತ್ರ ನಿಭಾಯಿಸಿದ್ದ ಅರುಣ್​ ಗೋವಿಲ್​ ಅನೇಕಾನೇಕ ಅಭಿಮಾನಿಗಳ ಪಾಲಿಗೆ ಸಾಕ್ಷಾತ್​ ರಾಮನೇ ಆಗಿಬಿಟ್ಟಿದ್ದರು. ಆದರೆ ಧಾರಾವಾಹಿ ಮುಗಿದು 34ವರ್ಷಗಳೇ ಕಳೆದು ಹೋದ ಮೇಲೂ ಅವರ ಚಾರ್ಮ್​ ಮಾಸಿಲ್ಲ. ಅವರಿನ್ನೂ ‘ರಾಮ’ನಾಗಿಯೇ ಉಳಿದಿದ್ದಾರೆ ಎಂಬುದಕ್ಕೆ ಇದೀಗ ವೈರಲ್​ ಆದ ವಿಡಿಯೊವೊಂದು ಸಾಕ್ಷಿ.

ಐಎಎಸ್​ ಅಧಿಕಾರಿ ಡಾ. ಸುಮಿತಾ ಮಿಶ್ರಾ ಎಂಬುವರು ಟ್ವಿಟರ್​​ನಲ್ಲಿ ವಿಡಿಯೊವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಮುಂಬೈ ಏರ್​ಪೋರ್ಟ್​​ಗೆ ಬಂದಿಳಿದ ಅರುಣ್​ ಗೋವಿಲ್​​ಗೆ ಮಹಿಳೆಯೊಬ್ಬರು ಸಾಷ್ಟಾಂಗ ನಮಸ್ಕಾರ ಮಾಡಿದ ದೃಶ್ಯವನ್ನು ಅದರಲ್ಲಿ ಕಾಣಬಹುದು. ‘ಅರುಣ್​ ಗೋವಿಲ್​ ತಮ್ಮ ಕುಟುಂಬದೊಂದಿಗೆ ಮುಂಬೈ ಏರ್​ಪೋರ್ಟ್​ನಲ್ಲಿದ್ದಾರೆ. ಅವರ ಕೈಗಳಲ್ಲಿ ದೊಡ್ಡ ಲಗೇಜ್​ಗಳು ಇವೆ. ಅವರನ್ನು ನೋಡಿದ್ದೇ ಮಹಿಳೆಯೊಬ್ಬರು ನೆಲಕ್ಕೆ ಬಾಗಿ, ಗೋವಿಲ್ ಪಾದ ಸ್ಪರ್ಶಿಸಿ ನಮಿಸಿದ್ದಾರೆ. ಗೋವಿಲ್​ ಪಾದ ಮುಟ್ಟಿ, ಅದೇ ಕೈಯನ್ನು ಕಣ್ಣಿಗೆ ಒತ್ತಿಕೊಂಡು, ತುಂಬ ಭಾವನಾತ್ಮಕವಾಗಿ ನಮಸ್ಕಾರ ಮಾಡಿದ್ದಾರೆ, ಬಳಿಕ ಅರುಣ್​ ಗೋವಿಲ್​ ಒಂದು ಶಾಲನ್ನು ಆಕೆಗೆ ಹೊದಿಸಿದ್ದಾರೆ’

1987ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಮುಗಿದರೂ, ಅದರಲ್ಲಿನ ರಾಮನ ಪಾತ್ರಧಾರಿ ಅರುಣ್​ ಗೋವಿಲ್​​ಗೆ ಅದೆಷ್ಟೋ ಜನರ ಹೃದಯದಲ್ಲಿ ರಾಮನಾಗಿಯೇ ಉಳಿದುಹೋಗಿದ್ದಾರೆ. ಅನೇಕರಿಗೆ ಅವರು ಸಾಕ್ಷಾತ್​ ಭಗವಂತ ಶ್ರೀರಾಮ ಎಂದು ವಿಡಿಯೋ ಶೇರ್ ಮಾಡಿಕೊಂಡ ಅಧಿಕಾರಿ ಡಾ. ಸುಮಿತಾ ಮಿಶ್ರಾ ಕ್ಯಾಪ್ಷನ್​ ಬರೆದಿದ್ದಾರೆ. ಭಾವನಾತ್ಮಕ ಕ್ಷಣದ ವಿಡಿಯೋ ಇಲ್ಲಿದೆ..

ಇದನ್ನೂ ಓದಿ: Viral Video | ಆಂಬ್ಯುಲೆನ್ಸ್​​ಗೆ ದಾರಿ ಬಿಡಲು, ತಮ್ಮ ಕಾರನ್ನು ರಸ್ತೆ ಪಕ್ಕ ನಿಲ್ಲಿಸಲು ಹೇಳಿದ ಪ್ರಧಾನಿ ಮೋದಿ

Exit mobile version