Site icon Vistara News

Shiva Rajkumar: ನಟ ಶಿವ ರಾಜ್‌ಕುಮಾರ್‌ ಸಿನಿಮಾ, ಜಾಹೀರಾತು ನಿಷೇಧಿಸಿ; ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Shivaraj kumar

ಬೆಂಗಳೂರು: ನಟ ಶಿವ ರಾಜ್‌ಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ (Shiva Rajkumar) ಅವರ ಸಿನಿಮಾ, ಜಾಹೀರಾತುಗಳನ್ನು ನಿಷೇಧ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಒಬಿಸಿ ಮೋರ್ಚಾ ದೂರು ಸಲ್ಲಿಸಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರು ಪ್ರಚಾರ ಆರಂಭಿಸಿದ್ದಾರೆ. ಹೀಗಾಗಿ ಪತ್ನಿಯ ಚುನಾವಣಾ ಪ್ರಚಾರಕ್ಕೆ ನಟ ಶಿವರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರೋಡ್‌ ಶೋ, ಬೃಹತ್ ಕಾಂಗ್ರೆಸ್‌ ಸಮಾವೇಶ ನಡೆದಿತ್ತು. ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬಿ.ಕೆ. ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

ಇದನ್ನೂ ಓದಿ | Lok Sabha Election 2024 : ಕೋಟ ಚುನಾವಣಾ ಖರ್ಚಿಗೆ 25,000 ರೂ. ನೀಡಿದ ಚುರುಮುರಿ ವ್ಯಾಪಾರಿ!

ಶಿವ ರಾಜ್‌ಕುಮಾರ್‌ ಜನಪ್ರಿಯ ನಟರಾಗಿದ್ದು, ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅದೇ ರೀತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪತ್ನಿ ಪರ ಪ್ರಚಾರ ಮಾಡುತ್ತಿರುವ ಶಿವ ರಾಜ್‌ಕುಮಾರ್‌ ಅವರ ಭಾವಚಿತ್ರವುಳ್ಳ ಫ್ಲೆಕ್ಸ್‌, ಸಿನಿಮಾಗಳು, ಪೋಸ್ಟರ್‌, ಜಾಹೀರಾತುಗಳನ್ನು ನಿಷೇಧ ಮಾಡಬೇಕು ಎಂದು ಚುನಾವಣಾ ಆಯೋಗಕ್ಕ ದೂರು ನೀಡಲಾಗಿದೆ.

ನೈರುತ್ಯ ಪದವೀಧರ ಕ್ಷೇತ್ರ; ಕಾಂಗ್ರೆಸ್​ನಿಂದ ಆಯನೂರು ಮಂಜುನಾಥ್​​ಗೆ ಟಿಕೆಟ್

ಬೆಂಗಳೂರು : ವಿಧಾನ ಪರಿಷತ್​ನ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯನ್ನು ಗುರುವಾರ ರಾತ್ರಿ ಘೋಷಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದಿದ್ದ ಹಿರಿಯ ಮುಖಂಡ ಆಯನೂರು ಮಂಜುನಾಥ್ (Ayanuru Manjunath)​ ಅವರಿಗೆ ಹೈಕಮಾಂಡ್​ ಮಣೆ ಹಾಕಿದೆ. ಈ ಮೂಲಕ ಕಾಂಗ್ರೆಸ್​ನ ಇನ್ನೊಬ್ಬರ ಆಕಾಂಕ್ಷಿ ಎಸ್​. ಪಿ ದಿನೇಶ್ ಅವರಿಗೆ ಹಿನ್ನಡೆಯಾಗಿದೆ. ದಿನೇಶ್ ಅವರು ಹಿಂದಿನ ಎರಡು ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಆ ವೇಳೆ ಬಿಜೆಪಿಯಲ್ಲಿದ್ದ ಆಯನೂರು ವಿರುದ್ಧ ಸೋತಿದ್ದರು. ಇದೀಗ ಕಾಂಗ್ರೆಸ್​ನಿಂದ ಆಯನೂರು ಕಣಕ್ಕೆ ಇಳಿದಿದ್ದಾರೆ.

ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಡುವೆ ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯನ್ನು ಪ್ರಕಟಿಸಿ ಕಾಂಗ್ರೆಸ್​ ಸಿದ್ಧತೆ ಆರಂಭಿಸಿದೆ. ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಕೊಡಗಿನ ಕೆ.ಕೆ.ಮಂಜುನಾಥ್‌ಗೆ ಕೆಪಿಸಿಸಿ ಅವಕಾಶ ಕೊಟ್ಟಿತ್ತು. ಆದರೆ, ಪದವೀಧರ ಕ್ಷೇತ್ರಕ್ಕೆ ಉಳಿಸಿಕೊಂಡಿತ್ತು. ಲೋಕಸಭೆ ಚುನಾವಣೆ ಅಬ್ಬರ ಆರಂಭಗೊಂಡ ನಂತರ ಪರಿಷತ್ ಚುನಾವಣೆಗೆ ಗೌಣವಾಗುತ್ತದೆ ಎಂಬ ಕಾರಣಕ್ಕೆ ತಕ್ಷಣವೇ ಅಭ್ಯರ್ಥಿಗಳನ್ನು ಘೋಷಿಸಿ ಎಂಬುದು ಆಕಾಂಕ್ಷಿಗಳ ಬೇಡಿಕೆಯಾಗಿತ್ತು. ಆದರೆ, ತೀವ್ರ ಪೈಪೋಟಿ ಇದ್ದ ಕಾರಣ ಅಂತಿಮ ಲೆಕ್ಕಾಚಾರ ಹಾಕಿ ಆಯನೂರು ಅವರಿಗೆ ಟಿಕೆಟ್ ಕೊಟ್ಟಿದೆ.

ಎಸ್.ಪಿ.ದಿನೇಶ್ ಹಿಂದಿನ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್​ನಿಂದ ಅವಕಾಶ ಪಡೆದುಕೊಂಡು ಪರಾಭವಗೊಂಡಿದ್ದರೂ, ಈ ಬಾರಿ ಉತ್ತಮ ವಾತಾವರಣವಿರುವುದರಿಂದ ಮತ್ತೊಂದು ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಆಯನೂರು ಮಂಜುನಾಥ್​ ಕಾಂಗ್ರೆಸ್ ಸೇರುವಾಗಲೇ ಟಿಕೆಟ್ ಬೇಡಿಕೆ ಇಟ್ಟಿದ್ದರು. ಹೀಗಾಗಿ ಟಿಕೆಟ್ ಅವರಿಗೇ ಕೊಡಲಾಗಿದೆ.

ಇದನ್ನೂ ಓದಿ : Congress Candidate List : ಕಾಂಗ್ರೆಸ್​ನ 3ನೇ ಪಟ್ಟಿ ಬಿಡುಗಡೆ; 57 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟ

ನೈಯತ್ಯ ಪದವೀಧರ ಕ್ಷೇತ್ರ ಅಸ್ತಿತಕ್ಕೆ ಬಂದಾಗಿನಿಂದಲೂ ಬಿಜೆಪಿ ಇಲ್ಲಿ ಪಾರಮ್ಯ ಸಾಧಿಸಿದೆ. ಆಯನೂರು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹೊರತಾಗಿಯೂ ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಪಕ್ಷ ತೊರೆದು ಹೋಗಿದ್ದ ಆಯನೂರು ಜೆಡಿಎಸ್​ ಸೇರಿದ್ದರು ಅಲ್ಲಿ ಪರಾಭವಗೊಂಡು ಬಳಿಕ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದರು. ಇದೀಗ ಬಿಜೆಪಿ ವಿರುದ್ಧವೇ ತೊಡೆ ತಟ್ಟಿದ್ದಾರೆ. ಈ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ(ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕು ಮಾತ್ರ) ಸೇರಿಕೊಂಡು ಒಟ್ಟಾರೆ 5 ಲೋಕಸಭೆ, 30 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ.

Exit mobile version