Site icon Vistara News

BJP Politics : ಬೈರತಿ ಸುರೇಶ್, ಶರಣ ಪ್ರಕಾಶ್‌ ಪಾಟೀಲ್‌ ರಾಜೀನಾಮೆಗೆ ಬಿಜೆಪಿ ಒತ್ತಾಯ

Byrathi Suresh and Sharana Prakash Patil

ಬೆಂಗಳೂರು: ಅಕ್ರಮ ಮತದಾರರ ಸೃಷ್ಟಿಗೆ ಸಚಿವ ಬೈರತಿ ಸುರೇಶ್ ಕಾರಣವಾಗಿದ್ದು, ಅವರು ಕೂಡಲೇ ರಾಜೀನಾಮೆ ಕೊಡಬೇಕು. ಅಲ್ಲದೆ, ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರ್ ಆತ್ಮಹತ್ಯೆ ಪ್ರಕರಣ ದಾರಿ ತಪ್ಪದೆ ಇರಲು ಶರಣ ಪ್ರಕಾಶ್‌ ಪಾಟೀಲ್‌ ಕೂಡ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದರು. ಈ ಮೂಲಕ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಬಿಜೆಪಿ (BJP Politics) ಆಕ್ರೋಶವನ್ನು ಹೊರಹಾಕಿದೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್. ರವಿಕುಮಾರ್, ಈ ಸರ್ಕಾರ ಅನೇಕ ಜನ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್‌ ದಾಖಲಿಸುತ್ತಿದೆ. ಹಣ ಸಂಗ್ರಹದಲ್ಲಿ ಮತ್ತು ಕುಕೃತ್ಯಗಳಲ್ಲಿ ಒಬ್ಬ ಸಚಿವರು ಇನ್ನೊಬ್ಬ ಸಚಿವರನ್ನು ಮೀರಿಸುತ್ತಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾದ ಕೃತ್ಯಗಳನ್ನೂ ಮಾಡುತ್ತಿದ್ದು, ಅದಕ್ಕೆ ಬೈರತಿ ಸುರೇಶ್ ಅವರು ತಾಜಾ ಉದಾಹರಣೆ ಎಂದು ಆಕ್ಷೇಪಿಸಿದರು.

ಬೈರತಿ ಸುರೇಶ್ ಅವರು ಅಕ್ರಮ ಮತದಾರರನ್ನು ಸೃಷ್ಟಿಸಿ ಗೆದ್ದು ಬಂದಿದ್ದಾರೆ. ಸಾವಿರಾರು ನಕಲಿ ಮತದಾರರನ್ನು ಸೃಷ್ಟಿಸಿದ್ದಾರೆ. ನಿನ್ನೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಎಂಎಸ್‍ಎಲ್ ಟೆಕ್ನೊ ಸೊಲ್ಯೂಷನ್ಸ್‍ನ ಮೌನೇಶ್ ಕುಮಾರ್ ಎನ್ನುವ ಕಿಂಗ್ ಪಿನ್ ಸಿಕ್ಕಿಬಿದ್ದಿದ್ದಾನೆ. ಆಗ ಅಕ್ರಮವಾಗಿ ಮತದಾರರನ್ನು ಸೃಷ್ಟಿಸುವ ಕುಕೃತ್ಯ, ಅಕ್ರಮವಾಗಿ ಫೋಟೊ ಸಂಗ್ರಹಿಸಿ ಆಧಾರ್ ಕಾರ್ಡ್ ಸೃಷ್ಟಿ, ಐಡಿಗಳ ಸೃಷ್ಟಿ ಸೇರಿದಂತೆ ನಕಲಿ ಡಿಎಲ್‌ಗಳು ಸಾವಿರಾರು ಸಂಖ್ಯೆಯಲ್ಲಿ ಪತ್ತೆಯಾಗಿವೆ ಎಂದು ಎನ್. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬೈರತಿ ಸುರೇಶ್ ರಾಜೀನಾಮೆ ಕೊಡಬೇಕು

ಬೇರೆ ಬೇರೆ ವಿಳಾಸದಲ್ಲಿ ಒಬ್ಬ ವ್ಯಕ್ತಿಯ ಎರಡು ಮೂರು ಆಧಾರ್ ಕಾರ್ಡ್ ಇರಬಾರದು. ಇದು ಸಂವಿಧಾನಬಾಹಿರ ಕುಕೃತ್ಯ. ಇದರ ಸಮರ್ಪಕ ತನಿಖೆ ಮಾಡಬೇಕು. ಎಷ್ಟು ಸಂಖ್ಯೆಯಲ್ಲಿ ನಕಲಿ ಮತದಾರರನ್ನು ಸೃಷ್ಟಿಸಿದ್ದಾರೆ. ಎರಡು, ಮೂರು ಆಧಾರ್ ಕಾರ್ಡ್ ಹೊಂದಿದವರ ಸಂಖ್ಯೆ ಎಷ್ಟು? ಇಂಥ ಎಷ್ಟು ಕೇಂದ್ರಗಳಿವೆ? ಇದೆಲ್ಲದರ ಸಂಪೂರ್ಣ ತನಿಖೆ ಆಗಬೇಕು. ನಿಷ್ಕಳಂಕ, ಪಾರದರ್ಶಕ, ಪ್ರಭಾವರಹಿತ ತನಿಖೆ ನಡೆಯಲು ಹಾಗೂ ತನಿಖೆ ಆಗಿ ವರದಿ ಬರುವವರೆಗೆ ಬೈರತಿ ಸುರೇಶ್ ರಾಜೀನಾಮೆ ಕೊಡಬೇಕು ಎಂದು ಎನ್. ರವಿಕುಮಾರ್ ಒತ್ತಾಯಿಸಿದರು.

ಮೌನೇಶ್ ಮಗನ ಜತೆ ಬೈರತಿ ಸುರೇಶ್ ಫೋಟೊ ಸಿಕ್ಕಿದೆ. ರಾಜ್ಯದಾದ್ಯಂತ ಇಂಥ ಲಕ್ಷಾಂತರ ನಕಲಿ ಮತದಾರರನ್ನು ಸೃಷ್ಟಿಸಿರಬಹುದು. ಆದ್ದರಿಂದ ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.‌ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಎನ್. ರವಿಕುಮಾರ್ ಹೇಳಿದರು.

ಕಿರುಕುಳದಿಂದಲೇ ಆತ್ಮಹತ್ಯೆ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರ್ ಅವರ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಶಿವಕುಮಾರ್ ಪೂಜಾರ್ ಅವರು ಡಾ. ಶರಣಪ್ರಕಾಶ್ ಪಾಟೀಲರ ಕಿರುಕುಳದಿಂದ ನೊಂದು, ಬೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಡಿದ ಕಾಮಗಾರಿಗಳಿಗೆ ಸಂಬಂಧಿಸಿದ ಬಾಕಿ ಹಣ ಬಿಡುಗಡೆ ವಿಳಂಬದ ಮೂಲಕ ಮತ್ತು ತಂದೆ ಜತೆ ಜಮೀನಿನಲ್ಲಿದ್ದ ವೇಳೆ ಸಾಕಷ್ಟು ಜನ ಹಲ್ಲೆ ಮಾಡಿದ್ದರಿಂದ ಅವರು ನೊಂದಿದ್ದರು. ಡಾ. ಶರಣಪ್ರಕಾಶ್ ಪಾಟೀಲರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆಡಿಯೊ ರೆಕಾರ್ಡ್ ಕೂಡ ಇದೆ ಎಂದು ಎನ್. ರವಿಕುಮಾರ್ ವಿವರಿಸಿದರು.

ಇದರ ನಡುವೆ ಅವರ ಮನೆಗೆ ಹೋಗಿ ಏನೋ ಮಾತುಕತೆ ನಡೆಸಿ, ಒತ್ತಡ ಹೇರಿದ್ದಾರೆ. ಹೀಗಾಗಿ ಶಿವಕುಮಾರ್‌ ಪೂಜಾರ್‌ ಅವರ ಪತ್ನಿಯಿಂದ “ನನ್ನ ಗಂಡ ಸಾಲ ಮಾಡಿದ್ದರು. ಬೇರೆ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ವಿನಃ ಬೇರೆ ಕಾರಣದಿಂದಲ್ಲ” ಎಂದು ದೂರು ಕೊಡುವಂತೆ ಮಾಡಿದ್ದಾರೆ. ಆದರೆ ಸತ್ಯ ಏನೆಂದರೆ ಡಾ. ಶರಣಪ್ರಕಾಶ್ ಪಾಟೀಲರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡ ಆಡಿಯೋ ರೆಕಾರ್ಡ್ ಇದೆ. ಸಾಕ್ಷಿಯೂ ಇದೆ ಎನ್. ರವಿಕುಮಾರ್ ಎಂದು ತಿಳಿಸಿದರು.‌

ಶಿರೋಳ್ಳಿಯ ಬಿಜೆಪಿ ಕಾರ್ಯಕರ್ತನ ಮನೆಗೆ ಭಾನುವಾರ ಬಿಜೆಪಿ ತಂಡ

ಈ ಭಾಗದಲ್ಲಿ ಇಬ್ಬರು ಸಚಿವರಿದ್ದು ದೊಡ್ಡ ಪ್ರಭಾವ ಬೀರಬಹುದು. ಈ ಸಂಬಂಧ ಪ್ರತ್ಯಕ್ಷ ಮಾಹಿತಿ ಪಡೆಯಲು ಭಾನುವಾರ (ಅಕ್ಟೋಬರ್‌ 22) ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ್ ಜಾಧವ್, ನಾನು, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಶಶೀಲ್ ನಮೋಶಿ, ಶಾಸಕರಾದ ಬಸವರಾಜ ಮತ್ತೀಮೂಡ್, ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಶಿವರಾಜ್ ಪಾಟೀಲ್ ರದ್ದೇವಾಡಿ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಮಾಜಿ ಶಾಸಕರಾದ ಸಿದ್ದು ಸವದಿ, ಮಾಜಿ ಶಾಸಕ ಹಾಗೂ ರಾಜ್ಯ ವಕ್ತಾರ ರಾಜಕುಮಾರ್ ಪಾಟೀಲ್ ತೇಲ್ಕೂರ್ ಸೇರಿ 12 ಜನರ ತಂಡವು ಶಿರೋಳ್ಳಿ ಗ್ರಾಮಕ್ಕೆ ತೆರಳಲಿದೆ. ಶಿವಕುಮಾರ್ ಪೂಜಾರ್ ಅವರ ಮನೆಗೆ ಭೇಟಿ ನೀಡಿ ಏನಾಗಿದೆ ಎಂಬ ವರದಿಯನ್ನು ತರಲಿದೆ. ಸರ್ಕಾರಕ್ಕೆ ಅದನ್ನು ಸಲ್ಲಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹಾಗೂ ಎನ್. ರವಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: Prof KS Bhagavan : ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಭಾಷಣ; ಭಗವಾನ್‌ ವಿರುದ್ಧ ಕೊನೆಗೂ FIR

ಸಿಐಡಿ ತನಿಖೆ ನಡೆಸುವುದಾಗಿ ಸರ್ಕಾರ ತಿಳಿಸಿದೆ. ಪ್ರಭಾವದ ಕಾರಣದಿಂದ ತನಿಖೆಯ ದಾರಿ ತಪ್ಪಬಾರದು ಎಂಬ ಕಾರಣಕ್ಕೆ ನಾಳೆಯೇ ನಾವು ತೆರಳುತ್ತೇವೆ ಎಂದು ವಿವರ ನೀಡಿದ್ದಾರೆ.

Exit mobile version