ಕೃಷ್ಣಾನಗರ: ಮತದಾನ ನಡೆಯುತ್ತಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸುತ್ತಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಶಕ್ತಿಶಾಲಿ ಸೂಚಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಂದಿಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಮತದಾರರು ಚುನಾವಣೆ ಪ್ರಕ್ರಿಯೆಯಲ್ಲಿ ತೋರಿಸುತ್ತಿರುವ ಉತ್ಸುಕತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಎರಡೂ ರಾಜ್ಯಗಳಲ್ಲಿ ಈ ಬಾರಿ ದಾಖಲೆ ಮಟ್ಟದ ಮತದಾನ ನಡೆಯುವ ವಿಶ್ವಾಸವಿದೆ ಎಂದ ಅವರು, ಜನರ ಉತ್ಸಾಹ ಪ್ರಜಾಪ್ರಭುತ್ವದ ಬಲವನ್ನು ಪ್ರತಿಬಿಂಬಿಸುತ್ತದೆ ಎಂದರು.
ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆ ಎಂದೂ ಅವರು ಹೇಳಿದರು.
ಇದೇ ವೇಳೆ, ಮೆಣಸಿನ ಕಾಯಿ ತಿಂದದ್ದು ನಾನು, ಖಾರ ತಟ್ಟಿದ್ದು ಟಿಎಂಸಿ ನಾಯಕರಿಗೆ ಎಂದು ವ್ಯಂಗ್ಯವಾಡಿದರು.
ಮೇ.4 ರಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ವಿಜಯದ ಸಂಭ್ರಮಾಚರಣೆ ನಡೆಯಲಿದೆ, ಆ ಸಂದರ್ಭದಲ್ಲಿ ಸಿಹಿ ಜತೆ ಮೆಣಸಿನ ಕಾಯಿಯನ್ನೂ ವಿತರಿಸಲಾಗುವುದು ಎಂದರು.
ಪಶ್ಚಿಮ ಬಂಗಾಳದಲ್ಲಿ ಜನರು ಕಮ್ಯೂನಿಸ್ಟರ ವಿರುದ್ಧವಾಗಿದ್ದರು. ಇವತ್ತು ಅವರು ಟಿಎಂಸಿಯ ಜಂಗಲ್ ರಾಜ್ ವಿರುದ್ಧ ಸೆಟೆದು ನಿಂತಿದ್ದಾರೆ ಎಂದು ಹೇಳಿದರು.

