Site icon Vistara News

IPL 2023 : ಆರ್​ಸಿಬಿ ನಾಯಕನ ಪ್ರಕಾರ ಕೆಕೆಆರ್​ ವಿರುದ್ಧ ಸೋಲಿಗೆ ಕಾರಣ ಯಾರು? ಪ್ಲೆಸಿಸ್​ ಹೇಳಿದ್ದೇನು?

According to the RCB captain, who was responsible for the defeat against KKR? What did Plessis say?

ಕೋಲ್ಕೊತಾ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​ 16ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ 81 ರನ್​ಗಳ ಹೀನಾಯ ಸೋಲಿಗೆ ಒಳಗಾಗಿದೆ. ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ಭರ್ಜರಿ 8 ವಿಕೆಟ್ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿದ್ದ ಆರ್​ಸಿಬಿ ತಂಡಕ್ಕೆ ಈ ಸೋಲಿನಿಂದ ಅವಮಾನವಾಗಿದೆ. ಅಭಿಮಾನಿಗಳು ಕೂಡ ಈ ಸೋಲಿನ ಬಗ್ಗೆ ಭಯಂಕರ ಬೇಸರ ವ್ಯಕ್ತಪಡಿಸಿದ್ದಾರೆ. ವಿಂಟೇಜ್​ ಆರ್​ಸಿಬಿ ಎಂದು ಸೋಶೀಯಲ್​ ಮೀಡಿಯಾಗಳಲ್ಲಿ ಅಭಿಯಾನ ನಡೆಸಿದ್ದಾರೆ. ಇಡೀ ತಂಡದ ವೈಫಲ್ಯವೇ ಸೋಲಿಗೆ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ನಾಯಕ ಫಾಫ್​ ಡು ಪ್ಲೆಸಿಸ್ ಈ ಬಗ್ಗೆ ಏನೆಂತಾರೆ ಕೇಳಿ ನೋಡಿ.

ಪಂದ್ಯದ ಮುಗಿದ ಬಳಿಕ ಮಾತನಾಡಿದ ನಾಯಕ ಫಾಫ್​ಡು ಪ್ಲೆಸಿಸ್​, ಈ ಸೋಲಿಗೆ ನಾವೆಲ್ಲರೂ ಕಾರಣ ಎಂದು ಹೇಳಿದ್ದಾರೆ. ನಿರೀಕ್ಷೆಗೆ ತಕ್ಕ ಹಾಗೆ ಆಡಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ನಮ್ಮ ಯೋಜನೆಗಳೆಲ್ಲರೂ ಬುಡಮೇಲಾಯಿತು ಎಂಬುದಾಗಿ ನುಡಿದಿದ್ದಾರೆ.

ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಲು ಆಹ್ವಾನ ಪಡೆದ ಆತಿಥೇಯ ಕೆಕೆಆರ್​ ತಂಡ ನಿಗದಿತ 20 ಓವರ್​ಗಳಲ್ಲಿ ಏಳು ವಿಕೆಟ್​ ನಷ್ಟ ಮಾಡಿಕೊಂಡು 204 ರನ್​ ಬಾರಿಸಿತ್ತು. ಈ ಮೂಲಕ ಬ್ಯಾಟಿಂಗ್​ ಆಹ್ವಾನ ನೀಡಿ ಎದುರಾಳಿ ತಂಡವನ್ನು ಕಟ್ಟಿ ಹಾಕಲು ಆರ್​ಸಿಬಿ ಬೌಲರ್​ಗಳು ವಿಫಲಗೊಂಡಿದ್ದರು. ಅದೇ ರೀತಿ ಚೇಸಿಂಗ್ ಆರಂಭಿಸಿದ ಆರ್​​ಸಿಬಿ ಬಳಗ 123 ರನ್​ಗಳಿಗೆ ಆಲ್​ಔಟ್​ ಆಗಿತ್ತು.

ಡೆತ್​ ಓವರ್​ ಬೌಲಿಂಗ್​ ಕಳವಳ

ಆರಂಭದಲ್ಲಿ ನಮ್ಮ ಬೌಲರ್​ಗಳು ಹಿಡಿತ ಸಾಧಿಸಿದ್ದರು. ಎದುರಾಳಿ ತಂಡ 100 ರನ್​ ಬಾರಿಸುವ ಮೂಲಕ ಐದು ವಿಕೆಟ್​ ಕಬಳಿಸಿ ನಿಯಂತ್ರಣ ಸಾಧಿಸಿದ್ದೆವು. ಆಧರೆ, ಮಧ್ಯಮ ಕ್ರಮಾಂಕದಲ್ಲಿ ಅಡಲು ಬಂದ ಶಾರ್ದೂಲ್​ ಠಾಕೂರ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅವರ ಅನಿರೀಕ್ಷಿತವಾಗಿ ಭರ್ಜರಿ ಬ್ಯಾಟಿಂಗ್​ ನಡೆಸಿದ್ದು ನಮ್ಮ ಸೋಲಿಗೆ ಕಾರಣವಾಯಿತು. ಹೀಗಾಗಿ ಎದುರಾಳಿ ತಂಡಕ್ಕೆ 20ರಿಂದ 25 ಹೆಚ್ಚುವರಿ ರನ್​ ಬಿಟ್ಟುಕೊಟ್ಟೆವು. ಡೆತ್​ ಓವರ್​ನಲ್ಲಿ ನಮ್ಮ ಬೌಲಿಂಗ್​ ಬಿಗುವಾಗಿರಲಿಲ್ಲ. ಹರ್ಷಲ್​ ಪಟೇಲ್​ ಹಾಗೂ ಮೊಹಮ್ಮದ್​ ಸಿರಾಜ್​ ಉತ್ತಮ ಬೌಲರ್​ ಆಗಿದ್ದರೂ ಎದುರಾಳಿ ತಂಡಕ್ಕೆ ನಿಯಂತ್ರಣ ಹೇರಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಫಾಫ್​ ಡು ಪ್ಲೆಸಿಸ್ ಹೇಳಿದ್ದಾರೆ.

ಈಡನ್​ ಗಾರ್ಡನ್ಸ್​​ ಉತ್ತಮ ವಿಕೆಟ್​ ಆಗಿತ್ತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಕ್ಕೂ ಪೂರಕವಾಗಿತ್ತು. ಆದರೆ, ನಮ್ಮ ಬ್ಯಾಟ್ಸ್​ಮನನ್​ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ. ಈ ಸೋಲಿನಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ತಪ್ಪುಗಳನ್ನು ಸರಿ ಮಾಡಿಕೊಂಡು ಮುಂದಿನ ಪಂದ್ಯದಲ್ಲಿ ಆಡಲಿದ್ದೇವೆ ಎಂದು ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

ಇದನ್ನೂ ಓದಿ : IPL 2023 : ತವರಿನಲ್ಲಿ ಕೆಕೆಆರ್ ಮಿಂಚು; ಆರ್​ಸಿಬಿಗೆ 81 ರನ್​ಗಳ ಹೀನಾಯ ಸೋಲು

ಕೋಲ್ಕೊತಾ ತಂಡದ ಬೌಲರ್​ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಸ್ಪಿನ್ನರ್​ಗಳಾದ ವರುಣ್​ ಚಕ್ರವರ್ತಿ ಹಾಗೂ ಸುನೀಲ್​ ನರೈನ್ ನಮ್ಮ ಮೇಲೆ ಹಿಡಿತ ಸಾಧಿಸಿಕೊಂಡರು. ಅವರ ಬೌಲಿಂಗ್​ ದಾಳಿಯನ್ನು ಎದುರಿಸಲು ನಮ್ಮ ಬ್ಯಾಟರ್​​ಗಳಿಗೆ ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಕೋಲ್ಕೊತಾ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟರ್​​ಗಳು ಬಹುತೇಕ ವೈಫಲ್ಯ ಎದುರಿಸಿದ್ದರು. ಆರಂಭದಲ್ಲಿ ವಿರಾಟ್​ ಕೊಹ್ಲಿ (21) ಹಾಗೂ ಫಾಫ್​ ಡು ಪ್ಲೆಸಿಸ್​ (23) ಸ್ವಲ್ಪ ರನ್​ ಪೇರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳಿಂದ ಅಗತ್ಯಕ್ಕೆ ತಕ್ಕ ಹಾಗೆ ರನ್​ ಬರಲಿಲ್ಲ. ಕೊನೆಯಲ್ಲಿ ಡೇವಿಡ್​ ವಿಲ್ಲಿ 20 ರನ್​ ಬಾರಿಸಿ ತಂಡದ ಮೊತ್ತ 100ರ ಗಡಿ ದಾಟುವಂತೆ ನೋಡಿಕೊಂಡರು.

Exit mobile version