Site icon Vistara News

IPL 2023 : ಆರ್​ಸಿಬಿಗೆ ಮತ್ತೊಂದು ಆಘಾತ, ಸ್ಟಾರ್ ಬ್ಯಾಟರ್​ ಮೊದಲಾರ್ಧಕ್ಕೆ ಅಲಭ್ಯ

Another shock for RCB, the star player is unavailable for the first half

#image_title

ಬೆಂಗಳೂರು: ಐಪಿಎಲ್ ಆರಂಭಕ್ಕೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಎಲ್ಲ ಫ್ರಾಂಚೈಸಿಗಳು ಅಭ್ಯಾಸ ಆರಂಭಿಸಿದ್ದಾರೆ. ಆದರೆ ಈ ಬಾರಿ ಗಾಯದ ಸಮಸ್ಯೆಯೇ ಎಲ್ಲ ತಂಡಗಳನ್ನು ಕಾಡುತ್ತಿದೆ. ಅಂತೆಯೇ ಆರ್​ಸಿಬಿ ತಂಡವೂ ಮತ್ತೊಂದು ಆಘಾತಕ್ಕೆ ಒಳಗಾಗಿದ್ದು ತಂಡದ ಸ್ಟಾರ್ ಬ್ಯಾಟರ್​ ರಜತ್​ ಪಾಟೀದಾರ್​ ಟೂರ್ನಿಯ ಆರಂಭದಲ್ಲಿ ಆಡುವುದಿಲ್ಲ ಎಂದು ಹೇಳಲಾಗಿದೆ. ಹಿಮ್ಮಡಿ ನೋವಿನ ಸಮಸ್ಯೆಗೆ ಒಳಗಾಗಿರುವ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿರುವ ಕಾರಣ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಇಎಸ್​ಪಿಎನ್​ ಕ್ರಿಕ್​ಇನ್ಫೋ ಹೇಳಿದೆ.

ರಜತ್​ ಪಾಟೀದಾರ್​ ಆರ್​ಸಿಬಿ ತಂಡದ ಬ್ಯಾಟಿಂಗ್ ವಿಭಾಗದ ಬಲ ಎನಿಸಿಕೊಂಡಿದ್ದರು. ಬಲಗೈ ಬ್ಯಾಟರ್​ ಆರ್​ಸಿಬಿ ತಂಡದ ಪರ ಶತಕ ಕೂಡ ಬಾರಿಸಿ ಮಿಂಚಿದ್ದಾರೆ. ಕಾಲು ನೋವಿನ ಸಮಸ್ಯೆಯಿಂದಾಗಿ ಅವರು ಆರಂಭಿಕ ಹಂತದ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವುದರಿಂ ಮತ್ತೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಬೇಕಾಗಿದೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಿದರೆ. ಫಿನ್​ ಅಲೆನ್ ಅಥವಾ ಅನುಜ್​​ ರಾವತ್​ ಫಾಫ್​ ಡು ಪ್ಲೆಸಿಸ್​ ಜತೆ ಆರಂಭಿಕರಾಗಿ ಬ್ಯಾಟ್ ಮಾಡಬೇಕಾಗುತ್ತದೆ.

ರಜತ್​ ಪಾಟೀದಾರ್​ 2022ನೇ ಆವೃತ್ತಿಯಲ್ಲಿ ಗಮನ ಸೆಳೆದಿದ್ದರು. ಲವ್​​ನಿತ್​ ಸಿಸೋಡಿಯಾ ಅವರ ಅನುಪಸ್ಥಿತಿಯಲ್ಲಿ ಅವಕಾಶ ಪಡೆದ ಪಾಟೀದಾರ್​ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದರು. ಲಖನೌ ಸೂಪರ್​ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ 54  ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದ ಅವರು ಭಾರತ ಆಟಗಾರರ ಪರ ಐಪಿಎಲ್​ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ಸೃಷ್ಟಿಸಿದ್ದರು. ಅವರು ಕೇವಲ 49 ಎಸೆತಗಳಲ್ಲಿ ಮೂರಂಕಿ ಮೊತ್ತ ಸಾಧಿಸಿದ್ದರು. ಏಳು ಪಂದ್ಯಗಳಲ್ಲಿ 55.50 ಸರಾಸರಿಯಂತೆ 333 ರನ್​ ಬಾರಿಸಿದ್ದರು. ಅದರಲ್ಲಿ ಒಂದು ಶತಕ ಹಾಗೂ ಮೂರು ಅರ್ಧ ಶತಕಗಳು ಸೇರಿಕೊಂಡಿವೆ.

ರಜತ್​ ಪಾಟೀದಾರ್​ 2021-22ರ ರಣಜಿ ಟ್ರೋಫಿಯಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಆರು ಪಂದ್ಯಗಳಲ್ಲಿ 658 ರನ್​ಗಳನ್ನು ಬಾರಿಸಿದ್ದರು. ಆರ್​ಸಿಬಿ ತಂಡ ಏಪ್ರಿಲ್​ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ತಂಡ ಮುಂಬಯಿ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : WPL 2023: ಫೈನಲ್​ಗೆ ಲಗ್ಗೆಯಿಟ್ಟ ಖಷಿಯಲ್ಲಿ ತಂಡದ ಆಟಗಾರ್ತಿಯರೊಂದಿಗೆ ಕುಣಿದು ಕುಪ್ಪಳಿಸಿದ ನೀತಾ ಅಂಬಾನಿ; ವಿಡಿಯೊ ವೈರಲ್

ಇಂಗ್ಲೆಂಡ್​ ತಂಡದ ಆಲ್​ರೌಂಡರ್​ ವಿಲ್​ ಜಾಕ್ಸ್​ ಗಾಯಗೊಂಡಾಲೇ ಆರ್​ಸಿಬಿ ತಂಡ ಆಘಾತ ಎದುರಿಸಿತ್ತು. ಆ ಬಳಿಕ ನ್ಯೂಜಿಲ್ಯಾಂಡ್​ ಆಲ್​ರೌಂಡರ್​ ಮೈಕೆಲ್​ ಬ್ರೇಸ್​ವೆಲ್​ ಅವರನ್ನು ಒಂದು ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿತ್ತು. ಅದೇ ರೀತಿ ಟೂರ್ನಿಯ ಮೊದಲ ಕೆಲವು ಪಂದ್ಯಗಳಿಗೆ ಶ್ರೀಲಂಕಾದ ಸ್ಪಿನ್ನರ್​ ವಾನಿಂದು ಹಸರಂಗ ಅವರೂ ಇರುವುದಿಲ್ಲ. ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಅವರು ಅಲ್ಲಿ ಏಕ ದಿನ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Exit mobile version