Site icon Vistara News

IPL Betting : ಐಪಿಎಲ್​ ಬೆಟ್ಟಿಂಗ್​ ಕೇಸ್​​ ತನಿಖೆ ಕೈಬಿಟ್ಟ ಸಿಬಿಐ!

IPL Betting Case

ನವದೆಹಲಿ: ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್​ / ಫಿಕ್ಸಿಂಗ್ (IPL Betting) ಆರೋಪಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳ ತನಿಖೆಯನ್ನು ಸಿಬಿಐ ಮುಕ್ತಾಯಗೊಳಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಪಾಕಿಸ್ತಾನದಿಂದ ಬಂದ ಮಾಹಿತಿಯ ಆಧಾರದ ಮೇಲೆ 2019ರ ಆವೃತ್ತಿಯ ವೇಳೆ ಫಿಕ್ಸಿಂಗ್ ನಡೆದಿತ್ತು ಎಂದು ಆರೋಪಿಸಲಾಗಿತ್ತು.

ಕ್ರಿಕೆಟ್ ಬೆಟ್ಟಿಂಗ್​ ಜಾಲವೊಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಪಾಕಿಸ್ತಾನದಿಂದ ಬಂದ ಮಾಹಿತಿ ಬಂದಿತ್ತು. ಈ ಪ್ರಕರಣದಲ್ಲಿ ಸಿಬಿಐ 2022 ರ ಮೇ ತಿಂಗಳಲ್ಲಿ ಏಳು ಜನರ ವಿರುದ್ಧ ಎರಡು ಎಫ್​ಐಆರ್​​ ದಾಖಲಿಸಿತ್ತು.

ಸಿಬಿಐ ತನ್ನ ಮೊದಲ ಎಫ್ಐರ್​ನಲ್ಲಿ ದೆಹಲಿಯ ರೋಹಿಣಿ ಪ್ರದೇಶದ ದಿಲೀಪ್ ಕುಮಾರ್ ಮತ್ತು ಹೈದರಾಬಾದ್ ಮೂಲದ ಗುರ್ರಾಮ್ ವಾಸು ಮತ್ತು ಗುರ್ರಾಮ್ ಸತೀಶ್ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿತ್ತು. ರಾಜಸ್ಥಾನ ಮೂಲದ ಸಜ್ಜನ್ ಸಿಂಗ್, ಪ್ರಭು ಲಾಲ್ ಮೀನಾ, ರಾಮ್ ಅವತಾರ್ ಮತ್ತು ಅಮಿತ್ ಕುಮಾರ್ ಶರ್ಮಾ ಅವರನ್ನು ಎರಡನೇ ಎಫ್​ಐಆರ್​ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿತ್ತು.

ಸುಮಾರು ಎರಡು ವರ್ಷಗಳ ತನಿಖೆಯ ನಂತರ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿಬಿಐಗೆ ಸಾಕಷ್ಟು ಪುರಾವೆಗಳು ಸಿಕ್ಕಿರಲಿಲ್ಲ. ಅಂತೆಯೇ ಸಿಬಿಐ ಡಿಸೆಂಬರ್ 23 ರಂದು ವಿಶೇಷ ನ್ಯಾಯಾಲಯದಲ್ಲಿ ಮುಕ್ತಾಯ ವರದಿಯನ್ನು ಸಲ್ಲಿಸಿದೆ. ಅದರಲ್ಲಿ ಆರೋಪಗಳು ಮತ್ತು ಈ ವಿಷಯದಲ್ಲಿ ತನಿಖೆಯ ವಿವರವಾದ ವಿವರಣೆ ನೀಡಿದೆ. ಜತೆಗೆ ಪ್ರಕರಣವನ್ನು ಮುಕ್ತಾಯಗೊಳಿಸಲು ಕಾರಣಗಳನ್ನು ಉಲ್ಲೇಖಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಸಲ್ಲಿಸಿದ ವರದಿಯನ್ನು ಸ್ವೀಕರಿಸಬೇಕೇ ಅಥವಾ ಹೆಚ್ಚಿನ ತನಿಖೆಯನ್ನು ಮುಂದುವರಿಸಲು ಆದೇಶಿಸಬೇಕೇ ಎಂದು ನಿರ್ಧರಿಸುವುದು ಈಗ ನ್ಯಾಯಾಲಯಕ್ಕೆ ಬಿಟ್ಟಿದ್ದು. ಆರೋಪಿಗಳು 10-13 ವರ್ಷಗಳಿಂದ ಬೆಟ್ಟಿಂಗ್​ ದಂಧೆ ನಡೆಸುತ್ತಿದ್ದು, ಅವರ ಖಾತೆಗಳಿಂದ ಅನುಮಾನಾಸ್ಪದ ವಹಿವಾಟುಗಳನ್ನು ನಡೆದಿದೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಪಾಕಿಸ್ತಾನದ ವ್ಯಕ್ತಿಗಳ ಜತೆ ಸಂಪರ್ಕ

ಆರೋಪಿಗಳು ಪಾಕಿಸ್ತಾನದ ಮೊಬೈಲ್ ಸಂಖ್ಯೆಯ ಮೂಲಕ ಪಾಕಿಸ್ತಾನಿ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಪಾಕಿಸ್ತಾನದ ವ್ಯಕ್ತಿಗಳಿಂದ ಪ್ರೇರಣೆ ಪಡೆದಿರುವ ಎರಡು ನೆಟ್​ವರ್ಕ್​​ಗಳು “ಬೆಟ್ಟಿಂಗ್ಗೆ ಪ್ರಚೋದಿಸುವ ಮೂಲಕ ಸಾರ್ವಜನಿಕರನ್ನು ಮೋಸ ಮಾಡುತ್ತಿವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಅಪರಿಚಿತ ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಗುರುತುಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಕೆವೈಸಿ ದಾಖಲೆಗಳನ್ನು ಮಾಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಿಸಲಾಗಿದೆ. ದಿಲೀಪ್ ಕುಮಾರ್ ಹಲವಾರು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಅದರಲ್ಲಿ 2013ರಿಂದ 43 ಲಕ್ಷ ರೂ.ಗಿಂತ ಅಧಿಕ ಮೊತ್ತ ಠೇವಣಿ ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಗುರ್ರಾಮ್ ಸತೀಶ್ ನಿರ್ವಹಿಸುತ್ತಿರುವ ಆರು ಬ್ಯಾಂಕ್ ಖಾತೆಗಳಲ್ಲಿ 2012-20ರ ಅವಧಿಯಲ್ಲಿ 4.55 ಕೋಟಿ (ದೇಶೀಯ) ಮತ್ತು 3.05 ಲಕ್ಷ (ವಿದೇಶಿ) ನಗದು ಠೇವಣಿ ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಗುರ್ರಾಮ್ ವಾಸು ಇದೇ ಅವಧಿಯಲ್ಲಿ 5.37 ಕೋಟಿ ರೂ ವಹಿವಾಟು ಮಾಡಿದ್ದರು.

ಹಲವು ಬ್ಯಾಂಕ್ ಖಾತೆಗಳು

2019 ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಸಮಯದಲ್ಲಿ ಈ ವ್ಯಕ್ತಿಗಳ ಜಾಲವು ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಭಾಗಿಯಾಗಿದೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ. ಭಾಗಿಯಾಗಿರುವ ವ್ಯಕ್ತಿಗಳು ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರಿಂದ ಬೆಟ್ಟಿಂಗ್ ಅನ್ನು ಪ್ರಚೋದಿಸುವ ಮೂಲಕ ವಂಚನೆ ಮಾಡುತ್ತಿದ್ದಾರೆ. ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮೋಸದಿಂದ ಪಡೆಯುತ್ತಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವಲ್ಲಿ ತಮ್ಮ ಗುರುತು ನಕಲಿ ಮಾಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ.

ದೆಹಲಿ ಮತ್ತು ಇತರ ಸ್ಥಳಗಳಲ್ಲಿ 2019ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಸಮಯದಲ್ಲಿ ಈ ವ್ಯಕ್ತಿಗಳ ಜಾಲವು ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಭಾಗಿಯಾಗಿದೆ ಎಂದು ಎಂದು ಎಫ್​ಐಆರ್​ನಲ್ಲಿ ಆರೋಪಿಸಲಾಗಿದೆ.

Exit mobile version