Site icon Vistara News

Davis Cup: ಮೊದಲ ದಿನವೇ ಪಾಕಿಸ್ತಾನ​ ವಿರುದ್ಧ 2-0 ಮುನ್ನಡೆ ಸಾಧಿಸಿದ ಭಾರತ

Ramkumar Ramanathan gave India early lead vs Pakistan in Islamabad

ಇಸ್ಲಾಮಾಬಾದ್‌: 60 ವರ್ಷಗಳ ಸುದೀರ್ಘ‌ ಅವಧಿಯ ಬಳಿಕ ಪಾಕಿಸ್ತಾನದಲ್ಲಿ ಡೇವಿಸ್‌ ಕಪ್‌ ಆಡಲಿಳಿದ ಭಾರತ ಮೊದಲ ದಿನವೇ ಅದ್ಭುತ ಪ್ರದರ್ಶನ ತೋರಿದೆ. ರಾಮ್ ಕುಮಾರ್ ರಾಮನಾಥನ್(Ramkumar Ramanathan) ಮತ್ತು ಶ್ರೀರಾಮ್ ಬಾಲಾಜಿ(Sriram Balaji) ಗೆಲುವು ಸಾಧಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟಿದ್ದಾರೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶನಿವಾರ ನಡೆದ ವರ್ಲ್ಡ್ ಗ್ರೂಪ್‌ 1 ಪ್ಲೇ-ಆಫ್ ಸ್ಪರ್ಧೆಯಲ್ಲಿ ಭಾರತದ ರಾಮ್ ಕುಮಾರ್ ರಾಮನಾಥನ್ ಮತ್ತು ಎನ್ ಶ್ರೀರಾಮ್ ಬಾಲಾಜಿ ಗೆಲುವು ಸಾಧಿಸಿದ್ದಾರೆ.

ರಾಮ್‌ಕುಮಾರ್ ಪಂದ್ಯದ ಎರಡನೇ ಸೆಟ್‌ನಲ್ಲಿ ಬಲಿಷ್ಠ ಸರ್ವಗಳ ಮೂಲಕ ಅಂಕ ಕಲೆಹಾಕುವಲ್ಲಿ ಯಶಸ್ವಿಯಾದರು. ಅಂತಿಮವಾಗಿ 6-7 (3) 7-6 (4), 6-0 ಅಂತರದಿಂದ ಮೇಲುಗೈ ಸಾಧಿಸಿದರು. ಮಳೆ ಪೀಡಿತ ಪಂದ್ಯದ ಎರಡನೇ ಸಿಂಗಲ್ಸ್‌ನಲ್ಲಿ ಡಬಲ್ಸ್ ಸ್ಪೆಷಲಿಸ್ಟ್ ಆಗಿರುವ ಬಾಲಾಜಿ ಅವರಿಗೆ ಒಂದು ಹಂತದಲ್ಲಿ ಪಾಕ್​ನ ಅಖೀಲ್ ಖಾನ್ ತೀವ್ರ ಸವಾಲು ಒಡ್ಡಿದರು. ಈ ಸಾವನ್ನು ದಿಟ್ಟ ರೀತಿಯಲ್ಲಿ ಎದುರಿಸಿದ ಭಾರತದ ಅನುಭವಿ ಆಟಗಾರ ಅಂತಿಮವಾಗಿ 7-5, 6-3 ಸೆಟ್‌ಗಳಿಂದ ಪಾಕ್​ ಆಟಗಾರನಿಗೆ ಸೋಲಿನ ರುಚಿ ತೋರಿಸಿದರು.

ಇದನ್ನೂ ಓದಿ Davis Cup: ಪಾಕ್​ನಲ್ಲಿ ಭಾರತ ಟೆನಿಸ್​ ತಂಡಕ್ಕೆ ಹೇಗಿದೆ ಭದ್ರತಾ ವ್ಯವಸ್ಥೆ?

ಭಾನುವಾರ 2 ಸಿಂಗಲ್ಸ್ ಹಾಗೂ 1 ಡಬಲ್ಸ್ ಪಂದ್ಯಗಳು ನಡೆಯಲಿವೆ. ಈ ಪೈಕಿ ಭಾರತಕ್ಕೆ ಒಂದು ಪಂದ್ಯದ ಗೆಲುವು ಅತ್ಯಗತ್ಯ. ಈ ಗೆಲುವು ದಕ್ಕಿದರೆ ಭಾರತ ವಿಶ್ವ ಗ್ರೂಪ್ 1ಕ್ಕೆ ಅರ್ಹತೆ ಪಡೆಯಲಿದೆ. ನಾಳೆ ನಡೆಯುವ ಮೂರನೇ ಪಂದ್ಯದಲ್ಲಿ ಭಾರತದ ಯೂಕಿ ಭಾಂಬ್ರಿ ಮತ್ತು ಸಾಕೇತ್ ಮೈನೇನಿ ಅವರು ಪಾಕ್‌ನ ಮುಜಮ್ಮಿಲ್ ಮುರ್ತಾಜಾ ಮತ್ತು ಬರ್ಕತ್ ಉಲ್ಲಾ ಅವರನ್ನು ಎದುರಿಸಲಿದ್ದಾರೆ. ಪಾಕಿಸ್ತಾನ ವಿರುದ್ಧ ಭಾರತ ಈ ವರೆಗೂ ಡೇವಿಸ್ ಕಪ್‌ನಲ್ಲಿ 7 ಬಾರಿ ಆಡಿದ್ದು, ಎಲ್ಲಾ ಬಾರಿಯೂ ಗೆಲುವು ಸಾಧಿಸಿದೆ. ಈ ಬಾರಿಯೂ ಜಯದ ಕಾತರದಲ್ಲಿದೆ.

ಭಾರತ ತಂಡ 1964 ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿ ಡೇವಿಸ್‌ ಕಪ್ ಆಡಿತ್ತು. ಇದರಲ್ಲಿ ಭಾರತ 4-0 ಅಂತರದಿಂದ ಜಯಗಳಿಸಿತ್ತು.

5 ಹಂತದ ಭದ್ರತೆ


ಭಾರತ ತಂಡಕ್ಕೆ ನಾಲ್ಕರಿಂದ ಐದು ಹಂತಗಳ ಭದ್ರತೆ ಕಲ್ಪಿಸಲಾಗಿದೆ. ಇಸ್ಲಾಮಾಬಾದ್ ಏಷ್ಯಾದ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವುದರಿಂದ ಭದ್ರತೆ ಈಗಾಗಲೇ ಬಿಗಿಯಾಗಿದೆ. ನಗರದಲ್ಲಿ ಸುಮಾರು ಹತ್ತು ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಾರತೀಯ ಆಟಗಾರರ ಸುರಕ್ಷತೆ ಮತ್ತು ಭದ್ರತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆ ಉಂಟಾದರು ಕೂಡ ಪಂದ್ಯಗಳನ್ನು ಆಡುವುದಿಲ್ಲ ಎಂದು ಪಿಟಿಎಫ್ ಪ್ರಧಾನ ಕಾರ್ಯದರ್ಶಿ ಕರ್ನಲ್ ಗುಲ್ ರೆಹಮಾನ್ ಟೂರ್ನಿ ಆರಂಭಕ್ಕೂ ಮುನ್ನವೇ ಸುದ್ದಿಸಂಸ್ಥೆ ಪಿಟಿಐ ಜತೆ ಮಾತನಾಡುವ ವೇಳೆ ತಿಳಿಸಿದ್ದರು.

Exit mobile version