Site icon Vistara News

IPL 2023 : ರಿಷಭ್​ ಪಂತ್​ ಅಲಭ್ಯತೆ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಕಾಡುತ್ತಿದೆ ಎಂದ ನಿರ್ದೇಶಕ ಸೌರವ್​ ಗಂಗೂಲಿ

Director Sourav Ganguly says Rishabh Pant's unavailability is bothering the Delhi Capitals team.

#image_title

ನವ ದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡಿರುವ ವಿಕೆಟ್​ಕೀಪರ್​ ಬ್ಯಾಟರ್​ ರಿಷಭ್​ ಪಂತ್​ ಈ ಬಾರಿಯ ಐಪಿಎಲ್​ಗೆ (IPL 2023) ಅಲಭ್ಯರಾಗಿದ್ದಾರೆ. ಅವರು ಎಷ್ಟು ಕಾಲ ಸುಧಾರಿಸಿಕೊಳ್ಳುವುದಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಕೆಲವರು ಇನ್ನೊಂದು ವರ್ಷ ಬೇಕಾಗಬಹುದು ಎಂದರೆ ಇನ್ನೂ ಕೆಲವರು ಎರಡು ವರ್ಷ ಎಂದು ಹೇಳುತ್ತಿದ್ದಾರೆ. ಆದರೆ, ಟೀಮ್​ ಇಂಡಿಯಾವೇ ಆಗಲಿ, ಐಪಿಎಲ್​ನ ಡೆಲ್ಲಿ ಕ್ಯಾಪಿಟಲ್ಸ್​ ತಂಡವೇ ಆಗಲಿ, ಪಂತ್​ ಅಲಭ್ಯತೆಯ ಕೊರಗು ಎದುರಿಸುತ್ತಿದೆ. ಹಿರಿಯ ಆಟಗಾರರ ಮಾತಲ್ಲಿ ಅದು ಬಹಿರಂಗವಾಗುತ್ತಿದೆ. ಅಂತೆಯೇ ಐಪಿಎಲ್ ಆರಂಭದ ಹಿನ್ನೆಲೆಯಲ್ಲಿ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಿರ್ದೇಶಕ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಪಂತ್​ ಅಲಭ್ಯತೆಯು ಡೆಲ್ಲಿ ಬಳಗದೊಳಗೆ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.

ರಿಷಭ್​ ಪಂತ್​ ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ತಂಡವೂ ಅವರ ಸೇವೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು ನನಗೆ ಖಾತರಿಯಿದೆ. ಅವರು ಯುವ ಆಟಗಾರನಾಗಿದ್ದು ತಮ್ಮ ವೃತ್ತಿ ಕ್ರಿಕೆಟ್​ನಲ್ಲಿ ಸಾಧನೆ ಮಾಡಲು ಸಾಕಷ್ಟು ಸಮಯ ಹೊಂದಿದ್ದಾರೆ. ಅವರೊಬ್ಬ ವಿಶೇಷ ಕ್ರಿಕೆಟ್​ ಪ್ರತಿಭೆ ಎಂಬುದನ್ನು ನಾನು ಪ್ರತಿ ಬಾರಿಯೂ ಹೇಳುತ್ತೇನೆ ಎಂದು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಂಪ್​ ಆರಂಭಕ್ಕೆ ಮೊದಲು ಅವರು ಹೇಳಿದರು.

ರಿಷಭ್​ ಪಂತ್​ ಆದಷ್ಟು ಬೇಗ ತಂಡಕ್ಕೆ ಮರಳಲಿ ಎಂದು ನಾನು ಬಯುಸುತ್ತೇನೆ. ಆದರೆ, ಅದಕ್ಕೆ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಲಿ. ಅವರು ಸಂಪೂರ್ಣವಾಗಿ ಗುಣಮುಖರಾದ ಬಳಿಕವಷ್ಟೇ ತಂಡಕ್ಕೆ ಬರಬೇಕು. ಆತುರ ಆತುರವಾಗಿ ತಂಡಕ್ಕೆ ಮರಳುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.

ರಿಷಭ್ ಪಂತ್​ ಕಳೆದ ವರ್ಷಾಂತ್ಯದಲ್ಲಿ ತಮ್ಮ ಕಾರಿನ ಮೂಲಕ ಡೆಲ್ಲಿಯಿಂದ ಡೆಹ್ರಾಡೂನ್​ಗೆ ಪ್ರಯಾಣ ಮಾಡುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ದರು. ಅವರ ಕಾರು ಡಿವೈಡರ್​ಗೆ ಗುದ್ದಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಘಟನೆಯಲ್ಲಿ ಸುಟ್ಟಗಾಯಗಳು ಹಾಗೂ ಮಂಡಿಯ ಮುರಿತಕ್ಕೆ ಒಳಗಾಗಿದ್ದರು. ಮೊದಲು ಡೆಹ್ರಾಡೂನ್​ನಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಮುಂಬಯಿಯ ಕೊಕಿಲಾ ಬೆನ್​ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ರಿಷಭ್​ ಪಂತ್​ ಭೇಟಿಯಾದ ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್

ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್​ ಪಂತ್(Rishabh Pant)​ ಅವರನ್ನು ಟೀಮ್​ ಇಂಡಿಯಾದ ಮಾಜಿ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್(Yuvraj Singh)​ ಭೇಟಿಯಾಗಿದ್ದಾರೆ. ಉಭಯ ಆಟಗಾರರು ಭೇಟಿಯಾದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

“ಪಂತ್​ ಅವರನ್ನು ಭೇಟಿಯಾದ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಯುವರಾಜ್​ ಸಿಂಗ್​ “ಚಾಂಪಿಯನ್​ ಮತ್ತೆ​ ರೆಡಿಯಾಗುತ್ತಿದ್ದಾರೆ ” ಎಂದು ಬರೆದುಕೊಂಡಿದ್ದಾರೆ.

“ಮಗುವಿನ ಹೆಜ್ಜೆಗಳ ಮೇಲೆ! ಈ ಚಾಂಪಿಯನ್ ಮತ್ತೆ ಮರಳಲಿದ್ದಾರೆ. ಸುದೀರ್ಘ ಮಾತುಕತೆ ಮತ್ತು ಒಂದಿಷ್ಟು ನಗು. ಯಾವಾಗಲೂ ತಮಾಷೆ! ನಿಮಗೆ ಹೆಚ್ಚಿನ ಶಕ್ತಿ ಸಿಗಲಿ. ಆದಷ್ಟು ಬೇಗ ನೀವು ಟೀಮ್​ ಇಂಡಿಯಾಕ್ಕೆ ಮರಳುವಂತಾಗಲಿ”​ ಎಂದು ಯುವಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ Rishabh Pant : ಸ್ವಿಮ್ಮಿಂಗ್ ಪೂಲ್​ನಲ್ಲಿರುವ ಹೊಸ ಚಿತ್ರ ಪ್ರಕಟಿಸಿದ ರಿಷಭ್​ ಪಂತ್​

ಕೆಳ ದಿನಗಳ ಹಿಂದಷ್ಟೇ ಪಂತ್​ ಅವರು ಸ್ವಿಮ್ಮಿಂಗ್​​ ಪೂಲ್​ನಲ್ಲಿ ನಡೆದಾಡುವ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಈ ಮೂಲಕ ತಾವು ಚೇತರಿಕೆ ಕಾಣುತ್ತಿರುವ ವಿಚಾರವನ್ನು ತಿಳಿಸಿದ್ದರು.

Exit mobile version