Site icon Vistara News

World Cup History : ಎರಡು ಪಂದ್ಯಗಳ ವಾಕ್​ ಓವರ್ ಪಡೆದು ವಿಶ್ವ ಕಪ್​ ಗೆದ್ದ ಶ್ರೀಲಂಕಾ!

Srilanka Team Champion

1996 ರ ವಿಶ್ವಕಪ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸಿದ್ದ ಆರನೇ ಏಕದಿನ ಕ್ರಿಕೆಟ್ ವಿಶ್ವಕಪ್ ಆಗಿತ್ತು (World Cup History). ಇದನ್ನು ವಿಲ್ಸ್ ಕಂಪನಿಯು ಪ್ರಾಯೋಜಿಸಿತ್ತು. ಪಾಕಿಸ್ತಾನ ಮತ್ತು ಭಾರತ ಆತಿಥ್ಯ ವಹಿಸಿದ ಎರಡನೇ ವಿಶ್ವಕಪ್ ಆಗಿದ್ದರೆ, ಶ್ರೀಲಂಕಾ ಮೊದಲ ಬಾರಿಗೆ ಪಂದ್ಯಾವಳಿಯ (ICC World Cup 2023) ಆತಿಥ್ಯ ವಹಿಸಿತು. ಒಟ್ಟಿನಲ್ಲಿ ಮೂರು ದೇಶಗಳಿಗೆ ಆತಿಥ್ಯ ನೀಡಲಾಗಿತ್ತು.

ಭಾರತವು 17 ವಿವಿಧ ತಾಣಗಳಲ್ಲಿ 17 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದರೆ, ಪಾಕಿಸ್ತಾನವು 6 ಸ್ಥಳಗಳಲ್ಲಿ 16 ಪಂದ್ಯಗಳನ್ನು ನಡೆಸಿತ್ತು. ಶ್ರೀಲಂಕಾ 3 ಸ್ಥಳಗಳಲ್ಲಿ 4 ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು. ಈ ಪಂದ್ಯಾವಳಿಯಲ್ಲಿ 1992ರಲ್ಲಿ ಟೆಸ್ಟ್ ಸ್ಥಾನಮಾನವನ್ನು ಗಳಿಸಿದ ಜಿಂಬಾಬ್ವೆ ಸೇರಿದಂತೆ ಎಲ್ಲಾ 8 ಟೆಸ್ಟ್ ಆಡುವ ರಾಷ್ಟ್ರಗಳು ನೇರ ಅರ್ಹತೆ ಪಡೆದುಕೊಂಡಿದ್ದರೆ, ಯುನೈಟೆಡ್ ಅರಬ್ ಎಮಿರೇಟ್ಸ್, ಕೀನ್ಯಾ ಮತ್ತು ನೆದರ್ಲ್ಯಾಂಡ್ಸ್ ಎಂಬ ಮೂರು ಅಸೋಸಿಯೇಟ್ ತಂಡಗಳು 1994ರ ಐಸಿಸಿ ಟ್ರೋಫಿಯ ಮೂಲಕ 1996 ರ ವಿಶ್ವಕಪ್​ಗೆ ಅರ್ಹತೆ ಪಡೆದವು. ಒಟ್ಟು 12 ತಂಡಗಳು ವಿಶ್ವ ಕಪ್​ಗಾಗಿ ಸೆಣಸಾಡಿದವು. ಈ ವಿಶ್ವ ಕಪ್​ ಕೂಡ ಕೆಲವೊಂದು ವಿವಾದ ಮತ್ತು ಆಚ್ಚರಿಯ ಘಟನೆಗಳಿಗೆ ಸಾಕ್ಷಿಯಾದವು.

ಲಂಕಾದಲ್ಲಿ ಆಡಲು ನಿರಾಕರಿಸಿದ ವಿಂಡೀಸ್​ ಮತ್ತು ಆಸ್ಟ್ರೇಲಿಯಾ, ವಿವಾದಗಳ ಸರಣಿ

1996 ರ ವಿಶ್ವಕಪ್ ಪ್ರಾರಂಭವಾಗುವ ಮೊದಲೇ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಮ್ಮ ತಂಡಗಳನ್ನು ತಮ್ಮ ಶ್ರೀಲಂಕಾಕ್ಕೆ ಕಳುಹಿಸಲು ನಿರಾಕರಿಸಿದವು. ಇದು ವಿವಾದವಾಗಿ ಪರಿವರ್ತನೆಗೊಂಡಿತು . 1996ರ ಜನವರಿಯಲ್ಲಿ ಕೊಲಂಬೋದ ಸೆಂಟ್ರಲ್ ಬ್ಯಾಂಕ್ ಮೇಲೆ ಎಲ್​ಟಿಟಿಇ ನಡೆಸಿದ ಹಿನ್ನೆಲೆಯಲ್ಲಿ ಆ ಎರಡು ದೇಶಗಳು ಅಲ್ಲಿಗೆ ಹೋಗಲು ನಿರಾಕರಿಸಿದವು. ಮಾತುಕತೆಗಳ ಬಳಿಕ, ಐಸಿಸಿ ಶ್ರೀಲಂಕಾದಲ್ಲಿ ನಡೆಯಬೇಕಾಗಿದ್ದ ಆ ಎರಡೂ ಪಂದ್ಯಗಳನ್ನು ರದ್ದು ಮಾಡುವ ತೀರ್ಮಾನಕ್ಕೆ ಬಂತು. ಇದರಿಂದ ಶ್ರೀಲಂಕಾ ತಂಡಕ್ಕೆ ವಾಕ್​ ಓವರ್​ ಸಿಕ್ಕಂತಾಯಿತು. ಶ್ರೀಲಂಕಾ ಪಂದ್ಯವನ್ನು ಆಡುವ ಮೊದಲೇ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆಯಿತು.

ಇದನ್ನೂ ಓದಿ : World Cup History: ವಿಶ್ವಕಪ್​ನಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದ ಆಟಗಾರರು

ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ಎರಡನೇ ದೊಡ್ಡ ವಿವಾದ ಸಂಭವಿಸಿತ್ತಯ. ಕೋಲ್ಕತಾದ ಈಡನ್ ಪಿಚ್ ಸ್ಪಿನ್ನರ್​ಗಳಿಗೆ ನೆರವಾಗಿತ್ತು. ಮೊದಲು ಬ್ಯಾಟ್​ ಮಾಡಿದ ಲಂಕಾ 252 ರನ್​ಗಳ ಗುರಿಯನ್ನು ಭಾರತಕ್ಕೆ ಒಡ್ಡಿತು. ಸಚಿನ್ ತೆಂಡೂಲ್ಕರ್ ಇರುವವರೆಗೂ ಭಾರತದ ಭರವಸೆಗಳು ಜೀವಂತವಾಗಿದ್ದವು. ಆದರೆ, ಜಯಸೂರ್ಯ ಎಸೆತಕ್ಕೆ ಸಚಿನ್​ ತೆಂಡೂಲ್ಕರ್​ ಔಟ್ ಆದ ಬಳಿಕ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ದೊಂಬಿ ಎಬ್ಬಿಸಿದರು. ಬೌಂಡರಿ ಲೈನ್​ ಬಳಿಕ ಲಂಕಾ ಫೀಲ್ಡರ್​ಗಳಿಗೆ ನಿಲ್ಲಲು ಭಾರತೀಯ ಅಭಿಮಾನಿಗಳು ಅವಕಾಶ ಕೊಡಲಿಲ್ಲ.

ಕಣ್ಣೀರು ಸುರಿಸಿದ ವಿನೋದ್ ಕಾಂಬ್ಳಿ

ಪ್ರೇಕ್ಷಕರ ಕಿರಿಕ್ ಆರಂಭವಾಗುವ ಮೊದಲು ಭಾರತ 34.1 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತ್ತು. ಮ್ಯಾಚ್ ರೆಫರಿ ಕ್ಲೈವ್ ಲಾಯ್ಡ್ ಪಂದ್ಯ ಮುಂದುವರಿಸಲು ಸಾಧ್ಯವಾಗದೇ ಶ್ರೀಲಂಕಾ ತಂಡಕ್ಕೆ ಗೆಲುವು ಎಂದು ಘೋಷಿಸಿದರು. ಇದು ಭಾರತೀಯ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತು. ಆಟಗಾರರೂ ನಿರಾಸೆಗೆ ಒಳಗಾದರು. ಅದರಲ್ಲೂ ವಿನೋದ್ ಕಾಂಬ್ಳಿ ಕಣ್ಣೀರು ಸುರಿಸುತ್ತಾ ಪೆವಿಲಿಯನ್ ಗೆ ಮರಳಿದರೂ. ಈ ಕ್ಷಣ ಇಂದಿಗೂ ಹಸಿರಾಗಿದೆ.

ಇದನ್ನೂ ಓದಿ : World Cup History: ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಸರ್ವಾಧಿಕ 5 ಬಾರಿ ಚಾಂಪಿಯನ್​

ಕೀನ್ಯಾ ವಿರುದ್ಧ ವಿಂಡೀಸ್​ಗೆ ಆಘಾತಕಾರಿ ಸೋಲು

ಕೀನ್ಯಾ 1996ರಲ್ಲಿ ವಿಶ್ವಕಪ್​ಗೆ ಮೊದಲ ಬಾರಿ​ ಪಾದಾರ್ಪಣೆ ಮಾಡಿತ್ತು. ಅದೇ ವರ್ಷ ಪಂದ್ಯಾವಳಿಯಲ್ಲಿ ಆಘಾತಕಾರಿ ಫಲಿತಾಂಶವೊಂದಕ್ಕೂ ಕಾರಣವಾಯಿತು. ರಿಚಿ ರಿಚರ್ಡ್ಸನ್, ಬ್ರಿಯಾನ್ ಲಾರಾ, ಶಿವನಾರಾಯಣ್ ಚಂದ್ರಪಾಲ್, ಕರ್ಟ್ಲಿ ಆಂಬ್ರೋಸ್ ಮತ್ತು ಕರ್ಟ್ನಿ ವಾಲ್ಷ್ ಅವರಂತಹ ಸ್ಟಾರ್ ಆಟಗಾರರಿಂದ ತುಂಬಿದ್ದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತ್ತು.

ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಕೀನ್ಯಾ ಕೇವಲ 166 ರನ್ ಬಾರಿಸಿತ್ತು. ಪ್ರತಿಯಾಗಿ ವಿಂಡೀಸ್ ತಂಡ 167 ರನ್ ಮಾತ್ರ ಬಾರಿಸಬೇಕಿತ್ತು. ಆದರೆ, ಕ್ರಿಕೆಟ್​ ದೈತ್ಯ ವಿಂಡೀಸ್​ ತಂಡ 93 ರನ್ ಗಳಿಗೆ ಆಲೌಟ್ ಆಯಿತು. ಅಲ್ಲದೆ, ಹೀನಾಯ 73 ರನ್ ಗಳ ಸೋಲಿಗೆ ಒಳಗಾಯಿತು.

ಬ್ಯಾಟರ್​ಗಳ ಸ್ವರ್ಗವಾದ ವಿಶ್ವ ಕಪ್​

1996 ರ ವಿಶ್ವಕಪ್ ಅನ್ನು ಭಾರತೀಯ ಉಪಖಂಡದಲ್ಲಿ ಆಡಲಾಯಿತು. ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾದ ಪಿಚ್​ಗಳು ಬ್ಯಾಟ್ಸ್​ಮನ್​ಗಳಿಗೆ ಸ್ವರ್ಗ ಎನಿಸಿತು. ಬೃಹತ್​ ಮೊತ್ತದ ಪಂದ್ಯಗಳು ನಡೆದವು. ಕ್ಯಾಂಡಿಯಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 398 ರನ್ ಗಳಿಸಿದ ಸಾಧನೆ ಮಾಡಿತು.

ಸನತ್ ಜಯಸೂರ್ಯ, ಸಚಿನ್ ತೆಂಡೂಲ್ಕರ್ ಮತ್ತು ಮಾರ್ಕ್ ವಾ ಬ್ಯಾಟಿಂಗ್ ಪರಿಸ್ಥಿತಿಗಳನ್ನು ಹೆಚ್ಚು ಬಳಸಿಕೊಂಡರು. 6 ಪಂದ್ಯಗಳಲ್ಲಿ 131.54ರ ಸ್ಟ್ರೈಕ್ ರೇಟ್ನಲ್ಲಿ 221 ರನ್ ಗಳಿಸಿದ್ದ ಜಯಸೂರ್ಯ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಇಂಗ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್​​ನಲ್ಲಿ ಅವರು 82 ರನ್ ಗಳಿಸಿದ್ದರು ಅಲ್ಲದೇ. ಶ್ರೀಲಂಕಾವನ್ನು ಮೊದಲ ಬಾರಿಗೆ ವಿಶ್ವಕಪ್ ಸೆಮಿಫೈನಲ್​​ಗೆ ಕೊಂಡೊಯ್ದರು.

ಮಾರ್ಕ್​​ವಾ ಮೂರು ಶತಕಗಳ ದಾಖಲೆ

ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ 3 ಶತಕಗಳನ್ನು ಬಾರಿಸಿದ ಮೊದಲ ಬ್ಯಾಟರ್​​​ ಎಂಬ ಹೆಗ್ಗಳಿಕೆಗೆ ಮಾರ್ಕ್ ವಾ ಪಾತ್ರರಾದರು. ಅವರು 80.66 ಸರಾಸರಿಯಲ್ಲಿ 484 ರನ್ ಗಳಿಸಿದರು. ಕೀನ್ಯಾ ವಿರುದ್ಧ ಬಂದ 130 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿತ್ತು. ಅವರು ನ್ಯೂಜಿಲೆಂಡ್ ಮತ್ತು ಭಾರತದ ವಿರುದ್ಧವೂ ಶತಕಗಳನ್ನು ಗಳಿಸಿದ್ದರು.

ಸಚಿನ್ ತೆಂಡೂಲ್ಕರ್ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 7 ಪಂದ್ಯಗಳಲ್ಲಿ 2 ಶತಕ ಮತ್ತು 3 ಅರ್ಧಶತಕಗಳೊಂದಿಗೆ 523 ರನ್ ಗಳಿಸಿದರು. ಶ್ರೀಲಂಕಾ ಮತ್ತು ಕೀನ್ಯಾ ವಿರುದ್ಧ ಅವರ ಶತಕಗಳು ಬಂದವು. ಏತನ್ಮಧ್ಯೆ, ಗ್ಯಾರಿ ಕರ್ಸ್ಟನ್ 1996ರ ವಿಶ್ವಕಪ್​ನಲ್ಲಿ ಯುಎಇ ವಿರುದ್ಧ ರಾವಲ್ಪಿಂಡಿಯಲ್ಲಿ 188* ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಇದನ್ನೂ ಓದಿ : World cup history : ದುರ್ಬಲ ಪಾಕಿಸ್ತಾನ ಚಾಂಪಿಯನ್ ಆಗಿದ್ದು ಹೇಗೆ? 1992ರ ವಿಶ್ವ ಕಪ್​ ಸ್ಟೋರಿ ಇಲ್ಲಿದೆ

ಸೊಹೈಲ್​, ವೆಂಕಟೇಶ್ ಪ್ರಸಾದ್​ ಐತಿಹಾಸಿಕ ಜಗಳ

ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ವಿಶ್ವ ಕಪ್​ ನಾಕೌಟ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು 1996ರ ವಿಶ್ವ ಕಪ್​ನಲ್ಲಿ. ಇದು ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಆಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಮೊದಲು ಬ್ಯಾಟ್​ ಮಾಡಿದ ಭಾರತ ಪರ ನವಜೋತ್ ಸಿಂಗ್ ಸಿಧು 93 ರನ್ ಗಳಿಸಿದರು. ಆದರೆ ಭಾರತೀಯ ಇನ್ನಿಂಗ್ಸ್ ನ ನಿಜವಾದ ತಾರೆ ಅಜಯ್ ಜಡೇಜಾ. ಅವರು 25 ಎಸೆತಗಳಲ್ಲಿ 45 ರನ್ ಗಳಿಸಿ ಭಾರತ ತಂಡಕ್ಕೆ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಲು ನೆರವಾದರು. ಅದರಲ್ಲೂ ಡೆತ್​ ಓವರ್​ಗಳಲ್ಲಿ ಅಬ್ಬರ ಜೋರಾಗಿತ್ತು. ಪಾಕ್ ಬೌಲರ್​ ವಕಾರ್ ಯೂನಿಸ್ ಬೆಚ್ಚಿ ಬೀಳುವಂತೆ ಮಾಡಿದ್ದರು. ಅವರು ಎಸೆದ 48 ನೇ ಓವರ್​ನಲ್ಲಿ ಜಡೇಜಾ 3 ಬೌಂಡರಿ ಮತ್ತು ಒಂದು ಸಿಕ್ಸರ್ ಸಮೇತ 22 ರನ್ ಗಳಿಸಿದರು. ಅದೇ ರೀತಿ ವಕಾರ್ ಅವರ ಕೊನೇ ಓವರ್​ನಲ್ಲಿ ಔಟಾಗುವ ಮೊದಲು ಮತ್ತೊಂದು ಸಿಕ್ಸರ್ ಸಿಡಿಸಿದ್ದರು.

ಚೇಸಿಂಗ್ ಆರಂಭ ಮಾಡಿದ ಪಾಕ್​ ಪರ ಆಮಿರ್ ಸೊಹೈಲ್ ಮತ್ತು ಸಯೀದ್ ಅನ್ವರ್ 10 ಓವರ್ ಗಳಲ್ಲಿ 84 ರನ್ ಸಿಡಿಸಿದರು. ಈ ಮೂಲಕ ಗೆಲುವಿನ ಆರಂಭ ಪಡೆಯಿತು. ಸೊಹೈಲ್ ಕೇವಲ 46 ಎಸೆತಗಳಲ್ಲಿ 55 ರನ್ ಗಳಿಸಿದ್ದರು. ಆದರೆ, ಇನಿಂಗ್ಸ್​​ನ 15ನೇ ಓವರ್​ನಲ್ಲಿ ವೆಂಕಟೇಶ್​ ಪ್ರಸಾದ್ ಹಾಗೂ ಅ ಮಿರ್ ಸೋಹೈಲ್ ನಡುವೆ ಚಕಮಕಿ ನಡೆಯಿತು. ಇದು ಭಾರತ ಹಾಗೂ ಪಾಕ್​ ಕ್ರಿಕೆಟ್​ ಇತಿಹಾಸದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ. ಪ್ರಸಾದ್ ಅವರ ಎಸೆತವನ್ನು ಬೌಂಡರಿಗಟ್ಟಿದ ಸೋಹೈಲ್​ ಮುಂದಿನ ಎಸೆತವನ್ನು ಬೌಂಡರಿಗೆ ಬಾರಿಸುವೆ ಎಂದು ಸನ್ನೆ ಮಾಡಿದರು. ಇದು ಪ್ರಸಾದ್ ಅವರನ್ನು ಕೆರಳಿಸಿತು. ಮುಂದೆ ನಡೆದದ್ದೇ ಬೇರೆ. ಪ್ರಸಾದ್​ ಮಾರಕ ಎಸೆತಕ್ಕೆ ವಿಕೆಟ್​ ಬುಡಸಮೇತ ಕಿತ್ತು ಹಾರಿತು. ಈಗ ಲೇವಡಿ ಮಾಡುವ ಸರದಿ ಪ್ರಸಾದ್ ಅವರದ್ದಾಗಿತ್ತು. ಅವರು ಹೋಗು ಪೆವಿಲಿಯನ್ ಕಡೆಗೆ ಎಂದು ಸನ್ನೆ ಮಾಡಿದರು. ಈ ಘಟನೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಹಾಗೆಯೇ ಉಳಿದಿದೆ.

ವೆಂಕಟೇಶ್ ಪ್ರಸಾದ್ ಅವರ ಮಾರಕ ಬೌಲಿಂಗ್​ಗೆ ಪಾಕಿಸ್ತಾನ ಬೆಚ್ಚಿ ಬಿತ್ತು 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿ 39 ರನ್ ಗಳಿಂದ ಸೋಲನುಭವಿಸಿತು. ಇದು ಜಾವೇದ್ ಮಿಯಾಂದಾದ್ ಅವರ ವೃತ್ತಿಜೀವನದ ಕೊನೆಯ ಏಕದಿನ ಪಂದ್ಯವಾಗಿತ್ತು. ಅವರು ಸೋಲಿನೊಂದಿಗೆ ಕೊನೆಗೊಳಿಸಿದರು.

ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಲಂಕಾ ಚಾಂಪಿಯನ್​

1999 ರ ವಿಶ್ವಕಪ್ ಉದ್ದಕ್ಕೂ ಶ್ರೀಲಂಕಾ ತಂಡ ಅದೃಷ್ಟ ಮತ್ತು ಫಾರ್ಮ್ ಎರಡನ್ನೂ ಹೊಂದಿತ್ತು. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಮ್ಮ ದೇಶದಲ್ಲಿ ತಮ್ಮ ಪಂದ್ಯಗಳನ್ನು ಆಡಲು ನಿರಾಕರಿಸಿದ ಕಾರಣ ಎರಡು ವಾಕ್ ಓವರ್ ಗಳನ್ನು ಪಡೆದರು. ಗಲಭೆಯಿಂದಾಗಿ ಕೋಲ್ಕತಾದಲ್ಲಿ ಭಾರತದ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಅವರಿಗೆ ನೀಡಲಾಯಿತು. ಅದು ಹೇಗಾದರೂ ಗೆಲ್ಲುತ್ತಿತ್ತು.

ಇದನ್ನೂ ಓದಿ : World cup history : ಭಾರತ ಆತಿಥ್ಯದಲ್ಲಿ ನಡೆದ ಮೊದಲ ವಿಶ್ವ ಕಪ್ ಟೂರ್ನಿಯ ಕೌತುಕದ ಸಂಗತಿಗಳು ಇಲ್ಲಿವೆ

ಅಂತಿಮವಾಗಿ ಲಾಹೋರ್​ನಲ್ಲಿ ನಡೆದ ಫೈನಲ್​ನಲ್ಲಿ ಅವರು ಆಸ್ಟ್ರೇಲಿಯಾವನ್ನು ಎದುರಿಸಿದರು. ಪಂದ್ಯವನ್ನು ಗೆಲ್ಲಲು 241 ರನ್​ಗಳನ್ನು ಚೇಸ್ ಮಾಡಬೇಕಾಗಿತ್ತು. ಅದುವರೆಗೆ ನಡೆದ ಐದು ವಿಶ್ವಕಪ್ ಫೈನಲ್​ಗಳಲ್ಲಿ ಚೇಸಿಂಗ್ ನಲ್ಲಿ ಯಾವುದೇ ತಂಡ ಗೆದ್ದಿರಲಿಲ್ಲ. ಶ್ರೀಲಂಕಾ ತಂಡವೂ ಇಬ್ಬರೂ ಆರಂಭಿಕರನ್ನು ಬೇಗನೆ ಕಳೆದುಕೊಂಡಿತು. ಆದರೆ ಅರವಿಂದ ಡಿ ಸಿಲ್ವಾ ಮತ್ತು ಅಸಂಕ ಗುರುಸಿನ್ಹಾ ಮೂರನೇ ವಿಕೆಟ್ ಗೆ 125 ರನ್ ಸೇರಿಸಿದರು. ಡಿ ಸಿಲ್ವಾ 107* ರನ್ (ಶತಕ) ಸಿಡಿಸಿ ಔಟಾದರು.

ಅರ್ಜುನ ರಣತುಂಗ ಅವರು ಗೆಲುವಿನ ರನ್ ಗಳಿಸಿ ಶ್ರೀಲಂಕಾವನ್ನು ವಿಶ್ವಕಪ್ ಚಾಂಪಿಯನ್ ಆಗಿ ಮಾಡಿದರು, ಪಂದ್ಯಾವಳಿಯಲ್ಲಿ ಕನಸಿನ ಅಂತ್ಯದೊಂದಿಗೆ ಅದ್ಭುತ ಓಟವನ್ನು ಕೊನೆಗೊಳಿಸಿದರು.

Exit mobile version