Site icon Vistara News

Ind vs Nz : ಈ ಮೂರು ಕಾರಣಗಳಿಂದಾಗಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತದೆ

Team india

ಬೆಂಗಳೂರು: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತ 9ನೇ ಗೆಲುವು ದಾಖಲಿಸಿದೆ. ಮೆನ್ ಇನ್ ಬ್ಲೂ ತಂಡ ನೆದರ್ಲೆಂಡ್ಸ್ ವಿರುದ್ಧ ಸುಲಭ ಜಯ ದಾಖಲಿಸಿ ಗ್ರೂಪ್ ಹಂತವನ್ನು ಅಜೇಯವಾಗಿ ಕೊನೆಗೊಳಿಸಿದೆ. ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಒಂದೇ ಆವೃತ್ತಿಯಲ್ಲಿ ಸತತ 9 ಗೆಲುವುಗಳನ್ನು ದಾಖಲಿಸಿ ಸೆಮಿಫೈನಲ್​ಗೆ ಪ್ರವೇಶಿಸಿದೆ. 2003ರ ಆವೃತ್ತಿಯಲ್ಲಿ ಸೌರವ್ ಗಂಗೂಲಿ ನೇತೃತ್ವದ ಮೆನ್ ಇನ್ ಬ್ಲೂ ತಂಡ 8 ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು.

ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. 2023ರ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಕನಸಿನ ಓಟದ ಹೊರತಾಗಿಯೂ, ನ್ಯೂಜಿಲೆಂಡ್ ವಿರುದ್ಧದ ತಂಡದ ಹಿಂದಿನ ನಾಕೌಟ್ ಪಂದ್ಯಗಳ ಫಲಿತಾಂಶಗಳನ್ನು ಪರಿಗಣಿಸಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆತಂಕ ಜೋರಾಗಿದೆ.

2019ರ ವಿಶ್ವ ಕಪ್​ನಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ (Ind vs Nz) ವಿರುದ್ಧ ಸೋತಿತ್ತು. ಈ ಸೋಲಿಗೆ ಪ್ರತಿಕಾರ ಹೇಳಲು ಭಾರತ ತಂಡ ಸಜ್ಜಾಗಿದೆ. ಜತೆಗೆ ಭಾರತ ತಂಡ ಹಾಲಿ ವಿಶ್ವ ಕಪ್​ನಲ್ಲಿ ಬಲಿಷ್ಠವಾಗಿದ್ದು ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಇವೆಲ್ಲದರ ನಡುವೆ ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆಲ್ಲುವುದಕ್ಕೆ ಇದು ಮೂರು ಕಾರಣಗಳು ಪ್ರಮುಖ ಎನ್ನಲಾಗಿದೆ.

ಅಗ್ರ ಕ್ರಮಾಂಕದ ಬ್ಯಾಟಿಂಗ್​

2023ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕ ಅತ್ಯುತ್ತಮm ಫಾರ್ಮ್​ನಲ್ಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಶ್ರೇಯಸ್ ಮತ್ತು ಕೆಎಲ್ ರಾಹುಲ್ ಅಗ್ರ ಉತ್ಕೃಷ್ಟ ಆಟ ಪ್ರದರ್ಶಿಸುತ್ತಿದ್ದಾರೆ. ಮತ್ತೊಂದೆಡೆ, ವಾಂಖೆಡೆ ಕ್ರೀಡಾಂಗಣ ಭಾರತದ ಬ್ಯಾಟರ್​ಗಳಿಗೆ ಫೇವರಿಟ್​ ಎನಿಸಿಕೊಂಡಿದೆ.

ಇದನ್ನೂ ಓದಿ : ICC World Cup 2023: 9 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ ಹೀಗಿತ್ತು…

ನ್ಯೂಜಿಲೆಂಡ್ ವೇಗಿಗಳು ಈ ಹಿಂದೆ ಭಾರತದ ಅಗ್ರ ಕ್ರಮಾಂಕದ ವಿರುದ್ಧ ಯಶಸ್ಸನ್ನು ಕಂಡಿದ್ದರೂ, ಹಾಲಿ ಪಂದ್ಯಾವಳಿಯಲ್ಲಿ ಆ ಬೌಲರ್​ಗಳು ಎದುರಾಳಿ ಬ್ಯಾಟರ್​ಗಳನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ. ಪಾಕಿಸ್ತಾನ ವಿರುದ್ಧ 400 ರನ್ ಗಳಿಸಿದರೂ ಫಖರ್ ಜಮಾನ್ ಮತ್ತು ಬಾಬರ್ ಅಜಮ್ ಅವರನ್ನು ತಡೆಯಲು ಕಿವೀಸ್ ಬೌಲಿಂಗ್​ಗೆ ಆಗಲಿಲ್ಲ. ರೋಹಿತ್ ಮತ್ತು ಬಳಗವು ಇನ್ನೂ ಬಲಿಷ್ಠವಾಗಿದೆ. ಸೆಮಿಫೈನಲ್​ನಲ್ಇ ನ್ಯೂಜಿಲೆಂಡ್​ ಬೌಲಿಂಗ್ ದಾಳಿಯನ್ನು ಎದುರಿಸಲು ಸಮರ್ಥವಾಗಿದೆ.

ತವರಿನ ಲಾಭ

ಫಾರ್ಮ್ ಮೆನ್ ಇನ್ ಬ್ಲೂ ಪರವಾಗಿದ್ದರೂ, ತವರು ನೆಲದ ಅನುಕೂಲವೂ ಮಹತ್ವದ ಪಾತ್ರ ವಹಿಸುತ್ತದೆ. ವಾಂಖೆಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ 21 ಏಕದಿನ ಪಂದ್ಯಗಳನ್ನಾಡಿದ್ದು, 12 ಪಂದ್ಯಗಳನ್ನು ಗೆದ್ದಿದೆ. ಆಟಗಾರರು, ವಿಶೇಷವಾಗಿ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಅವರು ವಾಂಖೆಡೆ ಮೈದಾನವನ್ನು ತಮ್ಮ ತವರು ಮೈದಾನವೆಂದು ಪರಿಗಣಿಸಿದ್ದಾರೆ. ಅದರ ಪಿಚ್​ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ.

ತಪ್ಪು ಮಾಡದ ನಡೆ

ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ ನಲ್ಲಿ ರೋಹಿತ್ ಬಳಗ ಒಂದೇ ಒಂದು ತಪ್ಪು ಹೆಜ್ಜೆ ಇಟ್ಟಿಲ್ಲ . ಸತತ 9 ಪಂದ್ಯಗಳಲ್ಲಿ ಜಯ ಗಳಿಸಿರುವ ಫಾರ್ಮ್ ಮತ್ತು ಆತ್ಮವಿಶ್ವಾಸ ಅವರ ಮೇಲಿದೆ. 2019ರ ಸೋಲಿನ ಬೇಸರವನ್ನು ಗಮನದಲ್ಲಿಟ್ಟುಕೊಂಡು, ಟೀಮ್ ಇಂಡಿಯಾ ಈ ಬಾರಿ ತವರು ಪ್ರೇಕ್ಷಕರ ಮುಂದೆ ತಿರುಗೇಟು ನೀಡಲು ಯತ್ನಿಸಲಿದೆ.

ಪಾಕಿಸ್ತಾನಕ್ಕಿಂತ ಉತ್ತಮ ನೆಟ್ ರನ್ ರೇಟ್ ಕಾರಣ ನ್ಯೂಜಿಲ್ಯಾಂಡ್ ಸೆಮಿಫೈನಲ್​ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪಂದ್ಯಾವಳಿಯಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಅಗ್ರ ತಂಡಗಳ ವಿರುದ್ಧ ಆ ತಂಡವು ಸೋಲನ್ನು ಅನುಭವಿಸಿದೆ. ಹೀಗಾಗಿ ಆ ತಂಡದ ವಿಶ್ವಾಸ ಹೆಚ್ಚಿಲ್ಲ.

Exit mobile version