Site icon Vistara News

Rishabh Pant | ಕಾರು ಸುಟ್ಟು ಭಸ್ಮವಾದರೂ ರಿಷಭ್​ ಪಂತ್ ಪಾರಾಗಿದ್ದು ಹೇಗೆ? ಪೊಲೀಸರು ಹೇಳುವುದೇನು?

rishabh pant

ನವ ದೆಹಲಿ : ಯುವ ಕ್ರಿಕೆಟಿಗ ರಿಷಭ್​ ಪಂತ್​ (Rishabh Pant) ಭೀಕರ ರಸ್ತೆ ಅಪಘಾತಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯು ಕಾರು ಸುಟ್ಟು ಕರಕಲಾಗಿದ್ದು, ಅವಘಡದ ಸ್ಥಳವನ್ನು ನೋಡಿದರೆ ಪ್ರಾಣ ಉಳಿದಿರುವುದೇ ಪವಾಡ ಎಂಬಂತಿದೆ. ರಿಷಭ್​ ಪಂತ್​ ಅವರು ಕಾಲು ಹಾಗೂ ತಲೆಗೆ ಪೆಟ್ಟು ಬಿದ್ದಿರುವ ಹೊರತಾಗಿಯೂ ಕಾರಿನಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಘಟನೆ ಕುರಿತು ಪೊಲೀಸರು ಹಾಗೂ ಪ್ರತ್ಯಕ್ಷದರ್ಶಿಗಳು ನೀಡುವ ಮಾಹಿತಿ ಇಂತಿದೆ.

ಎಲ್ಲಿ ನಡೆಯಿತು ಅಪಘಾತ?

ರಿಷಭ್​ ಪಂತ್​ ಅವರು ನವದೆಹಲಿಯಿಂದ ಉತ್ತರಾಖಂಡದ ಕಡೆಗೆ ಏಕಾಂಗಿಯಾಗಿ ಹೊರಟಿದ್ದರು. ಡೆಲ್ಲಿ- ಡೆಹ್ರಾಡೂನ್​ ಎಕ್ಸ್​ಪ್ರೆಸ್​ವೇನ ರೂರ್ಕಿ ನರ್ಸನ್​ ಗಡಿಯ ಬಳಿ ಬೆಳಗ್ಗೆ 5.30ಕ್ಕೆ ಅಪಘಾತ ಸಂಭವಿಸಿದೆ. ರಿಷಭ್​ ಅವರೇ ಕಾರು ಚಾಲನೆ ಮಾಡುತ್ತಿದ್ದು, ನಿದ್ದೆಯ ಮಂಪರೇ ಅವಘಡಕ್ಕೆ ಕಾರಣ. ಡಿವೈಡರ್​ಗೆ ಅಪ್ಪಳಿಸಿದ ಕಾರು ಕಬ್ಬಿಣದ ತಡೆಗೋಡೆಗಳಿಗೆ ಉಜ್ಜಿಕೊಂಡು 100 ಮೀಟರ್​ನಷ್ಟು ಮುಂದಕ್ಕೆ ಹೋಗಿದೆ. ಕಬ್ಬಿಣ ತಡೆಗೋಡೆ ಹಾಗೂ ಕಾರಿನ ಲೋಹಗಳ ನಡುವೆ ಘರ್ಷಣೆ ಉಂಟಾದ ಕಾರಣ ಬೆಂಕಿ ಕಿಡಿ ಉಂಟಾಗಿದೆ. ಕಾರು ಅಪ್ಪಚ್ಚಿಯಾಗಿ ತೈಲಗಳು ಸೋರಿಕೆಯಾಗಿದ್ದು ಏಕಾಏಕಿ ಬೆಂಕಿ ಹತ್ತಿಕೊಂಡಿದೆ.

ರಿಷಭ್​ ಪಾರಾಗಿದ್ದು ಹೇಗೆ?

ಕಾರು ತಡೆಗೋಡೆಗೆ ಉಜ್ಜಿಕೊಂಡು ಹೋದರೂ ಬೋರಲು ಬಿದ್ದಿಲ್ಲ. ಬದಲಾಗಿ ತಿರುಗಿ ನಿಂತಿದೆ. ಡ್ರೈವಿಂಗ್ ಸೀಟ್​ನಲ್ಲಿದ್ದ ರಿಷಭ್​ ಅವರ ಕಾಲು ಹಾಗೂ ತಲೆಗೆ ಏಟು ಬಿದ್ದಿದ್ದು ಅವರು ಕಣ್ಣು ಬಿಡುವಷ್ಟರಲ್ಲಿ ಕಾರಿಗೆ ಬೆಂಕಿ ಹಿಡಿದಿದೆ. ಸಮಯ ಪ್ರಜ್ಞೆ ಮೆರೆದ ರಿಷಭ್​ ಕಿಟಕಿಯ ಗಾಜನ್ನು ಒಡೆದು ಹೊರಕ್ಕೆ ಜಿಗಿದಿದ್ದಾರೆ. ಹೀಗಾಗಿ ಅವರು ಬಚಾವಾಗಿದ್ದಾರೆ. ಸ್ವಲ್ಪ ತಡವಾಗಿದ್ದರೂ ಸುಟ್ಟು ಹೋಗುತ್ತಿದ್ದರು. ಅವರು ಕ್ರೀಡಾಪಟುವಾಗಿರುವುದೇ ಅವರ ಪ್ರಾಣ ಕಾಪಾಡಿದೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ತಂತ್ರವನ್ನು ಕ್ರೀಡಾಪಟುಗಳಿಗೆ ತರಬೇತಿ ಅವಧಿಯಲ್ಲಿ ಹೇಳಿಕೊಡಲಾಗುತ್ತದೆ. ಇದನ್ನು ಸಮರ್ಥವಾಗಿ ಬಳಸಿಕೊಂಡ ರಿಷಭ್​ ಪಂತ್​ ನೋವಿನ ನಡುವೆಯೂ ಗಾಜು ಒಡೆದು ಹೊರಗೆ ಬಂದಿದ್ದಾರೆ.

ಪಂತ್​ ಪ್ರಯಾಣಿಸುತ್ತಿದ್ದ ಕಾರು ಯಾವುದು?

ಮೊದಲಿಗೆ ಬಿಎಂಡಬ್ಲ್ಯು ಅಥವಾ ಮರ್ಸಿಡೀಸ್​ ಬೆಂಜ್​ ನಡುವೆ ಯಾವುದು ಎಂಬ ಗೊಂದಲ ಸೃಷ್ಟಿಯಾಗಿತ್ತು. ಬಳಿಕ ಪೊಲೀಸರು ಬಿಎಂಡಬ್ಲ್ಯು ಎಂದು ಖಾತರಿ ಪಡಿಸಿದರು. ಪಂತ್​ ಪ್ರಯಾಣ ಮಾಡುತ್ತಿದ್ದ ಕಾರು ಐಷಾರಾಮಿ ದುಬಾರಿ ಬಿಎಂಡಬ್ಲ್ಯು ಸೆಡಾನ್​. ಆದಾಗ್ಯೂ ಅದಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಉಂಟಾಗಿದೆ. ಅಲ್ಲದೆ, ಆಗಿರುವ ಹಾನಿ ನೋಡಿದರೆ ಕಾರು ಸುರಕ್ಷಿತವಲ್ಲೇ ಎಂಬ ಅನುಮಾನ ಮೂಡಿದೆ. ಮಿತಿ ಮೀರಿದ ವೇಗವೇ ಘಟನೆಗೆ ಕಾರಣವಿರಬಹುದು ಎನ್ನಲಾಗುತ್ತಿದೆ.

ಪಂತ್​ ಯಾವ ಆಸ್ಪತ್ರೆಯಲ್ಲಿದ್ದಾರೆ?

ಪಂತ್​ ಅವರನ್ನು ಮೊದಲಿಗೆ ರೂರ್ಕಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಅವರು ಡೆಹ್ರಾಡೂನ್​ನ ಸಕ್ಷಮ್​ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಡೆಲ್ಲಿಗೆ ಏರ್​ಲಿಫ್ಟ್​ ಮಾಡಲಿದ್ದಾರೆ. ಪಂತ್​ ನೀಡಲಾದ ಎಲ್ಲ ಚಿಕಿತ್ಸೆಗಳ ವೆಚ್ಚವನ್ನು ಉತ್ತರಾಖಂಡ ಸರಕಾರವೇ ಭರಿಸಲಿದೆ. ಉತ್ತರಖಂಡ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಚಿಕಿತ್ಸೆ ವೆಚ್ಚವನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

ಪಂತ್​ ಗುಣವಾಗಲು ಎಷ್ಟು ದಿನ ಬೇಕು?

ಹಲವು ಪರೀಕ್ಷೆಗಳ ಬಳಿಕ ತಿಳಿದು ಬಂದ ಮಾಹಿತಿ ಪ್ರಕಾಣ ಪಂತ್​ಗೆ ಗಂಭೀರ ಸ್ವರೂಪದ ಗಾಯಗಳು ಆಗಿಲ್ಲ. ಮೂಳೆ ಮುರಿತವೂ ಆಗಿಲ್ಲ. ಅವರ ಎಡ ಕಣ್ಣಿನ ಮೇಲ್ಬಾಗದಲ್ಲಿ ಗಾಯವಾಗಿದ್ದು, ಮಂಡಿಗಳಲ್ಲೂ ಬಿರುಕು ಬಿಟ್ಟಿದೆ. ಬೆನ್ನಿಗೂ ಸ್ವಲ್ಪ ಗಾಯಗಳಾಗಿರುವ ಸಾಧ್ಯತೆಗಳಿವೆ. ಅಂತೆಯೇ ಅವರಿಗೆ ಪ್ಲಾಸ್ಟಿಕ್​ ಸರ್ಜರಿಯೂ ಬೇಕಾಗಬಹುದು ಎನ್ನಲಾಗಿದೆ. ಅವರಿಗೆ ಸುಧಾರಿಸಿಕೊಳ್ಳಲು ಇನ್ನೊಂದು ವರ್ಷ ಬೇಕಾಗಬಹುದು. ಹೀಗಾಗಿ ಐಪಿಎಲ್ ಹಾಗೂ ಏಕ ದಿನ ವಿಶ್ವ ಕಪ್​ಗೆ ಲಭ್ಯರಿರುವುದಿಲ್ಲ.

ಇದನ್ನೂ ಓದಿ | Rishabh Pant | ಡಿವೈಡರ್​​ಗೆ ಡಿಕ್ಕಿ ಹೊಡೆದು ಸುಟ್ಟು ಭಸ್ಮವಾದ ಕಾರು; ಖ್ಯಾತ ಕ್ರಿಕೆಟರ್​ ರಿಷಭ್​ ಪಂತ್​​ಗೆ ಗಂಭೀರ ಗಾಯ

Exit mobile version