Site icon Vistara News

IND vs ENG Semi Final: ಆಂಗ್ಲರನ್ನು ಸದೆಬಡಿದು ಫೈನಲ್​ ಪ್ರವೇಶಿಸಲಿ ಭಾರತ

IND vs ENG Semi Final: India eye revenge against defending champions England

ಟರೂಬ/ಪ್ರೊವಿಡೆನ್ಸ್‌: ಚುಟುಕು ಕ್ರಿಕೆಟ್‌ನಲ್ಲಿ ತನ್ನದೇ ಹೆಗ್ಗುರುತು ಸ್ಥಾಪಿಸಿರುವ ಟೀಮ್‌ ಇಂಡಿಯಾ ನಾಳೆ (ಗುರುವಾರ) ನಡೆಯುವ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯ ಸೆಮಿಫೈನಲ್​(IND vs ENG Semi Final) ಪಂದ್ಯದಲ್ಲಿ ಇಂಗ್ಲೆಂಡ್(IND vs ENG)​ ವಿರುದ್ಧ ಅದೃಷ್ಠ ಪರೀಕ್ಷೆಗೆ ಇಳಿಯಲಿದೆ. ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಕಳೆದ ಕೆಲವು ವರ್ಷಗಳಿಂದ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಅತ್ತ ಹಾಲಿ ಚಾಂಪಿಯನ್​ ಆಗಿರುವ ಇಂಗ್ಲೆಂಡ್​ ಸಹ ಇತ್ತೀಚೆಗೆ ಟಿ20ಗಳಲ್ಲಿ ಬಲಾಡ್ಯ ತಂಡವಾಗಿ ಹೊರಹೊಮ್ಮಿದೆ. ಹೀಗಾಗಿ ಇತ್ತಂಡಗಳ ನಡುವಿನ ಕ್ರಿಕೆಟ್‌ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ಭಾರತಕ್ಕೆ ಕೊಹ್ಲಿಯದ್ದೇ ಚಿಂತೆ


ಪ್ರತಿ ಐಸಿಸಿ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿಯ ಬ್ಯಾಟ್​ ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸದ್ದು ಮಾಡುತ್ತಿಲ್ಲ. ಇದು ಭಾರತ ತಂಡಕ್ಕೆ ದೊಡ್ಡ ಚಿಂತೆ ಉಂಟು ಮಾಡಿದೆ. ಆಡಿದ 7 ಪಂದ್ಯಗಳಲ್ಲಿ 2 ಶೂನ್ಯ ಸುತ್ತಿದ್ದಾರೆ. ಒಂದು ಪಂದ್ಯದಲ್ಲಿ ಮಾತ್ರ ಎರಡಂಕಿ ದಾಟಿದ್ದಾರೆ. ಹೀಗಾಗಿ ಕೊಹ್ಲಿ ಇಂಗ್ಲೆಂಡ್‌ ವಿರುದ್ಧ ಸಿಡಿದು ನಿಲ್ಲಬೇಕಾದುದ ಅನಿವಾರ್ಯತೆ ಇದೆ. ಕೊಹ್ಲಿ ಜತೆಗೆ ಶಿವಂ ದುಬೆ ಕೂಡ ಸಿಡಿದು ನಿಲ್ಲಬೇಕಿದೆ. ಐಪಿಎಲ್​ನಲ್ಲಿ ತೋರಿದ ಬ್ಯಾಟಿಂಗ್​ ಆರ್ಭಟವನ್ನು ದುಬೆ ಈ ಟೂರ್ನಿಯಲ್ಲಿ ಇದುವರೆಗೆ ತೋರಿಸಿಲ್ಲ. ಎಲ್ಲ ಪಂದ್ಯಗಳಲ್ಲಿಯೂ ಆಮೆ ಗತಿಯ ಬ್ಯಾಟಿಂಗ್​ ನಡೆಸಿ ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆ ಉಂಟುಮಾಡುತ್ತಿದ್ದಾರೆ.

ಉಪನಾಯಕ ಹಾರ್ದಿಕ್​ ಪಾಂಡ್ಯ ಅವರು ಈ ಬಾರಿಯ ಐಪಿಎಲ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಘೋರ ವೈಫಲ್ಯ ಕಂಡಿದ್ದರು. ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದಾಗ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಆದರೆ, ಪಾಂಡ್ಯ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ನೆರವಾಗುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಂದು ಪಾಂಡ್ಯ ಬೇಡ ಎಂದವರು ಇಂದು ಪಾಂಡ್ಯ ಇಲ್ಲದೇ ಇದ್ದರೆ ಗೆಲುವು ಕಷ್ಟ ಎನ್ನುತ್ತಿದ್ದಾರೆ. ಕಳೆದ ಆಸೀಸ್​ ವಿರುದ್ಧ ಪ್ರಚಂಡ ಬ್ಯಾಟಿಂಗ್​ ನಡೆಸಿದ ನಾಯಕ ರೋಹಿತ್​ ಶರ್ಮ ಅವರ ಬ್ಯಾಟಿಂಗ್​ ಮೇಲೆ ಈ ಪಂದ್ಯದಲ್ಲಿಯೂ ತಂಡ ನಂಬಿಕೆ ಇರಿಸಿದೆ.

ಇದನ್ನೂ ಓದಿ IND vs ENG: ಇಂಗ್ಲೆಂಡ್‌ ಎದುರು ಭಾರತಕ್ಕೆ ಸೇಡಿನ ಪಂದ್ಯ; ನಾಳೆ ದ್ವಿತೀಯ ಸೆಮಿಫೈನಲ್​

ಇಂಗ್ಲೆಂಡ್​ ಕೂಡ ಬಲಿಷ್ಠ

ಇಂಗ್ಲೆಂಡ್​ ನಾಯಕ ಜಾಸ್​ ಬಟ್ಲರ್‌, ಫಿಲ್​ ಸಾಲ್ಟ್​, ಜಾನಿ ಬೇರ್‌ಸ್ಟೊ, ​ಲಿವಿಂಗ್​​ಸ್ಟೋನ್​, ಹ್ಯಾರಿ ಬ್ರೂಕ್​, ಸ್ಯಾಮ್​ ಕರನ್​, ಮೊಯಿನ್​ ಅಲಿ ಅವರನ್ನೊಳಗೊಂಡ ಬ್ಯಾಟಿಂಗ್‌ ಸರದಿ ಟಿ20ಗೆ ಹೇಳಿ ಮಾಡಿಸಿದಂತಿದೆ. ಇವರನ್ನು ನಿಯಂತ್ರಿಸುವುದರಲ್ಲಿ ಭಾರತದ ಯಶಸ್ಸು ಅಡಗಿದೆ. ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ಘಾತಕ ವೇಗಿ ಜೋಫ್ರಾ ಆರ್ಚರ್​ ಕೂಡ ತಂಡಕ್ಕೆ ಮರಳಿದ್ದು ಇಂಗ್ಲೆಂಡ್​ ಬೌಲಿಂಗ್​ ಬಲವನ್ನು ಹೆಚ್ಚಿಸಿದೆ.

ಸೇಡಿನ ಪಂದ್ಯ

2022ರಲ್ಲಿ ಅಡಿಲೇಡ್​ನಲ್ಲಿ ನಡೆದ ಟಿ20 ವಿಶ್ವಕಪ್​ ಸೆಮೀಸ್​ನಲ್ಲಿ ಇಂಗ್ಲೆಂಡ್​ ತಂಡ ಭಾರತಕ್ಕೆ 10 ವಿಕೆಟ್​ಗಳ ಹೀನಾಯ ಸೋಲುಣಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ರೋಹಿತ್​ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ.

Exit mobile version