Site icon Vistara News

ind vs wi : ವಿಂಡೀಸ್ ವಿರುದ್ಧದ ಮೊದಲ ಒಡಿಐ ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್​​ ಸುಲಭ ಜಯ

kuldeep yadav

ಬ್ರಿಜ್​ಟೌನ್ (ವೆಸ್ಟ್​ ಇಂಡೀಸ್​): ಕುಲ್ದೀಪ್​ ಯಾದವ್ ಅವರ ಮಾರಕ ಬೌಲಿಂಗ್​ (4 ವಿಕೆಟ್​, 3 ಓವರ್​, 6 ರನ್​) ಹಾಗೂ ವಿಕೆಟ್​ ಕೀಪರ್ ಬ್ಯಾಟರ್​ ಇಶಾನ್​ ಕಿಶಾನ್​ (52ರನ್​) ಬಾರಿಸಿದ ಅರ್ಧ ಶತಕದ ನೆರವು ಪಡೆದ ಭಾರತ ತಂಡ ವೆಸ್ಟ್​ ಇಂಡೀಸ್ ಪ್ರವಾಸದ (ind vs wi) ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್​ಗಳ ಸುಲಭ ಜಯ ದಾಖಲಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. ಜುಲೈ 29ರಂದು ಎರಡನೇ ಪಂದ್ಯ ಇದೇ ಸ್ಟೇಡಿಯಮ್​ನಲ್ಲಿ ನಡೆಯಲಿದ್ದು ಆ ಪಂದ್ಯ ಗೆದ್ದರೆ ಸರಣಿ ಭಾರತ ತಂಡದ ಕೈವಶವಾಗಲಿದೆ.

ಇಲ್ಲಿನ ಕೆನಿಂಗ್ಸ್​ಟನ್​ ಓವಲ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆತಿಥೇಯ ವಿಂಡೀಸ್​ ಬಳಗ 23 ಓವರ್​ಗಳಲ್ಲಿ 114 ರನ್​ಗಳಿಗೆ ಆಲ್ಔಟ್​ ಆಯಿತು. ಪ್ರತಿಯಾಗಿ ಆಡಿದ ಭಾರತ 22.5 ಓವರ್​​ಗಳಲ್ಲಿ 5 ವಿಕೆಟ್ ಕಳೆದುಕೊಂಡು 118 ರನ್​ ಬಾರಿಸಿ ಗೆಲುವು ಸಾಧಿಸಿತು.

ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಪರ ಇಶಾನ್​ ಕಿಶನ್​ ಉತ್ತಮವಾಗಿ ಬ್ಯಾಟ್​ ಬೀಸಿದರು. 46 ಎಸೆತಗಳನ್ನು ಎದುರಿಸಿದ ಅವರು 7 ಫೋರ್ ಹಾಗೂ 1 ಸಿಕ್ಸರ್ ಮೂಲಕ 52 ರನ್ ಬಾರಿಸಿದರು. ಆದರೆ, ಶುಭ್​ಮನ್​ ಗಿಲ್​ ಮತ್ತೆ ವೈಫಲ್ಯ ಕಂಡರು. 16 ಎಸೆತಕ್ಕೆ 7 ರನ್ ಬಾರಿಸಿದ ಅವರು ನಿರಾಸೆಯಿಂದ ಪೆವಿಲಿಯನ್​ ಕಡೆಗೆ ನಡೆದರು. ಬಳಿಕ ಬಂದ ಸೂರ್ಯಕುಮಾರ್​ ನಿಧಾನಗತಿಯಲ್ಲಿ ಆಡಿ 19 ರನ್​ ಗಳಿಸಿ ಮೋತಿ ಎಸೆತಕ್ಕೆ ಎಲ್​ಬಿಡಬ್ಲ್ಯು ಔಟ್​ ಆದರು. ಹಾರ್ದಿಕ್ ಪಾಂಡ್ಯ ಅನಗತ್ಯ ರನ್​ ಔಟ್ ಆಗಿ ಹೋಗುವ ಮೊದಲು ಕೇವಲ 5 ರನ್​ ಗಳಿಸಿದ್ದರು. ಬಳಿಕ ಬಂದ ರವೀಂದ್ರ ಜಡೇಜಾ 16 ರನ್​ ಬಾರಿಸಿದರೆ, ಏಳನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ರೋಹಿತ್ ಶರ್ಮಾ 12 ರನ್ ಗಳಿಸಿದರು. ಇದಕ್ಕಿಂದ ಮೊದಲು ಕ್ರೀಸ್​ಗೆ ಇಳಿದಿದ್ದ ಆಲ್​ರೌಂಡರ್​ ಶಾರ್ದುಲ್ ಠಾಕೂರ್​ 1 ರನ್​ಗೆ ಔಟಾದರು.

ವಿಂಡೀಸ್ ಪತನ

ಮೊದಲು ಬ್ಯಾಟಿಂಗ್​ಗೆ ಆಹ್ವಾನ ಪಡೆದ ವೆಸ್ಟ್​ ಇಂಡೀಸ್ ತಂಡ ತನ್ನ ದೌರ್ಬಲ್ಯವನ್ನು ಪ್ರದರ್ಶಿಸಿತು. ಬ್ರೆಂಡನ್​ ಕಿಂಗ್​ 17 ರನ್​ಗೆ ಔಟಾದರೆ, ಕೈಲ್​ ಮೇಯರ್ಸ್​ 2 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಅಲಿಕ್​ ಅಥನಾಜೆ 22 ರನ್ ಬಾರಿಸಿ ಸ್ವಲ್ಪ ಹೊತ್ತು ಕ್ರೀಸ್ ಕಾಪಾಡಿಕೊಂಡರೆ ನಾಯಕ ಶಾಯ್​ ಹೋಪ್​ 43 ರನ್ ಗಳಿಸಿ ಭಾರತ ತಂಡದ ಬೌಲಿಂಗ್ ದಾಳಿಯನ್ನು ಸ್ವಲ್ಪ ಹೊತ್ತು ಹಿಮ್ಮೆಟ್ಟಿಸಿದರು. ಹೆಟ್ಮಾಯರ್​ ಗಳಿಕೆ ಕೇವಲ 11 ರನ್​. ಆ ಬಳಿಕ ವಿಂಡೀಸ್​ ತಂಡದ ಬ್ಯಾಟಿಂಗ್​ ವಿಭಾಗ ಪತನಗೊಂಡಿತು. ಕುಲ್ದೀಪ್​ ಯಾದವ್​ ಏಕಾಏಕಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ವಿಂಡೀಸ್ ತಂಡ ರನ್ ಗಳಿಕೆ ಹೆಚ್ಚು ಮಾಡದಂತೆ ನೋಡಿಕೊಂಡರು. ಅದಕ್ಕಿಂತ ಮೊದಲು ರವೀಂದ್ರ ಜಡೇಜಾ 3 ವಿಕೆಟ್​ ಕಬಳಿಸುವ ಮೂಲಕ ವೆಸ್ಟ್​ ಇಂಡೀಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು.

ಇದನ್ನೂ ಓದಿ : Team India : 2023-24ರ ಭಾರತ ತಂಡದ ತವರಿನ ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿ ಪ್ರಕಟ

ಕ್ರಮಾಂಕ ಬದಲಾವಣೆ

ಸಣ್ಣ ಮೊತ್ತವೆಂಬ ಕಾರಣಕ್ಕೆ ಭಾರತ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಂಡಿತು. ರೋಹಿತ್ ಶರ್ಮಾ ಆರಂಭಿಕರಾಗಿ ಬ್ಯಾಟ್​ ಮಾಡಲು ಬರದೇ ವಿಕೆಟ್​ಗಳು ಪತನಗೊಂಡ ಬಳಿಕ ಏಳನೇ ಕ್ರಮಾಂಕದಲ್ಲಿ ಆಡಲು ಇಳಿದರು. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲು ಬರಬೇಕಾಗಿದ್ದ ವಿರಾಟ್​ ಕೊಹ್ಲಿ ಕ್ರೀಸ್​ಗೆ ಇಳಿಯಲಿಲ್ಲ.

Exit mobile version