Site icon Vistara News

IND vs ENG: ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ನೂತನ ದಾಖಲೆ ಸೃಷ್ಟಿ

India vs England 5th Test

ಧರ್ಮಶಾಲಾ: ಇಂಗ್ಲೆಂಡ್(IND vs ENG)​ ವಿರುದ್ಧದ ಅಂತಿಮ ಟೆಸ್ಟ್(India vs England 5th Test)​ ಪಂದ್ಯದಲ್ಲಿ ಆತಿಥೇಯ ಭಾರತ ಇನಿಂಗ್ಸ್​ ಮತ್ತು 64 ರನ್​ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 4-1 ರೊಂದಿಗೆ ಮುಕ್ತಾಯಗೊಳಿಸಿದೆ. ಗುರುವಾರ ಆರಂಭಗೊಂಡ ಈ ಟೆಸ್ಟ್​ ಪಂದ್ಯ ಕೇವಲ ಮೂರು ದಿನಕ್ಕೆ ಅಂತ್ಯಕಂಡಿತು.

ದಾಖಲೆ ಬರೆದ ಭಾರತ

ಭಾರತ ಈ ಗೆಲುವಿನ ಮೂಲಕ 112 ವರ್ಷದಲ್ಲೇ ಮೊದಲ ಪಂದ್ಯದ ಸೋಲಿನ ಬಳಿಕ 5 ಪಂದ್ಯದ ಸರಣಿಯಲ್ಲಿ 4-1 ರಿಂದ ಗೆದ್ದ ಏಕೈಕ ತಂಡ ಎಂಬ ಇತಿಹಾಸ ನಿರ್ಮಿಸಿತು. 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯ ಸೋತು ಬಳಿಕ ಸರಣಿಯನ್ನು 4-1ರಿಂದ ಗೆದ್ದಿದ್ದು ಈ ವರೆಗೆ ಕೇವಲ 2 ತಂಡಗಳು ಮಾತ್ರ. 1897-98 ಮತ್ತು 1901-02ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ, 1912ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ಈ ಸಾಧನೆ ಮಾಡಿತ್ತು. ಇದೀಗ ಈ ಸಾಧನೆ ಕೂಡ ಈ ಸಾಧನೆ ಮಾಡಿದೆ.

ಮೂರನೇ ದಿನವಾದ ಶನಿವಾರ 8 ವಿಕೆಟ್​ಗೆ 473 ರನ್​ ಗಳಿಸಿದ್ದಲ್ಲಿಂದ ಬ್ಯಾಟಿಂಗ್​ ಮುಂದುವರಿಸಿ ಭಾರತ ಕೇವಲ ನಾಲ್ಕು ರನ್​ ಗಳಿಸಲಷ್ಟೇ ಶಕ್ತವಾಗಿ 477ರನ್​ಗೆ ಆಲೌಟ್​ ಆಯಿತು. 259 ರನ್​ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್​ಗೆ 100ನೇ ಟೆಸ್ಟ್​ ಆಡಿದ ಆರ್​.ಅಶ್ವಿನ್​ ಅವಳಿ ಆಘಾತವಿಕ್ಕಿದರು. ಜಾಕ್​ ಕ್ರಾಲಿ ಅವರನ್ನು ಶೂನ್ಯಕ್ಕೆ ಮತ್ತು ಬೆನ್​ ಡಕೆಟ್​ ಅವರನ್ನು ಕೇವಲ 2 ರನ್​ಗೆ ಔಟ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಆ ಬಳಿಕ ಕುಲ್​ದೀಪ್​ ಯಾದವ್​ ಕೂಡ ತಮ್ಮ ಸ್ಪಿನ್ ಜಾದು ಮೂಲಕ ವಿಕೆಟ್​ ಕಿತ್ತು ಆಂಗ್ಲರನ್ನು ಹಡೆಮುರಿ ಕಟ್ಟಿದರು.

ರೂಟ್​ ಏಕಾಂಗಿ ಹೋರಾಟ


ಒಂದೆಡೆ ಸಹ ಆಟಗಾರರ ವಿಕೆಟ್​ ಬಡಬಡನೆ ಬೀಳುತ್ತಿದ್ದರೂ ಮತ್ತೊಂದು ಕಡೆ ಕ್ರೀಸ್​ನಲ್ಲಿ ಬೇರೂರಿ ನಿಂತ ಜೋ ರೂಟ್​ ಏಕಾಂಗಿ ಹೋರಾಟದ ಮೂಲಕ ಕೆಲ ಕಾಲ ಭಾರತೀಯ ಬೌಲರ್​ಗಳನ್ನು ಕಾಡಿದರು. ಜತೆಗೆ ತಂಡವನ್ನು ಪಾರು ಮಾಡುವ ಪ್ರಯತ್ನ ಮುಂದುವರಿಸಿದರು. ಆದರೆ, 84 ರನ್​ ಗಳಿಸಿದ ವೇಳೆ ಇವರ ವಿಕೆಟ್​ ಕೂಡ ಪತನಗೊಂಡಿತು. ಈ ವಿಕೆಟ್​ ಬೀಳುತ್ತಿದ್ದಂತೆ ಇಂಗ್ಲೆಂಡ್​ ಇನಿಂಗ್ಸ್​ ಕೂಡ ಮುಕ್ತಾಯಕಂಡಿತು. ಆರ್​.ಅಶ್ವಿನ್​ ದ್ವಿತೀಯ ಇನಿಂಗ್ಸ್​ನಲ್ಲಿ 5 ವಿಕೆಟ್​ ಕಿತ್ತು ತಮ್ಮ 100ನೇ ಟೆಸ್ಟ್​ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಕುಲ್​ದೀಪ್​ ಮತ್ತು ಜಸ್​ಪ್ರೀತ್​ ಬುಮ್ರಾ ತಲಾ 2 ವಿಕೆಟ್​ ಕಿತ್ತರು. ಅಂತಿಮವಾಗಿ ಇಂಗ್ಲೆಂಡ್​ 195 ರನ್​ಗೆ ಆಲೌಟ್​ ಆಯಿತು.

700 ವಿಕೆಟ್​ ಪೂರ್ತಿಗೊಳಿಸಿದ ಆ್ಯಂಡರ್ಸನ್​


ಜೇಮ್ಸ್​ ಆ್ಯಂಡರ್ಸನ್​ ಅವರು ಕುಲ್​ದೀಪ್​ ಯಾದವ್​ ಅವರ ವಿಕೆಟ್​ ಕೀಳುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ಗಳನ್ನು ಪೂರ್ತಿಗೊಳಿಸಿದರು. ಈ ಸಾಧನೆಗೈದ ವಿಶ್ವದ ಮೂರನೇ ಹಾಗೂ ಮೊದಲ ವೇಗಿ ಎಂಬ ಹಿರಿಮೆಗೆ ಪಾತ್ರರಾದರು. ರೋಹಿತ್​ ಶರ್ಮ ಅವರು ಬೆನ್ನು ಮೂಳೆಯ ನೋವಿನಿಂದಾಗಿ ಮೂರನೇ ದಿನದಾಟದಿಂದ ಹೊರಗುಳಿದರು. ಹೀಗಾಗಿ ಉಪನಾಯಕ ಜಸ್​ಪ್ರೀತ್​ ಬುಮ್ರಾ ತಂಡವನ್ನು ಮುನ್ನಡೆಸಿದರು.

Exit mobile version