Site icon Vistara News

IPL 2023: ಮುಂಬೈ ಗೆದ್ದರೂ ಪ್ಲೇ ಆಫ್​ ಭವಿಷ್ಯ ಗುಜರಾತ್​ ಕೈಯಲ್ಲಿ

Wankhede Stadium, Mumbai

#image_title

ಮುಂಬಯಿ: ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಾದ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಸನ್​ರೈಸರ್ಸ್​ ವಿರುದ್ಧ 8 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಆದರೆ ತಂಡ ಪ್ಲೇ ಆಫ್​ ಪ್ರವೇಶ ಪಡೆಯಬೇಕಿದ್ದರೆ ಆರ್​ಸಿಬಿ ಮತ್ತು ಗುಜರಾತ್​ ನಡುವಣ ಪಂದ್ಯದ ಫಲಿತಾಂಶ ಬರಬೇಕಿದೆ. ಒಂದೊಮ್ಮೆ ಆರ್​ಸಿಬಿ ಗೆದ್ದರೆ ಮುಂಬೈ ತಂಡದ ಈ ಗೆಲುವು ವ್ಯರ್ಥವಾಗುತ್ತದೆ. ಸದ್ಯದ ಪ್ರಕಾರ ಅದೃಷ್ಟ ರೋಹಿತ್​ ಪಡೆಗೆ ಇರುವಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಪಂದ್ಯ ರದ್ದಾದರೆ ಮುಂಬೈ ತಂಡ ಆರ್​ಸಿಬಿಗಿಂತ ಒಂದು ಅಂಕ ಮುನ್ನಡೆಯಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್​ಗೆ ಲಗ್ಗೆಯಿಡಲಿದೆ. ಆರ್​ಸಿಬಿಯ ಈ ಸಲ ಕಪ್​ ನಮ್ದೇ ಅಭಿಯಾನ ಮತ್ತೊಮ್ಮೆ ಕೊನೆಗೊಳ್ಳಲಿದೆ.

ಮುಂಬಯಿ ವಾಂಖೇಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಸನ್​ರೈಸರ್ಸ್​ ಹೈದರಾಬಾದ್​ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 200 ರನ್​ ಗಳಿಸಿತು. ಬೃಹತ್​ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ಮುಂಬೈ 18 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 201 ರನ್​ ಬಾರಿಸಿ ಅಧಿಕಾರಯುತ ಗೆಲುವು ದಾಖಲಿಸಿತು. ಮುಂಬೈ ಪರ ಕ್ಯಾಮರೂನ್​ ಗ್ರೀನ್​(100*) ಅಜೇಯ ಶತಕ ಬಾರಿಸಿ ಮಿಂಚಿದರು.

ಆರ್ಭಟಿಸಿದ ಗ್ರೀನ್​-ರೋಹಿತ್

ಬ್ಯಾಟಿಂಗ್​ ಬರಗಾಲ ಎದುರಿಸುತ್ತಿದ್ದ ನಾಯಕ ರೋಹಿತ್​ ಶರ್ಮ ಮತ್ತು ದುಬಾರಿ ಬೆಲೆಯ ಕ್ಯಾಮರೂನ್​ ಗ್ರೀನ್​ ಮಹತ್ವದ ಪಂದ್ಯದಲ್ಲೇ ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡರು. ದ್ವಿತೀಯ ವಿಕೆಟ್​ಗೆ ಜತೆಯಾದ ಈ ಜೋಡಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿಸಿದರು. ವಾಂಖೇಡೆ ಕ್ರಿಕೆಟ್​ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್​ ಬೌಂಡರಿ ಬಾರಿಸಿ ಹೈದರಾಬಾದ್​ ಬೌಲರ್​ಗಳನ್ನು ಬೆಂಡೆತ್ತಿದರು. ಜತೆಗೆ ನೆರೆದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು.

ರೋಹಿತ್​ ಶರ್ಮ 37 ಎಸೆತಗಳಿಂದ 56 ರನ್​ ಗಳಿಸಿ ಔಟಾದರು. ಗ್ರೀನ್​ ಮತ್ತು ರೋಹಿತ್​ ದ್ವಿತೀಯ ವಿಕೆಟ್​ಗೆ 128 ರನ್​ಗಳ ಅಮೂಲ್ಯ ಜತೆಯಾಟ ನಡೆಸಿದರು. ರೋಹಿತ್​ ವಿಕೆಟ್​ ಪತನಗೊಂಡರೂ ಗ್ರೀನ್​ ಅವರ ಬ್ಯಾಟಿಂಗ್​ ಆರ್ಭಟಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಅವರು ಬ್ಯಾಟ್​ ಬೀಸುತ್ತಲೇ ಸಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು. ಅಂತಿಮ ಹಂತದವರೆಗೂ ಬ್ಯಾಟಿಂಗ್​ ನಡೆಸಿದ ಗ್ರೀನ್​ ಐಪಿಎಲ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. 47 ಎಸೆತಗಳಿಂದ ತಲಾ 8 ಸಿಕ್ಸರ್​ ಮತ್ತು 8 ಬೌಂಡರಿ ನೆರವಿನಿಂದ ಅಜೇಯ 100 ರನ್​ ಗಳಿಸಿದರು. ಸೂರ್ಯಕುಮಾರ್​ ಅಜೇಯ 25 ರನ್​ ಬಾರಿಸಿದರು.

ಅಗರ್ವಾಲ್​-ವಿವ್ರಾಂತ್ ಸ್ಫೋಟಕ ಬ್ಯಾಟಿಂಗ್​

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಹೈದರಾಬಾದ್​ ಪರ ವಿವ್ರಾಂತ್ ಶರ್ಮಾ ಮತ್ತು ಕನ್ನಡಿಗ ಮಯಾಂಕ್​ ಅಗರ್ವಾಲ್​ ಮೈ ಚಳಿ ಬಿಟ್ಟು ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮುಂಬೈ ಬೌಲರ್​ಗಳನ್ನು ಬೆಂಡೆತ್ತಿದ ಉಭಯ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದರು.

ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಈ ಜೋಡಿ ಮೊದಲ ವಿಕೆಟ್​ಗೆ 140 ರನ್​ ಒಟ್ಟುಗೂಡಿಸಿದರು. ವಿವ್ರಾಂತ್ ಶರ್ಮಾ ಅವರು 47 ಎಸೆತ ಎದುರಿಸಿ 9 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 69 ರನ್​ ಬಾರಿಸಿದರು. ಅಭಿಷೇಕ್​ ಶರ್ಮ ಅವರ ಬದಲು ಆಡಲಿಳಿದ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಈ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಇಳಿದ ಕಳೆದ ಪಂದ್ಯದ ಶತಕ ವೀರ ಹೆನ್ರಿಚ್​ ಕ್ಲಾಸೆನ್​ 18 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು.

ಇದನ್ನೂ ಓದಿ IPL 2023: ಬೆಂಗಳೂರಿನಲ್ಲಿ ಭಾರಿ ಮಳೆ; ಆರ್​ಸಿಬಿ ಅಭಿಮಾನಿಗಳಿಗೆ ಆತಂಕ

ಈ ಸೀಸನ್​ನಲ್ಲಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಮಯಾಂಕ್​ ಅಗರ್ವಾಲ್​ ಅವರು ಕೊನೆಯ ಲೀಗ್​ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಶತಕದತ್ತ ಮುನ್ನುಗುತ್ತಿದ್ದ ಅವರನ್ನು ಆಕಾಶ್ ಮಧ್ವಲ್ ಔಟ್​ ಮಾಡಿದರು. 83 ರನ್​ ಬಾರಿಸಿದ ಅಗರ್ವಾಲ್​ 8 ಬೌಂಡರಿ ಮತ್ತು 4 ಸೊಗಸಾದ ಸಿಕ್ಸರ್​ ಬಾರಿಸಿದರು. ಅಗರ್ವಾಲ್​ ಮತ್ತು ವಿವ್ರಾಂತ್ ವಿಕೆಟ್​ ಪತನದ ಬಳಿಕ ತಂಡದ ರನ್​ ವೇಗವೂ ಕುಂಠಿತಗೊಂಡಿತು. ಆರಂಭದಲ್ಲಿ ಉಭಯ ಆಟವನ್ನು ಕಂಡಾಗ ತಂಡ 220 ಗಡಿ ದಾಟಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಬಳಿಕ ಬಂದ ಆಟಗಾರರೆಲ್ಲ ವಿಕೆಟ್​ ಒಪ್ಪಿಸಿ ತಂಡದ ದೊಡ್ಡ ಮೊತ್ತಕ್ಕೆ ಹಿನ್ನಡೆ ಉಂಟು ಮಾಡಿದರು. ನ್ಯೂಜಿಲ್ಯಾಂಡ್​ ತಂಡದ ಸ್ಫೋಟಕ ಬ್ಯಾಟರ್​ ಗ್ಲೆನ್​ ಫಿಲಿಪ್ಸ್​ ಒಂದು ರನ್​ಗೆ ವಿಕೆಟ್​ ಒಪ್ಪಿಸಿದರು. ಅಂತಿಮ ಹಂತದಲ್ಲಿ ನಾಯಕ ಮಾರ್ಕ್​ರಮ್​ ಸಿಕ್ಸರ್​ ಬಾರಿಸಿ ತಂಡದ ಮೊತ್ತ 200ಕ್ಕೆ ಏರಿಸಿದರು.

Exit mobile version