Site icon Vistara News

IPL 2023: ಚೆನ್ನೈ ತಂಡಕ್ಕೆ ಶುಭಕೋರುವ ಮೂಲಕ ಆರ್​ಸಿಬಿ, ವಿರಾಟ್​ ಟ್ರೋಲ್​ ಮಾಡಿದ ಗಂಭೀರ್​

chennai super kings champions of 2023 ipl

ಅಹಮದಾಬಾದ್​: 16ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಈ ಮೂಲಕ 5ನೇ ಬಾರಿ ಕಪ್​ ಗೆದ್ದ ಸಾಧನೆ ಮಾಡಿತು. ಚೆನ್ನೈ ತಂಡ ಕಪ್​ ಗೆಲ್ಲುತ್ತಿದ್ದಂತೆ ಗೌತಮ್ ಗಂಭೀರ್​ ಅವರು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತೆ ಎಂಬ ನಾಣ್ಣುಡಿಯಂತೆ ಶುಭಕೋರುವ ಮೂಲಕ ಆರ್​ಸಿಬಿ ಮತ್ತು ವಿರಾಟ್​ ಕೊಹ್ಲಿಯ ಕಾಲೆಳೆದಿದ್ದಾರೆ.

ಮಳೆಯಿಂದಾಗಿ ಭಾನುವಾರದಿಂದ ಸೋಮವಾರಕ್ಕೆ ಮುಂದೂಡಲ್ಪಟ್ಟಿದ್ದ ಐಪಿಎಲ್​ 16ನೇ ಆವೃತ್ತಿಯ ಮಳೆ ಪೀಡಿತ ಫೈನಲ್​ನಲ್ಲಿ ಚೆನ್ನೈ ತಂಡ ಹಾಲಿ ಚಾಂಪಿಯನ್​ ಆಗಿದ್ದ ಗುಜರಾತ್​ ತಂಡವನ್ನು ಡಕ್ವರ್ತ್​ ಲೂಯಿಸ್​ ನಿಯಮದನ್ವಯ 5 ವಿಕೆಟ್​ಗಳಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಸತತ ಎರಡನೇ ಟ್ರೋಫಿಯ ಕನಸು ಕಂಡಿದ್ದ ಹಾರ್ದಿಕ್​ ಪಡೆ ನಿರಾಸೆ ಅನುಭವಿಸಿತು. ಕಡೇಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಅವರು ಸಿಕ್ಸರ್​ ಮತ್ತು ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು.

ಪಂದ್ಯದ ಮುಕ್ತಾಯದ ಬಳಿಕ ಟ್ವೀಟ್​​ ಮಾಡಿದ ಗಂಭೀರ್​ ಅವರು,”ಒಂದು ಬಾರಿ ಕಪ್​ ಗೆಲ್ಲುವುದೇ ಕಷ್ಟ, ಆದರೆ ಐದು ಬಾರಿ ಕಪ್​ ಗೆಲ್ಲುವುದೆಂದರೆ ನಿಜಕ್ಕೂ ಅದ್ಭುತ, ಈ ಸಾಮರ್ಥ್ಯಕ್ಕೆ ಮೆಚ್ಚಲೇ ಬೇಕು” ಎಂದು ಬರೆದುಕೊಂಡಿದ್ದಾರೆ. ಇದು ಗಂಭೀರ್​ ಅವರು ವಿರಾಟ್​ ಕೊಹ್ಲಿ ಮತ್ತು ಆರ್​ಸಿಬಿ ತಂಡಕ್ಕೆ ಪರೋಕ್ಷವಾಗಿ ನೀಡಿದ ಟಾಂಗ್​ ಎಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ IPL 2023: ಚೆನ್ನೈ ತಂಡಕ್ಕೆ ಶುಭಾಶಯಗಳ ಮಹಾಪೂರ, ಅಭಿನಂದನೆಗಳ ಸಾಲೇ ರೋಮಾಂಚಕ!

ಈ ಬಾರಿಯ ಐಪಿಎಲ್​ನಲ್ಲಿ ಗಂಭೀರ್​ ಮತ್ತು ವಿರಾಟ್​ ಕೊಹ್ಲಿ ಮಧ್ಯೆ ಮೈದಾನದಲ್ಲೇ ಕೆಲವು ಘರ್ಷಣೆಗಳು ನಡೆದಿತ್ತು. ಬಳಿಕ ಒಬ್ಬರಿಗೊಬ್ಬರು ಟ್ವಿಟರ್​ ಮೂಲಕ ತಮ್ಮ ಆಕ್ರೋಶವನ್ನು ಪರೋಕ್ಷವಾಗಿ ವ್ಯಕ್ತಪಡಿಸುತ್ತಿದ್ದರು. ಇದರ ಜತೆಗೆ ಆರ್​ಸಿಬಿ ಮತ್ತು ಕೊಹ್ಲಿ​ ಅವರ ಅಭಿಮಾನಿಗಳು ಗಂಭಿರ್​ಗೆ ಹೋದಲ್ಲಿ ಬಂದಲ್ಲಿ ಕೊಹ್ಲಿ ಹೆಸರು ಕೂಗುತ್ತಾ ಕೀಟಲೆ ಮಾಡುತ್ತಿದ್ದರು. ಇದೆಲ್ಲದಕ್ಕೂ ಗಂಭೀರ್​ ಚೆನ್ನೈ ಗೆಲುವಿಗೆ ಶುಭಕೋರುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಒಂದು ಕಪ್​ ಗೆಲ್ಲಲು ಯೋಗ್ಯತೆ ಇಲ್ಲದ ತಂಡ ಎನ್ನುವ ಅರ್ಥದಲ್ಲಿ ತಿರುಗೇಟು ನೀಡಿದ್ದಾರೆ. ಸದ್ಯ ಗಂಭಿರ್​ ಅವರ ಟ್ವೀಟ್​ ವೈರಲ್​ ಆಗಿದೆ.

Exit mobile version