Site icon Vistara News

IPL 2023: ಚೆನ್ನೈ ತಂಡದ ಘಾತಕ ಬೌಲಿಂಗ್​ ದಾಳಿಗೆ ಕುಸಿದ ಮುಂಬೈ ಇಂಡಿಯನ್ಸ್​

IPL 2023: Mumbai Indians collapsed due to Chennai team's devastating bowling attack

IPL 2023: Mumbai Indians collapsed due to Chennai team's devastating bowling attack

ಮುಂಬಯಿ: ಲಕ್ನೋ ವಿರುದ್ಧದ ಪಂದ್ಯದಲ್ಲಿ ಕಳಪೆ ಬೌಲಿಂಗ್​ ನಡೆಸಿ ನಾಯಕ ಧೋನಿ ಅವರಿಂದ ಟೀಕೆಗೆ ಒಳಗಾಗಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಬೌಲರ್​ಗಳು, ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್​ ಪ್ರದರ್ಶನ ತೋರಿದ್ದಾರೆ. ರೋಹಿತ್​ ಪಡೆಯನ್ನು ತವರಿನಲ್ಲಿ 157 ರನ್​ಗಳಿಗೆ ಕಟ್ಟಿಹಾಕಿದ್ದಾರೆ. ಚೆನ್ನೈ ಗೆಲುವಿಗೆ 158 ರನ್​ ಬಾರಿಸಬೇಕಿದೆ.

ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ಇಂಡಿಯನ್ಸ್​ ಉತ್ತಮ ಆರಂಭದ ಬಳಿಕ ನಾಟಕೀಯ ಕುಸಿತ ಕಂಡು 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 157 ರನ್​ ಗಳಿಸಿದೆ. ಇನಿಂಗ್ಸ್​ ಆರಂಭಿಸಿ ಮುಂಬೈಗೆ ನಾಯಕ ರೋಹಿತ್​ ಮತ್ತು ಇಶಾನ್​ ಕಿಶನ್​ ಉತ್ತಮ ಆರಂಭ ಒದಗಿಸಿದರು. ಮೂರು ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ ಮೂವತ್ತು ರನ್​ ಬಾರಿಸಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡಿತು.

ರೋಹಿತ್​ ಮತ್ತು ಇಶಾನ್​ ಕಿಶನ್​ ಕ್ರೀಸ್​ನಲ್ಲಿ ಬೇರೂರಿ ನಿಂತಾಗ ಈ ಪಂದ್ಯದಲ್ಲಿಯೂ ಚೆನ್ನೈ ಬೌಲರ್​ಗಳು ಹಳಿ ತಪ್ಪಿದಂತೆ ಕಂಡುಬಂತು. ಆದರೆ ತುಷಾರ್​ ದೇಶ್​ಪಾಂಡೆ ನಾಯಕ ರೋಹಿತ್​ ಶರ್ಮ ಅವರನ್ನು ಕ್ಲೀನ್​ ಬೌಲ್ಡ್​ ಮಾಡುವ ಮೂಲಕ ಚೆನ್ನೈಗೆ ಅರ್ಲಿ ಬ್ರೇಕ್​ ನೀಡಿದರು. ರೋಹಿತ್​ 21 ರನ್​ ಬಾರಿಸಿದರು. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಕ್ಯಾಮರೂನ್​ ಗ್ರೀನ್​ ಅವರು ಇಶಾನ್​ ಕಿಶನ್​ ಜತೆಗೂಡಿ ಇನಿಂಗ್ಸ್​ ಬೆಳೆಸುವ ಯೋಜನೆಯಲ್ಲಿದ್ದರು. ಆದರೆ ಕಿಶನ್​ ಕೂಡ ವಿಕೆಟ್​ ಕೈಚೆಲ್ಲಿದರು. ಅವರ ಗಳಿಕೆ 32. ಇದರಲ್ಲಿ 5 ಬೌಂಡರಿ ಸಿಡಿಯಿತು.

ಆರಂಭಿಕರಿಬ್ಬರ ವಿಕೆಟ್​ ಪತನದ ಬಳಿಕ ಚೆನ್ನೈ ಬೌಲರ್​ಗಳು ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರು. ಇವರ ಬೌಲಿಂಗ್‌ ಆಕ್ರಮಣಕ್ಕೆ ನಲುಗಿದ ಮುಂಬೈ ಯಾವ ಹಂತದಲ್ಲೂ ಚೇತರಿಕೆಯ ಲಕ್ಷಣ ತೋರಲಿಲ್ಲ. ಒಂದೊಂದು ರನ್ನಿಗೂ ಅದು ಪರದಾಟ ನಡೆಸಿತು. ಸೂರ್ಯಕುಮಾರ್​ ಈ ಪಂದ್ಯದಲ್ಲಿಯೂ ವೈಫಲ್ಯ ಕಂಡರು ಕೇವಲ ಒಂದು ರನ್​ಗೆ ಸೀಮಿತರಾದರು.

ಇದನ್ನೂ ಓದಿ IPL 2023: ಸೂಪರ್​ ಮ್ಯಾನ್ ರೀತಿ​ ಕ್ಯಾಚ್ ಪಡೆದ ಸಂಜು ಸ್ಯಾಮ್ಸನ್​; ವಿಡಿಯೊ ವೈರಲ್​​

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಅಜೇಯ 84ರನ್​ ಬಾರಿಸಿ ಏಕಾಂಗಿಯಾಗಿ ಹೋರಾಟ ನಡೆಸಿದ್ದ ತಿಲಕ್​ ವರ್ಮ ಅವರು ಈ ಪಂದ್ಯದಲ್ಲಿಯೂ ಬೌಂಡರಿ, ಸಿಕ್ಸರ್​ ಬಾರಿಸುವ ಮೂಲಕ ಒಂದು ಹಂತದಲ್ಲಿ ತಂಡದಕ್ಕೆ ಆಸರೆಯಾಗುವ ಸೂಚನೆ ನೀಡಿದರು. ಆದರೆ ರವೀಂದ್ರ ಜಡೇಜಾ ಅವರು ಎಲ್​ಬಿಡಬ್ಲ್ಯು ಬಲೆಗೆ ಬೀಳಿಸಿ ಅವರ ಯೋಜನೆಗೆ ಅಡ್ಡಗಾಲಿಟ್ಟರು. ಕ್ಯಾಮರೂನ್​ ಗ್ರೀನ್​ ಅವರ ಸೂಪರ್​ ಫಾಸ್ಟ್​ ಹೊಡೆತವನ್ನು ಕಣ್ಣು ರೆಪ್ಪೆ ಮಿಟುಕಿಸುವ ಮುನ್ನ ಒಂದೇ ಕೈಯಲ್ಲಿ ಕ್ಯಾಚ್​ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದರು. ಒಂದೊಮ್ಮೆ ಜಡೇಜಾ ಈ ಕ್ಯಾಚ್​ ಹಿಡಿಯದೇ ಹೋಗಿದ್ದರೆ ಚೆಂಡು ಅಂಪೈರ್​ ಅವರ ಮುಖಕ್ಕೆ ಬಡಿಯುತ್ತಿತ್ತು. ಚೆಂಡನ್ನು ತಪ್ಪಿಸಿಕೊಳ್ಳಲು ಅಂಪೈರ್​ ಅವರು ಮೈದಾನದಲ್ಲೆ ಕುಸಿದರು. ಆದರೆ ಜಡೇಜಾ ಅವರು ಈ ಕ್ಯಾಚ್​ ಪಡೆಯುವಲ್ಲಿ ಯಶಸ್ವಿಯಾದರು. ಜಡೇಜಾ ಚೆಂಡನ್ನು ಹಿಡಿದ ಬಳಿಕ ಅಂಪೈರ್​ ನಿಟ್ಟುಸಿರು ಬಿಟ್ಟರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ IPL 2023: ಹ್ಯಾಟ್ರಿಕ್​ ಸೋಲಿಗೆ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್​; ರಾಜಸ್ಥಾನ್​ಗೆ 57 ರನ್​ ಗೆಲುವು

ಅಂತಿಮ ಹಂತದಲ್ಲಿ ತುಷಾರ್​ ದೇಶ್​ಪಾಂಡೆ ಓವರ್​ನ ಮೊದಲ ಎಸೆತದಲ್ಲಿ ಜೀವದಾನ ಪಡೆದ ಟಿಮ್​ ಡೇವಿಡ್​ ಆ ಬಳಿಕದ ಎಸೆತಗಳಲ್ಲಿ 2 ಸಿಕ್ಸರ್​ ಮತ್ತು ಬೌಂಡರಿ ಬಾರಿಸಿದರು. ಆದರೆ ಇದೇ ಓವರ್​ನಲ್ಲಿ ಅವರು ರಹಾನೆಗೆ ಕ್ಯಾಚ್​ ನೀಡಿ ಔಟಾದರು. 22 ಎಸೆತ ಎದುರಿಸಿ 31 ರನ್​ ಕೊಡುಗೆ ನೀಡಿದರು. ಅಂತಿಮವಾಗಿ ಹೃತಿಕ್​ ಶೋಕೀನ್​ ಅವರು 18 ರನ್​ ಬಾರಿಸಿದ ಪರಿಣಾಮ ತಂಡ 150ರ ಗಡಿ ದಾಟಿತು. ಚೆನ್ನೈ ಪರ ಬೌಲಿಂಗ್​ನಲ್ಲಿ ರವೀಂದ್ರ ಜಡೇಜಾ 20 ರನ್​ಗೆ ಮೂರು ವಿಕೆಟ್​ ಪಡೆದರು. ಉಳಿದಂತೆ ಮಿಚೆಲ್​ ಸ್ಯಾಂಟ್ನರ್​ ಮತ್ತು ತುಷಾರ್​ ದೇಶ್​ಪಾಂಡೆ ತಲಾ 2 ವಿಕೆಟ್​ ಕಿತ್ತರು. ಮೊಯಿನ್​ ಅಲಿ ಮತ್ತು ಬೆನ್​ ಸ್ಟೋಕ್ಸ್​ ಈ ಪಂದ್ಯದಿಂದ ಹೊರಗುಳಿದರು. ಅವರ ಬದಲು ಡ್ವೇನ್ ಪ್ರಿಟೋರಿಸ್ ಹಾಗೂ ಸಿಸಾಂಡ ಮಗಾಲ ಆಡಲಿಳಿದರು.

Exit mobile version