Site icon Vistara News

IPL 2023: ಮುಂದಿನ ಸಲ ಕಪ್​ ನಮ್ದೇ; ಪ್ಲೇ ಆಫ್​ಗೆ ಲಗ್ಗೆಯಿಟ್ಟ ಮುಂಬೈ

Gujarat Titans won by 6 wkts

#image_title

ಬೆಂಗಳೂರು: ಐಪಿಎಲ್‌ನ ಅತ್ಯಂತ ನತದೃಷ್ಟ ತಂಡಗಳಲ್ಲಿ ಒಂದಾದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಈ ಬಾರಿಯೂ ಕಪ್​ ಗೆಲ್ಲುವಲ್ಲಿ ವಿಫಲವಾಯಿತು. ಪ್ಲೇ ಆಫ್​ಗೇರುವ ಮಹತ್ವದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ವಿರುದ್ದ 6 ವಿಕೆಟ್ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತು. ಸೋಲಿನಿಂದ ಆರ್​ಸಿಬಿ ಅಭಿಮಾನಿಗಳ ಈ ಸಲ ಕಪ್​ ನಮ್ದೇ ಅಭಿಯಾನ ಮುಂದಿನ ಆವೃತ್ತಿಗೂ ಮುಂದುವರಿದಿದೆ. ಚೇಸಿಂಗ್​ ವೇಳೆ ಶುಭಮನ್​ ಗಿಲ್(104*)​ ಅಜೇಯ ಶತಕ ಬಾರಿಸಿ ಆರ್​ಸಿಬಿಯ ಗೆಲುವು ಕಸಿದರು.

ಆರ್​ಸಿಬಿಯ ಈ ಸೋಲಿನಿಂದ ಮುಂಬೈ ತಂಡ ಪ್ಲೇ ಆಫ್​ ಪ್ರವೇಶಿಸಿತು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಮುಂಬೈ ತಂಡ ಹೈದರಾಬಾದ್​ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿತ್ತು. ಸಾರಸ್ಯವೆಂದರೆ ಕಳೆದ ವರ್ಷ ಮುಂಬೈ ತಂಡ ಡೆಲ್ಲಿ ತಂಡವನ್ನು ಮಣಿಸಿದ ಪರಿಣಾಮ ಆರ್​ಸಿಬಿ ಪ್ಲೇ ಆಫ್​​ ಪ್ರವೇಶಿಸಿತ್ತು. ಆದರೆ ಈ ಬಾರಿ ಆರ್​ಸಿಬಿ ಸೋಲುವ ಮೂಲಕ ಮುಂಬೈ ತಂಡಕ್ಕೆ ಪ್ಲೇ ಆಫ್​ ಅವಕಾಶ ನೀಡಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮಳೆಯಿಂದ ವಿಳಂಬವಾಗಿ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆರ್​ಸಿಬಿ ವಿರಾಟ್​ ಕೊಹ್ಲಿಯ ಅಜೇಯ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 197 ರನ್​ ಬಾರಿಸಿತು. ಗುರಿ ಬೆನ್ನಟಿದ ಗುಜರಾತ್​ 19.1 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 198 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಬೃಹತ್​ ಮೊತ್ತವನ್ನು ದಿಟ್ಟ ರೀತಿಯಿಂದ ಬೆನ್ನಟ್ಟಿದ ಗುಜರಾತ್​ ತಂಡ ಯಾವುದೇ ಆತಂಕವಿಲ್ಲದೆ ಬ್ಯಾಟಿಂಗ್​ ನಡೆಸಿತು. ಟೀಮ್​ ಇಂಡಿಯಾದ ಭವಿಷ್ಯದ ಕೊಹ್ಲಿ ಎಂದೇ ಖ್ಯಾತಿ ಪಡೆದ ಶುಭಮನ್​ ಗಿಲ್​ ಮತ್ತು ದ್ವಿತೀಯ ವಿಕೆಟ್​ಗೆ ಜತೆಯಾದ ವಿಜಯ್​ ಶಂಕರ್​ ಸೇರಿಕೊಂಡು ಆರ್​ಸಿಬಿಯ ಗೆಲುವಿಗೆ ಕೊಳ್ಳಿ ಇಟ್ಟರು.

ಇದನ್ನೂ ಓದಿ IPL 2023: ಮತ್ತೆ ಸೊನ್ನೆ ಸುತ್ತಿದ ದಿನೇಶ್‌ ಕಾರ್ತಿಕ್;‌ ಡಕ್‌ಔಟ್‌ನಲ್ಲಿ ಈಗ ರೋಹಿತ್‌ ಶರ್ಮಾಗಿಂತ ಮುಂದು

ಯಾವತ್ತೂ ಆಡದ ವಿಜಯ್​ ಶಂಕರ್​ ಅವರು ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸುವ ಮೂಲಕ ಆರ್​ಸಿಬಿಯ ಗೆಲುವಿಗೆ ಕಂಟಕವಾದರು. 35 ಎಸೆತಗಳಲ್ಲಿ 53 ರನ್​ ಚಚ್ಚಿದರು. ಇದರಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ ಒಳಗೊಂಡಿತು. ದ್ವಿತೀಯ ವಿಕೆಟ್​ಗೆ ಗಿಲ್​ ಜತೆಗೂಡಿ 123 ರನ್​ಗಳ ಜತೆಯಾಟ ನಡೆಸಿದರು. ಆದರೆ ಈ ವಿಕೆಟ್​ ಪತನದ ಬಳಿಕ ಬಂದ ಶ್ರೀಲಂಕಾ ಕ್ರಿಕೆಟ್​ ತಂಡದ ನಾಯಕ ದಶುನ್​ ಶನಕ ಖಾತೆ ತೆರಯುವ ಮುನ್ನವೇ ವಿಕೆಟ್​ ಕೈಚೆಲ್ಲಿದರು. ಈ ವೇಳೆ ತಂಡ ಕೊಂಚ ಆತಂಕಕ್ಕೆ ಸಿಲುಕಿತು. ಆದರೆ ಶುಭಮನ್​ ಗಿಲ್​ ನಿಂತು ಆಡುವ ಮೂಲಕ ತಂಡದ ಗೆಲುವನ್ನು ಸಾರಿದರು. ಗಿಲ್​ ಆರಂಭಿಕನಾಗಿ ಕಣಕ್ಕಿಳಿದು ಅಜೇಯವಾಗಿ 104 ರನ್​ ಬಾರಿಸಿ ಮಿಂಚಿದರು. ಅವರ ಈ ಸೊಗಸಾದ ಇನಿಂಗ್ಸ್​ನಲ್ಲಿ ಬರೋಬ್ಬರಿ 8 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಯಿತು. ಇದು ಗಿಲ್​ ಅವರು ಈ ಆವೃತ್ತಿಯಲ್ಲಿ ಬಾರಿಸಿದ ದ್ವಿತೀಯ ಶತಕವಾಗಿದೆ.

ಕೈ ಹಿಡಿಯದ ಅದೃಷ್ಟ

ಪಂದ್ಯಕ್ಕೂ ಮುನ್ನ ಸುರಿದ ಭಾರಿ ಮಳೆಯಿಂದಾಗಿ ಪಂದ್ಯ ನಡೆಯುವುದೇ ಅನುಮಾನ ಎಂಬಂತ್ತಿತ್ತು. ಈ ವೇಳೆ ಆರ್​ಸಿಬಿ ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ ಪಂದ್ಯ ಆರಂಭಗೊಳ್ಳುವ ಅರ್ಧ ತಾಸಿಗೆ ಮುನ್ನ ಮಳೆ ನಿಂತು ಪಂದ್ಯಕ್ಕೆ ಅನುವು ಮಾಡಿಕೊಟ್ಟಿತು. ಅಭಿಮಾನಿಗಳು ನಿಟ್ಟುಸಿರು ಬಿಟ್ಟರು. ಆದರೆ ಅದೃಷ್ಟವೆಂಬುವುದು ಆರ್​ಸಿಬಿ ಪಾಲಿಗೆ ಕಬ್ಬಿಣದ ಕಡಲೆಯಾಗದ ಪರಿಣಾಮ ಪಂದ್ಯ ಸೋಲು ಕಂಡಿತು.

ಐಪಿಎಲ್​ನಲ್ಲಿ ಶತಕ ಬಾರಿಸಿ ದಾಖಲೆ ಬರೆದ ವಿರಾಟ್​ ಕೊಹ್ಲಿ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಪರ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದರು. ತಂಡದ ಸಂಕಷ್ಟದ ಸಂದರ್ಭದಲ್ಲಿಯೂ ಆಪದ್ಬಾಂಧವನಂತೆ ಎದೆಯೊಡ್ಡಿ ನಿಂತ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣವಾಗಿದ್ದರು. ಜತೆಗೆ ಶತಕದೊಂದಿಗೆ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಐಪಿಎಲ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಕ್ರಿಸ್​ ಗೇಲ್​ ಅವರ ಜತೆ ಜಂಟಿ ದಾಖಲೆ ಬರೆದಿದ್ದರು. ಇದೀಗ 7 ಶತಕದೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. 60 ಎಸೆತಗಳಲ್ಲಿ ಶತಕ ಪೂರೈಸಿದ ಕೊಹ್ಲಿ ಅಂತಿಮವಾಗಿ 13 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ ಅಜೇಯ 101 ರನ್​ ಗಳಿಸಿದರು. ಆದರೆ ತಂಡ ಸೋತ ಕಾರಣ ಅವರ ಈ ಶತಕ ವ್ಯರ್ಥವಾಯಿತು.

Exit mobile version