Site icon Vistara News

IPL 2023: ಧೋನಿ ಗಾಯದ ಬಗ್ಗೆ ಮಾಹಿತಿ ನೀಡಿದ ತಂಡದ ಕೋಚ್​ ಸ್ಟೀಫ‌ನ್‌ ಫ್ಲೆಮಿಂಗ್‌

https://vistaranews.com/sports/ipl-2023-team-coach-informed-about-dhonis-injury/279025.html

https://vistaranews.com/sports/ipl-2023-team-coach-informed-about-dhonis-injury/279025.html

ಅಹಮದಾಬಾದ್​: ಗುಜರಾತ್​ ವಿರುದ್ಧ ನಡೆದ 16ನೇ ಆವೃತ್ತಿಯ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ(Dhoni) ಅವರು ಗಾಯಕ್ಕೆ ತುತ್ತಾಗಿದ್ದರು. ಇದೀಗ ಅವರ ಗಾಯದ ಬಗ್ಗೆ ತಂಡದ ಮುಖ್ಯ ಕೋಚ್ ಸ್ಟೀಫ‌ನ್‌ ಫ್ಲೆಮಿಂಗ್‌(Stephen Fleming) ಅವರು ಮಾಹಿತಿ ನೀಡಿದ್ದಾರೆ.

​​ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಟೀಫ‌ನ್‌ ಫ್ಲೆಮಿಂಗ್‌ ಅವರು ಧೋನಿ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಧೋನಿಗೆ ಯಾವುದೇ ರೀತಿಯ ಗಂಭೀರ ಗಾಯವಾಗಿಲ್ಲ. ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿಲ್ಲ. ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಅವರಿಗೆ ಸಣ್ಣ ಪ್ರಮಾಣದ ಕಾಲು ನೋವು ಕಾಣಿಸಿದ್ದು ನಿಜ. ಆದರೆ ಅವರು ಮುಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂಬುದು ಸುದ್ದಿ ಸುಳ್ಳು ಎಂದು ಫ್ಲೆಮಿಂಗ್‌ ಖಚಿತಪಡಿಸಿದ್ದಾರೆ.

ಒಂದು ವರ್ಷಗಳ ಬಳಿಕ ಕ್ರಿಕೆಟ್ ಆಡುತ್ತಿರುವ ಕಾರಣ ಧೋನಿಗೆ ಈ ಸ್ನಾಯು ಸೆಳೆತವಾಗಿದೆ. ಅವರು ಓರ್ವ ಲೆಜೆಂಡ್​ ಆಟಗಾರ. ಮುಂದಿನ ಪಂದ್ಯದದಲ್ಲಿ ಅವರು ಕಣಕ್ಕಿಳಿಯುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಫ್ಲೆಮಿಂಗ್‌ ಹೇಳಿದರು. ಫ್ಲೆಮಿಂಗ್‌ ಅವರ ಈ ಹೇಳಿಕೆಯಿಂದ ಧೋನಿ ಅಭಿಮಾನಿಗಳು ನಿರಾಳರಾಗಿದ್ದಾರೆ. ದೀಪಕ್​ ಚಹರ್​ ಅವರ ಎಸೆತಕ್ಕೆ ಲೆಗ್​ ಸೇಡ್​ನತ್ತ ಬ್ಯಾಟ್​ ಬಿಸಿದ ವೇಳೆ ಧೋನಿ ಚೆಂಡನ್ನು ತಡೆಯಲು ಜಿಗಿದರು. ಈ ವೇಳೆ ಧೋನಿ ಕಾಲಿನ ನೋವಿಗೆ ತುತ್ತಾಗಿ ಕೆಲ ಕಾಲ ನೋವಿನಿಂದ ಬಳಲಿದ್ದರು.

ಈ ಪಂದ್ಯದಲ್ಲಿ ಧೋನಿ ಅವರು 7 ಎಸೆತ ಎದುರಿಸಿ ಅಜೇಯ 14 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ ಒಂದು ಸಿಕ್ಸರ್​ ಮತ್ತು ಬೌಂಡರಿ ದಾಖಲಾಯಿತು. ಧೋನಿ ಅವರು ಬಾರಿಸಿದ ಈ ಒಂದು ಸಿಕ್ಸರ್​ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

5 ವಿಕೆಟ್​ ಸೋಲು ಕಂಡ ಚೆನ್ನೈ

ಶುಕ್ರವಾರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಈ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಚೆನ್ನೈ ತಂಡ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್​ ತಂಡ 19.2 ಓವರ್​​ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್​ ಬಾರಿಸಿ ಜಯ ಸಾಧಿಸಿತು.

ಇದನ್ನೂ ಓದಿ IPL 2023 : ಆರ್​ಸಿಬಿ ಕ್ಯಾಂಪ್​ನಲ್ಲಿ ಸುನೀಲ್​ ಚೆಟ್ರಿ, ಡೈವ್ ಹೊಡೆದು ಕ್ಯಾಚ್​ ಹಿಡಿದ ಫುಟ್ಬಾಲ್​ ದಿಗ್ಗಜ

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡ 37 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಾಹ 25 ರನ್​ ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸಾಯಿ ಸುದರ್ಶನ್​ 22 ರನ್ ಬಾರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 8 ರನ್​ಗೆ ಔಟಾಗುವ ಮೂಲಕ ತಂಡಕ್ಕೆ ಹಿನ್ನಡೆ ಉಂಟಾಯಿತು. ಆದರೆ, ಕೊನೇ ಹಂತದಲ್ಲಿ ವಿಜಯ್​ ಶಂಕರ್​ (27), ರಾಹುಲ್​ ತೆವತಿಯಾ (15) ಹಾಗೂ ರಶೀದ್ ಖಾನ್​ (10) ತಂಡವನ್ನು ಗೆಲ್ಲಿಸಿದರು.

ಅದಕ್ಕಿಂತ ಮೊದಲು ಬ್ಯಾಟ್​ ಮಾಡಲು ಆಹ್ವಾನ ಪಡೆದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟರ್ ಡೆವೋನ್​ ಕಾನ್ವೆ 1 ರನ್​ಗೆ ವಿಕೆಟ್​ ಒಪ್ಪಿಸುವ ಮೂಲಕ ಹಿನ್ನಡೆ ಉಂಟು ಮಾಡಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಮೊಯೀನ್ ಅಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರೂ 23 ರನ್​ಗಳಿಗೆ ಔಟಾದರು. ಸಿಎಸ್​ಕೆ ಪರ ಸ್ಫೋಟಕ ಅರ್ಧ ಶತಕ ಬಾರಿಸಿದ ಋತುರಾಜ್​ ಗಾಯಕ್ವಾಡ್​ 92 ರನ್​ ಬಾರಿಸಿ ಮಿಂಚಿದರು.

Exit mobile version