Site icon Vistara News

IPL 2025: ರಾಜಸ್ಥಾನ್​ ರಾಯಲ್ಸ್​ಗೆ ರಾಹುಲ್​ ದ್ರಾವಿಡ್​ ನೂತನ ಕೋಚ್​?

IPL 2025

IPL 2025: Rahul Dravid Likely To Replace Kumar Sangakkara In Rajasthan Royals For IPL 2025

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ಕೋಚ್​ ರಾಹುಲ್​ ದ್ರಾವಿಡ್(Rahul Dravid) ಅವರು​ ಮುಂದಿನ ಐಪಿಎಲ್(IPL 2025)ನಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡದ​ ಕೋಚಿಂಗ್​ ನಡೆಸುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ. ಸದ್ಯ ರಾಜಸ್ಥಾನ್ ತಂಡದ ಹಾಲಿ ಕೋಚ್​ ಆಗಿರುವ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಇಂಗ್ಲೆಂಡ್​ ಸೀಮಿತ ತಂಡದ ಕೋಚ್​ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅವರ ಸ್ಥಾನಕ್ಕೆ ದ್ರಾವಿಡ್​ ಅವರನ್ನು ನೇಮಕ ಮಾಡಲು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ದ್ರಾವಿಡ್​ ಜತೆ ಈಗಾಗಲೇ ಫ್ರಾಂಚೈಸಿ ಮಾತುಕತೆ ನಡೆಸಿದ್ದು ದ್ರಾವಿಡ್​ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟಗೊಂಡಿಲ್ಲ. ಈ ಹಿಂದೆ ದ್ರಾವಿಡ್​ ರಾಜಸ್ಥಾನ್ ರಾಯಲ್ಸ್​(Rajasthan Royals) ತಂಡದ ಪರವೇ 2 ಆವೃತ್ತಿಯಲ್ಲಿ ಕೋಚಿಂಗ್​ ನಡೆಸಿದ್ದರು. ಅಂಡರ್ 19 ತಂಡದ ಕೋಚ್ ಆದ ಕಾರಣ ಐಪಿಎಲ್​ ಕೋಚಿಂಗ್​ನಿಂದ ದೂರ ಉಳಿದಿದ್ದರು.

ರಾಜಸ್ಥಾನ್ ರಾಯಲ್ಸ್ ಪರ ನಾಯಕರಾಗಿ ದ್ರಾವಿಡ್ ಒಮ್ಮೆ ತಂಡವನ್ನು ಪ್ಲೇ ಆಪ್​ಗೆ ಕೊಂಡೊಯ್ದಿದ್ದರು. ಚಾಂಪಿಯನ್ಸ್ ಲೀಗ್​ನಲ್ಲಿ ತಂಡ ಫೈನಲ್​ಗೇರಿತ್ತು. ರಾಜಸ್ಥಾನ್ ತಂಡದ ಪರ 40 ಪಂದ್ಯಗಳಲ್ಲಿ ನಾಯಕರಾಗಿದ್ದ ದ್ರಾವಿಡ್ 23 ಗೆಲುವು ಕಂಡಿದ್ದಾರೆ. ಇದೀಗ ಎಲ್ಲ ಬಿಸಿಸಿಐ ಹುದ್ದೆಗಳಿಂದ ನಿವೃತ್ತಿ ಹೊಂದಿರುವ ದ್ರಾವಿಡ್​ ಮತ್ತೆ ಐಪಿಎಲ್​ ಕೋಚಿಂಗ್​ ಕಡೆ ಗಮನಹರಿಸಿದ್ದಾರೆ ಎನ್ನಲಾಗಿದೆ.

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಈ ಕೊರಗು ಕೂಡ ಅವರಲ್ಲಿತ್ತು. ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್‌ ಅನ್ನು ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ.

ಇದನ್ನೂ ಓದಿ IPL 2025: ಮುಂಬೈ ತಂಡದಿಂದ ಪಾಂಡ್ಯಗೆ ಗೇಟ್​ಪಾಸ್​; ಸೂರ್ಯಕುಮಾರ್​ಗೆ ನಾಯಕತ್ವ?

ಪ್ರಧಾನ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರಿಗೆ “ಭಾರತ ರತ್ನ” ಪ್ರಶಸ್ತಿಯಿಂದ ಗೌರವಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುನೀಲ್ ಗವಾಸ್ಕರ್ ಒತ್ತಾಯಿಸಿದ್ದಾರೆ. “ಭಾರತ ಸರಕಾರವು ದ್ರಾವಿಡ್​ಗೆ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದರೆ ಅದು ಅವರಿಗೆ ಸಲ್ಲುವ ಸೂಕ್ತ ಗೌರವವಾಗುತ್ತದೆ. ಈ ಗೌರವಕ್ಕೆ ಅವರು ಸಂಪೂರ್ಣವಾಗಿ ಅರ್ಹರಾಗಿದ್ದಾರೆ ಎಂದು ಬರೆದುಕೊಂಡಿದ್ದರು.

ದ್ರಾವಿಡ್​ ಆಟಗಾರರಾಗಿ ಮತ್ತು ತಂಡದ ನಾಯಕರಾಗಿ ವಿದೇಶಗಳಲ್ಲಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್​ನಲ್ಲಿ ಗೆಲ್ಲುವುದು ಅಸಾಧ್ಯ ಎಂಬ ಕಾಲದಲ್ಲಿ ಅವರು ಭಾರತಕ್ಕೆ ಸರಣಿ ಗೆಲುವನ್ನು ತಂದಿದ್ದಾರೆ. ಇಂಗ್ಲೆಂಡ್​ನಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದಿರುವ ಕೇವಲ ಮೂರು ಭಾರತೀಯ ನಾಯಕರ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ. ಈ ಹಿಂದೆ, ಅವರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳನ್ನು ಹೊರತಂದಿದ್ದಾರೆ. ಬಳಿಕ ಭಾರತೀಯ ಹಿರಿಯರ ಕ್ರಿಕೆಟ್ ತಂಡದ ಕೋಚ್ ಆಗಿ ಉತ್ತಮ ನಿರ್ವಹಣೆ ನೀಡಿದ್ದಾರೆ ಎಂದು ಗವಾಸ್ಕರ್​ ಹೇಳಿದ್ದರು.

Exit mobile version