Site icon Vistara News

Viral Video: ಅಮೆರಿಕದ ಹಾದಿ ಬೀದಿಯಲ್ಲಿ ‘ಮುಕ್ಕಾಲ ಮುಕ್ಕಾಬುಲ್ಲಾ’ ಹಾಡಿಗೆ​ ಬಿಂದಾಸ್​ ಸ್ಟೆಪ್ಸ್ ಹಾಕಿದ ಜಡೇಜಾ

Ravindra Jadeja grooves to local music during vacation

ವಾಷಿಂಗ್ಟನ್​: ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ(Ravindra Jadeja) ರಜೆಯ ಮೋಜಿನಲ್ಲಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಮತ್ತು ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಕುಟುಂಬ ಸಮೇತರಾಗಿ ಅಮೆರಿಕ(United States) ಪ್ರವಾಸ ಕೈಗೊಂಡು ಇಲ್ಲಿನ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ.

ಮುಕ್ಕಾಬುಲ್ಲಾ ಹಾಡಿಗೆ ಸಖತ್​ ಸ್ಟೆಪ್ಸ್

ಸತತ ಕ್ರಿಕೆಟ್​ ಆಡಿ ಬಳಲಿರುವ ಜಡೇಜಾ ಏಷ್ಯ ಕಪ್​ಗೂ ಮುನ್ನ ರಿಲ್ಯಾಕ್ಸ್​ ಆಗಲು ಬಿಡುವು ಮಾಡಿಕೊಂಡು ಅಮೆರಿಕದಲ್ಲಿ ಸುತ್ತಾಡುತ್ತಿದ್ದಾರೆ. ಇದೇ ವೇಳೆ ಅವರು ಇಲ್ಲಿನ ಸ್ಟ್ರೀಟ್​ ಒಂದರಲ್ಲಿ ನಡೆಯುತ್ತಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಡ್ಯಾನ್ಸ್‌ ಪ್ರಿಯರನ್ನು ಹೆಚ್ಚೆದ್ದು ಕುಣಿಸುವಂತೆ ಮಾಡುವ ಪ್ರಭುದೇವ್​ ನಟನೆಯ ಸಿನೆಮಾದ ಮುಕ್ಕಾಲ ಮುಕ್ಕಾಬುಲ್ಲಾ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ಮೆಚ್ಚುಗೆ

ರವೀಂದ್ರ ಜಡೇಜಾ ಅವರ ಡ್ಯಾನ್ಸ್​ ವಿಡಿಯೊವನ್ನು ಐಪಿಎಲ್​ನ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(chennai super kings)​ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದು. ‘ನಿಮ್ಮ ಬೆಂಕಿ ಡ್ಯಾನ್ಸ್​ಗೆ ದೊಡ್ಡ ಸಲಾಂ, ಬೆಂಕಿಯನ್ನು ನೀಡಿದರೆ ಅದನ್ನು ಜ್ವಾಲೆಯಾಗಿ ಪರಿವರ್ತಿಸಿ’ ಎಂದು ಬರೆದುಕೊಂಡಿದೆ. 16ನೇ ಆವೃತ್ತಿ ಐಪಿಎಲ್​ನಲ್ಲಿ ಚೆನ್ನೈ ಚಾಂಪಿಯನ್​ ಆಗಲು ಜಡೇಜಾ ಅವರೆ ಪ್ರಮುಖ ಕಾರಣ.

ಚೆನ್ನೈಗೆ ಸ್ಮರಣೀಯ ಗೆಲುವು ತಂದು ಕೊಟ್ಟ ಜಡೇಜಾ

ಕ್ರಿಕೆಟ್​ ಅಭಿಮಾನಿಗಳನ್ನು ತುದಿಗಾಲಿನಲ್ಲಿ ಉಸಿರು ಬಿಗಿಹಿಡಿದು ನಿಲ್ಲುವಂತೆ ಮಾಡಿದ್ದ 16ನೇ ಆವೃತ್ತಿ ಐಪಿಎಲ್​ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಗುಜರಾತ್​ ವಿರುದ್ಧ ಗೆದ್ದು 5ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿತು. ಈ ಪಂದ್ಯದಲ್ಲಿ ಅಸಾಮಾನ್ಯ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟವರು ರವೀಂದ್ರ ಜಡೇಜಾ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಅತ್ಯಂತ ರೋಚಕ ಪಂದ್ಯದ ಅಂತಿಮ ಓವರ್​ ಮೋಹಿತ್​ ಶರ್ಮ ಎಸೆದರು. ಈ ಓವರಿನ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ ಮೂರು ರನ್‌ ಬಿಟ್ಟುಕೊಟ್ಟು ಚೆನ್ನೈ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು. ಇದರಿಂದಾಗಿ ಪಾಂಡ್ಯ ಪಡೆಯ ಗೆಲ್ಲುವ ಆಸೆ ಬಲವಾಯಿತು. ಆದರೆ ಗುಜರಾತ್‌ನ ಈ ಕನಸನ್ನು ರವೀಂದ್ರ ಜಡೇಜಾ ನುಚ್ಚುನೂರು ಮಾಡಿದರು. ಅಂತಿಮ ಎರಡು ಎಸೆತದಲ್ಲಿ 10 ರನ್‌ ಗಳಿಸಬೇಕಿತ್ತು, ಈ ಸವಾಲನ್ನು ಜಡೇಜಾ ಸಿಕ್ಸರ್‌ ಮತ್ತು ಬೌಂಡರಿ ಸಿಡಿಸಿ ಚೆನ್ನೈ ತಂಡದ ಗೆಲುವನ್ನು ಸಾರಿದ್ದರು.

ಇದನ್ನೂ ಓದಿ Viral Video: ರಕ್ಕಸ ಗಾತ್ರದ ಅಲೆಗಳ ಮಧ್ಯೆ ಈಜಿ ದಡ ಸೇರಿದ ಮಹಿಳೆ; ದೂರ ತಿಳಿದರೆ ಅಚ್ಚರಿ ಖಚಿತ!

ಏಷ್ಯಾಕಪ್​ಗೆ ಸಿದ್ಧತೆ

ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯುವ ಹೈಬ್ರಿಡ್​ ಮಾದರಿಯ ಏಷ್ಯಾಕಪ್​ಗೆ(Asia Cup 2023) ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿವೆ. ಈ ಮಹತ್ವದ ಟೂರ್ನಿ ಆಗಸ್ಟ್​ 31ರಿಂದ ಆರಂಭವಾಗಲಿದೆ. ಟೂರ್ನಿಯ ವೇಳಾಪಟ್ಟಿ ಮತ್ತು ತಾಣಗಳು ಈಗಾಗಲೇ ಪ್ರಕಟಗೊಂಡಿದೆ. ವಿಶ್ರಾಂತಿಯಲ್ಲಿರುವ ವಿರಾಟ್​ ಕೊಹ್ಲಿ ನಾಯಕ ರೋಹಿತ್​ ಶರ್ಮ ಮತ್ತು ರವೀಂದ್ರ ಜಡೇಜಾ ಮುಂದಿನ ವಾರ ಬೆಂಗಳೂರಿನ ಎನ್​ಸಿಎಗೆ ಆಗಮಿಸಿ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ವಿಶ್ವಕಪ್​ ದೃಷ್ಟಿಯಲ್ಲಿ ಈ ಟೂರ್ನಿ ಭಾರತಕ್ಕೆ ಮಹತ್ವದ್ದಾಗಿದೆ.

Exit mobile version