Site icon Vistara News

IPL 2023: ಚೆನ್ನೈ ತಂಡದ ಅಭಿಮಾನಿಗಳ ಬಗ್ಗೆ ಜಡೇಜಾ ನೀಡಿದ ಹೇಳಿಕೆಯೊಂದು ಭಾರಿ ಸಂಚಲನ ಸೃಷ್ಟಿಸಿದೆ

jadeja and dhoni

ಚೆನ್ನೈ: ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಆಟಗಾರ ರವೀಂದ್ರ ಜಡೇಜಾ ಅವರು ತನ್ನದೇ ತಂಡದ ಅಭಿಮಾನಿಗಳ ವಿರುದ್ಧ ನೀಡಿದ ಹೇಳಿಕೆಯೊಂದು ಇದೀಗ ಭಾರಿ ಸಂಚಲನ ಮೂಡಿಸಿದೆ. ತಾನು ಬ್ಯಾಟಿಂಗ್​ ನಡೆಸಲು ಬಂದರೆ ಅಭಿಮಾನಿಗಳು ಬೇಗನೆ ಔಟಾಗುವಂತೆ ಹಿಡಿ ಶಾಪ ಹಾಕುತ್ತಾರೆ ಎಂದು ಹೇಳಿದ್ದಾರೆ.

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಚೆನ್ನೈ ಸೂಪರ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 167 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ ಕಳೆದುಕೊಂಡು 140 ರನ್​ ಗಳಿಸಿ ಶರಣಾಯಿತು.

ಈ ಪಂದ್ಯದಲ್ಲಿ ಚೆನ್ನೈ ಪರ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಜಡೇಜಾ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾರದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಡೇಜಾ ಅವರು ತಾನು ಬ್ಯಾಟಿಂಗ್​ ನಡೆಸಲು ಕ್ರೀಸ್​ಗೆ ಇಳಿಯುವ ವೇಳೆ ಅಭಿಮಾನಿಗಳು ಔಟಾಗುವಂತೆ ಪ್ರಾರ್ಥಿಸುತ್ತಾರೆ ಎಂದು ಹೇಳಿದರು. ಜಡೇಜಾ ಅವರು ಹೀಗೆ ಹೇಳಲು ಪ್ರಮುಖ ಕಾರಣವೆಂದರೆ ಅಭಿಮಾನಿಗಳಿಗೆ ಧೋನಿ ಬ್ಯಾಟಿಂಗ್​ ಕಣ್ತುಂಬಿಕೊಳ್ಳುವ ಬಯಕೆ.

ಹೌದು ಮಹೇಂದ್ರ ಸಿಂಗ್​ ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ನಿವೃತ್ತಿ ಹೇಳಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದ ಕ್ಷಣದಿಂದ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಬ್ಯಾಟಿಂಗ್​ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯ ಇದೆ ಎಂದರೆ ಸಾಕು ತಮ್ಮ ನೆಚ್ಚಿನ ತಂಡವನ್ನು ಬಿಟ್ಟು ಧೋನಿ ತಂಡಕ್ಕೆ ಬೆಂಬಲ ಸೂಚಿಸುತ್ತಿರುವ ಹಲವಾರು ನಿದರ್ಶನಗಳನ್ನು ಈಗಾಗಲೇ ನೋಡಿದ್ದೇವೆ. ಅದರಲ್ಲೂ ಧೋನಿ ಅವರು ಮೈದಾನಕ್ಕೆ ಬ್ಯಾಟ್​ ಹಿಡಿದು ಬರುವ ಕ್ಷಣವಂತು ಇಡೀ ಸ್ಟೇಡಿಯಂನ್ಲಲಿ ಧೋನಿ ಹೆಸರು ರಾರಾಜಿಸುತ್ತಿರುತ್ತದೆ.

ಇದನ್ನೂ ಓದಿ IPL 2023: ಟಾಸ್​ ಗೆದ್ದ ರಾಜಸ್ಥಾನ್​; ಕೆಕೆಆರ್​ಗೆ ಬ್ಯಾಟಿಂಗ್​ ಆಹ್ವಾನ

ಇದೇ ವಿಚಾರವಾಗಿ ರವೀಂದ್ರ ಜಡೇಜಾ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ನನ್ನ ಬ್ಯಾಟಿಂಗ್​ ಕ್ರಮಾಂಕ ಆದ ಬಳಿಕ ಧೋನಿ ಅವರು ಕ್ರೀಸ್​ಗೆ ಇಳಿಯುತ್ತಾರೆ. ಧೋನಿ ಅವರು ನನಗೆ ಹೆಚ್ಚು ಎಸೆತಗಳನ್ನು ಆಡುವಂತೆ ಸೂಚಿಸುತ್ತಾರೆ. ಆದ್ದರಿಂದ ಅವರಿಗೆ ಬ್ಯಾಟಿಂಗ್​ ನಡೆಸಲು ಹೆಚ್ಚಿನ ಎಸೆತಗಳು ಲಭ್ಯವಾಗುದಿಲ್ಲ. ಒಂದೊಮ್ಮೆ ನಾನು ಔಟಾದರೆ ಆಗ ಧೋನಿ ಅವರು ತಂಡಕ್ಕೆ ಆಸರೆಯಾಗಿ ಹೆಚ್ಚಿನ ಎಸೆತಗಳಿಗೆ ಬ್ಯಾಟ್​ ಬೀಸುತ್ತಾರೆ. ಆಗ ಅವರ ಅಭಿಮಾನಿಗಳಿಗೆ ನೆಚ್ಚಿನ ಆಟಗಾರರನ ಬ್ಯಾಟಿಂಗ್​ ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಈ ಒಂದೇ ಕಾರಣಕ್ಕೆ ಅಭಿಮಾನಿಗಳು ತಾನು ಕ್ರೀಸ್​ಗೆ ಇಳಿಯುವಾಗ ಔಟಾಗುವಂತೆ ಪ್ರಾರ್ಥಿಸುತ್ತಾರೆ ಎಂದು ಹೇಳಿದ್ದಾರೆ. ಆದರೆ ಜಡೇಜಾ ಅವರ ಈ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಜಡೇಜಾ ಅವರು ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸಿದ ನೋವಿನಿಂದ ಹೀಗೆ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದಾರೆ.

Exit mobile version