Site icon Vistara News

World Racing Championship : ವಿಶ್ವ ಮಟ್ಟದ ಕಾರ್​​ ರೇಸ್​ನಲ್ಲಿ ರನ್ನರ್​ ಅಪ್​ ಸ್ಥಾನ ಪಡೆದ ಕನ್ನಡತಿ ಪ್ರಗತಿ

World Racing Championship

#image_title

ಬೆಂಗಳೂರು: ಇಟಲಿಯಲ್ಲಿ ನಡೆದ ಎಫ್​ಐಎ ರ್ಯಾಲಿ ಸ್ಟಾರ್​ ರೇಸಿಂಗ್​ನ ಮಹಿಳಾ ವಿಭಾಗದಲ್ಲಿ ಕರ್ನಾಟಕದವರಾದ ಪ್ರಗತಿ ಗೌಡ ರನ್ನರ್​ ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ವರ್ಲ್ಡ್​ ರ್ಯಾಲಿ ಚಾಂಪಿಯನ್​ಷಿಪ್​ಗೆ ರಿಸರ್ವ್​ ಡ್ರೈವರ್ ಆಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು ಮೂಲದ ಪ್ರಗತಿ ಗೌಡ ಅವರು ಈ ಸಾಧನೆ ಮಾಡಿರುವ ಭಾರತದ ಮೊಟ್ಟ ಮೊದಲ ಮಹಿಳಾ ರೇಸ್​ ಡ್ರೈವರ್​. ಕೇವಲ ಎರಡು ವರ್ಷದ ಹಿಂದೆ ರೇಸಿಂಗ್ ಕ್ಷೇತ್ರಕ್ಕೆ ಧುಮುಕಿದ ಅವರು ವಿಶ್ವ ಮಟ್ಟದಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಅಸಾಮಾನ್ಯ ಸಾಧನೆ ಮಾಡಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.

ಮೇ 4 ರಂದು ಇಟಲಿಯ ಮ್ಯಾಗಿಯೋರಾ ಆಫ್ ರೋಡ್ ಅರೆನಾದಲ್ಲಿ ನಡೆದ ಎಫ್ಐಎ ರ್ಯಾಲಿ ಸ್ಟಾರ್ ರೇಸ್​ನ ಫೈನಲ್​ನಲ್ಲಿ ಸ್ಪರ್ಧಿಸಿದ್ದ ಪ್ರಗತಿ ಗೌಡ ಅವರು ಎರಡನೇ ಸ್ಥಾನ ಪಡೆದುಕೊಂಡರು. ಪೆರುವಿನ ಜೋಸ್ ಅಬೆಲ್ರಾಡೊ ಈ ರೇಸ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದರು.

ಯಾರಿವರು ಪ್ರಗತಿ ಗೌಡ?

ಕ್ರಾಸ್​ ಕಾರ್ಟ್​​​​ ರೇಸರ್​ ಆಗಿರುವ ಪ್ರಗತಿ ಗೌಡ 2022ರ ಅಕ್ಟೋಬರ್​ನಲ್ಲಿ ಚೆನ್ನೈನಲ್ಲಿ ನಡೆದ ರ‍್ಯಾಲಿ ಸ್ಟಾರ್​ ಪ್ರೋಗ್ರಾಮ್​ನ ಏಷ್ಯಾ ಪೆಸಿಫಿಕ್ ರೇಸ್​​ನ ಫೈನಲ್​ನ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಅವರು ಇಟಲಿಯಲ್ಲಿ ಮೇ ಆರಂಭದ ವಾರದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್​ಪಿಷ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿ ಅವರು ಏಳು ಖಂಡಗಳ ತಲಾ ಒಬ್ಬರು ಸ್ಪರ್ಧಿಗಳೊಂದಿಗೆ ಟ್ರೋಫಿಗಾಗಿ ಸೆಣಸಲಿದ್ದಾರೆ. ಇದೀಗ ಅವರು ಸ್ಪರ್ಧೆಗಾಗಿ ಅಂತಿಮ ಹಂತದ ಸಿದ್ಧತೆ ನಡೆಸಿಕೊಳ್ಳುತ್ತಿದ್ದು, ಮುಂದಿನ ವಾರ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿಶ್ವ ಮಟ್ಟದ ಚಾಂಪಿಯನ್​ಷಿಪ್​ನಲ್ಲಿ ಗೆದ್ದರೆ ಎಫ್ಐಎ ಪ್ರಾಯೋಜಕತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೇಸ್​ನಲ್ಲಿ ಪಾಲ್ಗೊಳ್ಳುವ ಎಲ್ಲ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ಇಂಥದ್ದೊಂದು ಸಾಧನೆಯನ್ನು ಭಾರತದಲ್ಲಿ ಇದುವರೆಗೆ ಯಾರೂ ಮಾಡಿಲ್ಲ ಎಂಬುದೇ ವಿಶೇಷ.

ಚೆನ್ನೈನ ಮದ್ರಾಸ್​ ಮೋಟಾರ್​ ರ್ಯಾಲಿ ಟ್ರ್ಯಾಕ್​ನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಗತಿ ಗೌಡ ಅವರು 26 ಸ್ಪರ್ಧಿಗಳೊಂದಿಗೆ ಸೆಣಸಾಡಿ ಗೆದ್ದು ವಿಶ್ವ ಚಾಂಪಿಯನ್​ಷಿಪ್​ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಸಾಧನೆ ಕುರಿತು ವಿಸ್ತಾರನ್ಯೂಸ್​ ನೊಂದಿಗೆ ಮಾತನಾಡಿದ ಅವರು, ಇಟಲಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಗೆಲ್ಲುವುದು ನಾನೇ. ಗೆದ್ದೇ ಗೆಲ್ಲಬೇಕು ಎಂಬ ಗುರಿಯೊಂದಿಗೆ ಪ್ರಯಾಣ ಬೆಳೆಸುತ್ತಿದ್ದೇನೆ ಎಂದು ಮಹತ್ವಾಕಾಂಕ್ಷೆ ಪ್ರದರ್ಶಿಸಿದ್ದಾರೆ,

ಅವಕಾಶದ ಬಾಗಿಲು ತೆರೆಯಿತು

ಬೆಂಗಳೂರಿನ ಜಯನಗರದ ಜೈನ್​ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಪ್ರಗತಿ ಗೌಡ ರೇಸಿಂಗ್​ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದು ತೀರಾ ಇತ್ತೀಚೆಗೆ. 2019ರಲ್ಲಿ ಅವರು ರ‍್ಯಾಲಿ ಕಾರುಗಳ ಮೂಲಕ ಕರಾಮತ್ತು ತೋರಿಸಲು ಆರಂಭಿಸಿದ್ದರು. 2020ರಲ್ಲಿ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಡೆದ ನ್ಯಾಷನಲ್​ ರ‍್ಯಾಲಿ ಚಾಂಪಿಯನ್​ಷಿಪ್​ (ಐಎನ್​ಆರ್​ಸಿ) ಮೂಲಕ ಪದಾರ್ಪಣೆ ಮಾಡಿ ಅಲ್ಲಿ ಅವರು ಅಗ್ರ 10ರೊಳಗೆ ಸ್ಥಾನ ಪಡೆದರು. ಈ ವೇಳೆ ಅವರು ಮೋಟೋ ಸ್ಪೋರ್ಟ್ಸ್​ ಕ್ಷೇತ್ರದ ಗಣ್ಯರ ಗಮನ ಸೆಳೆದಿದ್ದರು. ರೇಸ್​ ಪಂಡಿತರು ಈ ಹುಡುಗಿಗೆ ಭವಿಷ್ಯವಿದೆ ಎಂದು ನುಡಿದಿದ್ದರು. ಹಿಂದಿರುಗಿ ನೋಡದ ಪ್ರಗತಿ ಗೌಡ ಹಲವು ರೇಸ್​ಗಳನ್ನು ಗೆದ್ದು ಇದೀಗ ವಿಶ್ವ ಮಟ್ಟದ ಸ್ಪರ್ಧೆಗೆ ಅಣಿಯಾಗಿದ್ದಾರೆ.

ನಾನೀಗ ಸ್ಪರ್ಧೆ ಮಾಡಲ ಹೊರಟಿರುವ ಕ್ರಾಸ್ ಕಾರ್ಟ್ ರೇಸ್ ಮಾಮೂಲಿ ಕಾರು ರೇಸ್​ಗಿಂತ ಭಿನ್ನ. ಇಲ್ಲಿ ರಿಯರ್​ ವೀಲ್ ಡ್ರೈವ್ ಇರುತ್ತದೆ. ಫ್ರಂಟ್​ ವೀಲ್​ ಡ್ರೈವ್​ನಿಂದ ಅದಕ್ಕೆ ಹೊಂದಿಕೊಳ್ಳುವುದು ಸವಾಲಿನ ವಿಷಯ. ನನ್ನ ಕೌಶಲವನ್ನು ಬಳಸಿಕೊಂಡು ಗೆಲ್ಲುತ್ತೇನೆ ಎಂದಿದ್ದಾರೆ ಪ್ರಗತಿ ಗೌಡ. ಸವಾಲು ಸ್ವೀಕರಿಸುವುದು ಎಂದರೆ ನನಗಿಷ್ಟ. ಅದುವೇ ನನ್ನ ಗೆಲುವಿನ ಸೂತ್ರ ಎಂದೂ ಹೇಳುತ್ತಾರೆ ಅವರು.

ರೇಸ್​ ಕ್ಷೇತ್ರದ ಪ್ರವೇಶವೇ ಅಚ್ಚರಿ

ಪ್ರಗತಿ ಗೌಡ ಅವರು ರೇಸ್​ ಕ್ಷೇತ್ರಕ್ಕೆ ಪ್ರವೇಶ ಪಡೆದಿರುವುದೇ ಅಚ್ಚರಿಯ ವಿಚಾರ. ಸಾಮಾನ್ಯವಾಗಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರು ಬಾಲ್ಯದಲ್ಲಿಯೇ ಅಭ್ಯಾಸ ಆರಂಭಿಸುತ್ತಾರೆ. ಆದರೆ, ಎಲ್ಲೂ ಆ ರೀತಿ ಯೋಚಿಸಿರಲಿಲ್ಲ ಹಾಗೂ ಸಿದ್ಧತೆ ಮಾಡಿಕೊಂಡಿರಲಿಲ್ಲ ಅವರು. ತಮಗೆ ವಾಹನ ಚಾಲನಾ ನೈಪುಣ್ಯ ರಕ್ತಗತವಾದದ್ದು ಎನ್ನುತ್ತಾರೆ ರೇಸರ್​ ಪ್ರಗತಿ. ಆದಾಯ ತೆರಿಗೆ ಇಲಾಖೆಯಲ್ಲಿ ಚಾಲಕ ನೌಕರಿ ಮಾಡುತ್ತಿರುವ ನನ್ನ ತಂದೆ ವಾಹನ ಚಲಾಯಿಸುವುದನ್ನು ನೋಡಿ ಅದರ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ಯಾರಿಂದಲೂ ಡ್ರೈವಿಂಗ್​ ಕಲಿಯಲಿಲ್ಲ. ನೋಡಿ ಕಲಿತದ್ದನ್ನು ಒಂದು ದಿನ ಅಣ್ಣನಿಗೆ ಮಾಡಿ ತೋರಿಸಿದೆ. ನಾನು ಕಾರನ್ನು ಓಡಿಸುವ ರೀತಿಗೆ ಅಣ್ಣನೇ ಬೆಚ್ಚಿ ಬಿದ್ದ. ನೀನು ಒಳ್ಳೆಯ ಡ್ರೈವರ್​ ಆಗುತ್ತೀಯಾ ಎಂದ. ಅವನ ಮಾತನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಕಾರು ಓಡಿಸಲು ಆರಂಭಿಸಿದೆ. ರೇಸ್​ಗಳಲ್ಲಿ ಪಾಲ್ಗೊಂಡೆ. ಹಲವು ಟ್ರೋಫಿಗಳನ್ನು ಗೆದ್ದೆ. ದುರದೃಷ್ಟವೆಂದರೆ ಇಂದು ಆತ ನನ್ನೊಂದಿಗಿಲ್ಲ. ಬೈಕ್​ ಅಪಘಾತದಲ್ಲಿಯೇ ಮೃತಪಟ್ಟಿದ್ದಾನೆ. ನಾನು ಗೆಲ್ಲುತ್ತಿರುವುದು ಅಣ್ಣದ ಆಶೀರ್ವಾದದಿಂದ. ಅವನಿಗಾಗಿಯೇ ಚಾಂಪಿಯನ್ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪ್ರಗತಿ.

ಅಣ್ಣ ತಂಗಿ ಇಬ್ಬರಿಗೂ ಬೈಕ್​ ರೈಡಿಂಗ್​ ಕ್ರೇಝ್​. ಬೈಕ್​ನಲ್ಲಿ ಬಹುತೇಕ ದೇಶವನ್ನೇ ಸುತ್ತಿದ್ದಾರೆ. ಅಣ್ಣನೊಂದಿಗೆ ಬೈಕ್​ ಓಡಿಸುತ್ತಾ ಪ್ರಗತಿ ಕೂಡ ಒಳ್ಳೆಯ ರೈಡರ್​ ಎನಿಸಿಕೊಂಡಿದ್ದಾರೆ. ಅದೇ ವಿಶ್ವಾಸವನ್ನು ಕಾರು ಓಡಿಸುವಾಗಲು ಪ್ರದರ್ಶಿಸುತ್ತಿದ್ದಾರೆ. ಅಣ್ಣನೊಂದಿಗಿನ ಬೈಕ್​ ಮತ್ತು ಕಾರಿನ ಸವಾರಿ ಅನುಭವವೇ ನನ್ನ ರೇಸಿಂಗ್​ ಗೆಲುವಿಗೆ ಕಾರಣ ಎನ್ನುತ್ತಾರೆ ಪ್ರಗತಿ ಗೌಡ.

ಮೂಲ ಸೌಕರ್ಯಗಳ ಕೊರತೆ

ಭಾರತದಲ್ಲಿ ರೇಸಿಂಗ್ ಕ್ಷೇತ್ರಕ್ಕೆ ಪ್ರವೇಶ ಪಡೆಯುವುದು ಅಷ್ಟೊಂದು ಸುಲಭವಲ್ಲ. ನಮ್ಮಲ್ಲಿ ಉತ್ತಮ ಟ್ರ್ಯಾಕ್​ಗಳಿಲ್ಲ. ಅದಕ್ಕೆ ಬೇಕಾದ ಮೂಲ ಸೌಕರ್ಯಗಳು ಕೂಡ ಇಲ್ಲ. ಎಲ್ಲಿ ಅವಕಾಶ ಸಿಗುತ್ತಿತ್ತೊ ಅಲ್ಲೆಲ್ಲ ಅಭ್ಯಾಸ ಮಾಡುತ್ತಿದ್ದೆ. ಇಂಥದ್ದೇ ಕಡೆ ಅಂತಿಲ್ಲ. ರೇಸ್​ ನಡೆಯುವ ಜಾಗಕ್ಕೆ ಹೋಗಿ ಸ್ಪರ್ಧೆಗೆ ಮೊದಲು ಕಾರು ಓಡಿಸಿದ್ದೇ ನನ್ನ ಪಾಲಿನ ಪ್ರಾಕ್ಟೀಸ್​. ಆದರೆ, ನನ್ನ ಕೌಶಲವನ್ನು ಸಂಪೂರ್ಣವಾಗಿ ಬಳಸಿಕೊಂಡು ಗೆಲ್ಲುತ್ತಿದ್ದೆ ಎಂದು ಪ್ರಗತಿ ಗೌಡ ಹೇಳುತ್ತಾರೆ.

ಸುಳ್ಳು ಹೇಳಿ ರೇಸ್​ಗೆ ಹೋಗುತ್ತಿದ್ದ ಪ್ರಗತಿ

ಪ್ರಗತಿಯ ಪೋಷಕರು ಆರಂಭದಲ್ಲಿ ರೇಸ್​ ಕ್ಷೇತ್ರದ ಆಯ್ಕೆಯ ಬಗ್ಗೆ ಅಸಮಾಧಾನ ಹೊಂದಿದ್ದರಂತೆ. ಅದು ಸುರಕ್ಷಿತವಲ್ಲ, ಪ್ರಾಣಾಪಾಯವಾಗುತ್ತದೆ ಎಂಬುದು ಅವರ ಕಲ್ಪನೆಯಾಗಿತ್ತು. ಹೀಗಾಗಿ ಮನೆಯಲ್ಲಿ ಸುಳ್ಳು ಹೇಳಿ ರೇಸ್​​ಗಳಿಗೆ ಹೋಗುತ್ತಿದ್ದರು. ಕಪ್​ ಗೆದ್ದರೆ ಅದನ್ನು ಗೆಳೆಯರ ಮನೆಯಲ್ಲಿ ಇಡುತ್ತಿದ್ದರು. ತಂದೆಯ ಸಹೋದ್ಯೋಗಿಯೊಬ್ಬರು ಪ್ರಗತಿ ರೇಸ್​ನಲ್ಲಿ ಚಾಂಪಿಯನ್​ ಆಗಿರುವ ಚಿತ್ರವನ್ನು ಪತ್ರಿಕೆಯಲ್ಲಿ ನೋಡಿ, ನಿಮ್ಮ ಮಗಳು ಪ್ರತಿಭಾವಂತೆ ಎಂದಿದ್ದರು. ಆದರೂ ತಂದೆಗೆ ಭಯ ಹೋಗಿರಲಿಲ್ಲ. ಕೊನೆಗೇ ರೇಸ್​ ನಡೆಯುವ ಜಾಗಕ್ಕೆ ಪೋಷಕರನ್ನು ಕರೆದುಕೊಂಡು ಹೋಗಿ ಚಾಲಕರ ಸುರಕ್ಷತಾ ಸಾಧನಗಳ ಬಗ್ಗೆ ವಿವರಿಸಿದ್ದರು ಪ್ರಗತಿ ಗೌಡ. ಅದನ್ನು ನೋಡಿದ ಬಳಿಕ ಅವರು ಸುಮ್ಮನಾಗಿದ್ದರು. ಇದೀಗ ಅವರು ಮಗಳ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ.

ಇದನ್ನೂ ಓದಿ : IPL 2023 : ಸೌದಿ ಅರೇಬಿಯಾದಲ್ಲಿ ನಡೆಯಲಿದೆ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​; ಭಾರತಕ್ಕೆ ಬಂದ ನಿಯೋಗ

ಪ್ರಗತಿ ಗೌಡ ಅವರ ಸಾಧನೆಗಳು

2019ರಲ್ಲಿ ಇಂಡಿಯನ್​ ನ್ಯಾಷನಲ್​ ಜಿಮ್ಖಾನಾ ಚಾಂಪಿಯನ್​ ಲೇಡಿಸ್​ ಕ್ಲಾಸ್​ನಲ್ಲಿ ಗೆದ್ದ ಪ್ರಗತಿ ಗೌಡ, ಅಹುರಾ ಟ್ಯಾಲೆಂಟ್​ ಹಂಟ್​ನಲ್ಲಿ ಮೊದಲ ರನ್ನರ್​ ಅಪ್​ ಸ್ಥಾನ ಪಡೆದುಕೊಂಡಿದ್ದರು. 2020ರಲ್ಲಿ ಟರ್ಮಾಕ್​ ಆಟೋಕ್ರಾಸ್​ ಕ್ಲಬ್​ ಸೀರಿಸ್​ನ ಲೇಡಿಸ್​ ಕ್ಲಾಸ್​ನಲ್ಲಿ ಚಾಂಪಿಯನ್​ ಮತ್ತು ರ‍್ಯಾಲಿ ಆಫ್​ ಅರುಣಾಚಲ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದರು . 2011ರಲ್ಲಿ ಯುನೈಟೆಡ್​ ಆಫ್​ರೋಡ್​ ಆಟೋಕ್ರಾಸ್​ನಲ್ಲಿ ​ ಓವರ್​ಆಲ್​ ವಿನ್ನರ್ ಎನಿಸಿಕೊಂಡಿದ್ದ ಅವರು​, ಆಟೋಕ್ರಾಸ್​ ಸೀರಿಸ್​ ಲೇಡಿಸ್​ ಕ್ಲಾಸ್​ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. 2022ರಲ್ಲಿ ಜೂನಿಯರ್ ಇಂಡಿಯನ್​ ನ್ಯಾಷನಲ್​ ರ‍್ಯಾಲಿಯಲ್ಲಿ ಚಾಂಪಿಯನ್​, ಎಫ್​ಐಎ ಮೋಟೋಸ್ಪೋರ್ಟ್ಸ್​​ ಗೇಮ್ಸ್​ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗಿ, ಫಾರ್ಮುಲಾ ವಿಮೆನ್​ನಲ್ಲಿ ಫೈನಲಿಸ್ಟ್​, ರೌಂಡ್​3 ಸೌತ್​ ಇಂಡಿಯಾ ರ‍್ಯಾಲಿಯಲ್ಲಿ ಚಾಂಪಿಯನ್​, ರ‍್ಯಾಲಿ ಕೊಯಮತ್ತೂರಿನಲ್ಲಿ ಎರಡನೇ ರನ್ನರ್​ ಅಪ್​ ಆಗಿದ್ದಾರೆ. 2023ರಲ್ಲಿ ರೌಂಡ್​1 ಸೌತ್​ ಇಂಡಿಯಾ ರ‍್ಯಾಲಿಯಲ್ಲಿ ಚಾಂಪಿಯನ್​ ಆಗಿದ್ದಾರೆ.

ಪ್ರಗತಿ ಗೌಡ ಅವರಿಗೆ ಇದೀಗ ಎಮ್​ಆರ್​ಎಫ್​ ಟೈರ್​ ಕಂಪನಿ ಹಾಗೂ ಸಿಡ್ವಿನ್​ ಸಂಸ್ಥೆ ಪ್ರಾಯೋಜಕತ್ವ ನೀಡುತ್ತಿದೆ. ಅದರ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Exit mobile version