ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ನಂದಿನಿ ಲೋಗೋ(KMF Nandini Logo) ಇರುವ ಜೆರ್ಸಿಯನ್ನು ‘ಕ್ರಿಕೆಟ್ ಸ್ಕಾಟ್ಲೆಂಡ್’ ಅನಾವರಣಗೊಳಿಸಿತ್ತು. ಇದೀಗ ಐರ್ಲೆಂಡ್(Ireland) ತಂಡ ಕೂಡ ನಂದಿನಿ ಲೋಗೋ ಇರುವ ಜೆರ್ಸಿಯನ್ನು ಪ್ರಕಟಿಸಿದೆ. ಇದು ಮಾತ್ರವಲ್ಲದೆ ಕ್ರಿಕೆಟ್ ಐರ್ಲೆಂಡ್ ತನ್ನ ಅಧಿಕೃತ ವೆಬ್ಸೈಟ್ನ ಫೋಟೊದಲ್ಲಿಯೂ ನಂದಿನಿ ಲೋಗೋ ಇರುವ ಜೆರ್ಸಿಯ ದೊಡ್ಡ ಫೋಟೊವನ್ನು ಹಾಕಿ ‘ವೆಲ್ಕಮ್ ನಂದಿನಿ'(WELCOME NANDINI) ಎಂದು ಬರೆದುಕೊಂಡಿದೆ. ಸೋಮವಾರ ಕ್ರಿಕೆಟ್ ಐರ್ಲೆಂಡ್ ಈ ಜೆರ್ಸಿಯನ್ನು ಅನಾವರಣ ಮಾಡಿತು.
ಜೆರ್ಸಿ ಬಿಡುಗಡೆಯ ಬಳಿಕ ಮಾತನಾಡಿದ, ಕ್ರಿಕೆಟ್ ಐರ್ಲೆಂಡ್ನ ಮುಖ್ಯ ಹಣಕಾಸು ಅಧಿಕಾರಿ ಆ್ಯಂಡ್ರ್ಯೂ ಮೇ,” ಕರ್ನಾಟಕ ಹಾಲು ಒಕ್ಕೂಟವನ್ನು ಹೊಸ ಪಾಲುದಾರರಾಗಿ ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. ಟಿ–20 ವಿಶ್ವಕಪ್ನಲ್ಲಿ ಐರ್ಲೆಂಡ್ ಪುರುಷರ ತಂಡದ ಅಧಿಕೃತ ಪ್ರಾಯೋಜಕರಾಗಿ ನಂದಿನಿಯನ್ನು ಘೋಷಿಸಲು ಸಂತಸವಾಗುತ್ತಿದೆ” ಎಂದು ಹೇಳಿದರು.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ನಲ್ಲಿ ‘ನಂದಿನಿ’ ಲಾಂಛನ; ಹರ್ಷ ವ್ಯಕ್ತಪಡಿಸಿದ ಸಿದ್ದರಾಮಯ್ಯ
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ನಮ್ಮ ಬ್ರಾಂಡ್ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ. ಶುದ್ಧತೆ ಮತ್ತು ಶ್ರೇಷ್ಠತೆಯ ಪ್ರತೀಕವಾಗಿರುವ ನಂದಿನಿಯು ಈಗ ಜಾಗತಿಕ ಬ್ರ್ಯಾಂಡ್ ಆಗಿ ಗುರುತಿಸಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ. ಈ ಮೂಲಕ ನಂದಿನಿಯ ಮೌಲ್ಯ ಮತ್ತು ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲಿದ್ದು, ಜನಪ್ರಿಯ ಕ್ರೀಡೆಯಾದ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದಾಗಿ ನಂದಿನಿ ಲೋಗೋ ವಿಶ್ವವ್ಯಾಪಿ ರಾರಾಜಿಸಲಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇನಷ್ಟು ತಂಡಗಳ ಪ್ರಾಯೋಜಕ್ವ ಪಡೆದರೂ ಅಚ್ಚರಿಯಿಲ್ಲ.
ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಎಡಗೈ ಬ್ಯಾಟ್ಸ್ಮನ್ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್ಮನ್ಗಳ ಎಡಗೈ ಮೇಲೆ ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ. ಐರ್ಲೆಂಡ್ ತಂಡ ಜೆರ್ಸಿ ಇನ್ನಷ್ಟೇ ಅನಾವರಣಗೊಳ್ಳಬೇಕಿದೆ. ಮಿನಿ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.
ಮೋಹನ್ದಾಸ್ ಪೈ ವಿರೋಧ
ಉದ್ಯಮಿ ಮೋಹನ್ದಾಸ್ ಪೈ (Mohandas Pai) ಅವರು ಸ್ಕಾಟ್ಲೆಂಡ್, ಐರ್ಲೆಂಡ್ ತಂಡಗಳಿಗೆ KMF ಪ್ರಾಯೋಜಕತ್ವ ಪಡೆದ ಕಾರಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕೆಎಂಎಫ್ಗೆ ಕರ್ನಾಟಕ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು ಕಾಣುವುದಿಲ್ಲವೇ? ಇವುಗಳಿಗೇಕೆ ಪ್ರಾಯೋಜಕತ್ವ ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.
ಕೆಎಂಎಫ್ನಿಂದ ವಿದೇಶಿ ಕ್ರಿಕೆಟ್ ತಂಡಗಳಿಗೆ ಪ್ರಾಯೊಜಕತ್ವ ಪಡೆದ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋಹನ್ ದಾಸ್ ಪೈ, ಕರ್ನಾಟಕದ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿ ವೇತನಗಳಿಗೆ ಏಕೆ ಕೆಎಂಎಫ್ ಪ್ರಾಯೋಜಕತ್ವವನ್ನು ನೀಡಬಾರದು? ಕೆಎಂಎಫ್ ಕನ್ನಡಿಗ ತೆರಿಗೆದಾರರ ಹಣ, ಸಬ್ಸಿಡಿ ಮತ್ತು ಬಜೆಟ್ನಿಂದ ಧನಸಹಾಯವನ್ನು ಪಡೆದುಕೊಳ್ಳುತ್ತದೆ. ಆದರೆ, ಯಾರಿಗೂ ಗೊತ್ತಿಲ್ಲದ ವಿದೇಶಿ ತಂಡಗಳಿಗೆ ಖರ್ಚು ಮಾಡಲು ಹೊರಟಿದೆ” ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಈ ಬಗ್ಗೆ ಟ್ಯಾಗ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದರು.