Site icon Vistara News

Lionel Messi: ಹರಾಜಿಗೆ ಸಿದ್ಧವಾದ ಫಿಫಾ ವಿಶ್ವಕಪ್​ನಲ್ಲಿ ಮೆಸ್ಸಿ ಧರಿಸಿದ್ದ 6 ಜೆರ್ಸಿ

Lionel Messi 6 jerseys

ನ್ಯೂಯಾರ್ಕ್: ಖ್ಯಾತ ಫುಟ್‌ಬಾಲ್‌ ಆಟಗಾರ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ(Lionel Messi) ಅವರು 2022ರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಧರಿಸಿದ್ದ ಆರು ಜರ್ಸಿಗಳ(Lionel Messi jersey) ಸೆಟ್‌ ಡಿಸೆಂಬರ್‌ನಲ್ಲಿ ಹರಾಜು ನಡೆಯಲಿದೆ ಎಂದು ಹರಾಜು ಸಂಸ್ಥೆ ಸೊದೆಬಿ ಪ್ರಕಟಿಸಿದೆ. ಹರಾಜಿನಲ್ಲಿ ಜೆರ್ಸಿಗಳ ಮೌಲ್ಯ ಸುಮಾರು 83.36 ಕೋಟಿ ರೂ. ಅಂದಾಜು ಮಾಡಲಾಗಿದೆ.

ಲಿಯೋನೆಲ್​ ಮೆಸ್ಸಿ ಅವರು ಈ ಶರ್ಟ್‌ಗಳನ್ನು ವಿಶ್ವಕಪ್‌ನ ಗುಂಪು ಪಂದ್ಯಗಳ ವೇಳೆ (ಸೌದಿ ಅರೇಬಿಯಾ, ಮೆಕ್ಸಿಕೊ) ಮತ್ತು ನಾಕೌಟ್‌ ಪಂದ್ಯಗಳ ವೇಳೆ ಧರಿಸಿದ್ದರು. ಕತಾರ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಆರ್ಜೆಂಟೀನಾ ತಂಡ ಚಾಂಪಿಯನ್‌ ಕೂಡ ಆಗಿತ್ತು. ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಮೆಸ್ಸಿ ಪಡೆ ಸೋತಾಗ ಎಲ್ಲರು ಅರ್ಜೆಂಟೀನಾ ತಂಡವನ್ನು ಗೇಲಿ ಮಾಡಿದ್ದರು. ಆದರೆ ಆ ಬಳಿಕದ ಎಲ್ಲ ಪಂದ್ಯಗಳಲ್ಲಿಯೂ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತು.

ಮೆಸ್ಸಿ ಅವರು ಧರಿಸಿದ ಜೆರ್ಸಿಗಳ ಹರಾಜು ನವೆಂಬರ್ 30ರಿಂದ ಡಿಸೆಂಬರ್‌ 14ರವರೆಗೆ ನಡೆಯಲಿದೆ. ಮೆಸ್ಸಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ಜೆರ್ಸಿಯನ್ನು ಪಡೆಯಲು ಈಗಾಗಲೇ ಪೈಪೋಟಿಗೆ ಬಿದ್ದಿದ್ದಾರೆ ಎಂದು ಹರಾಜು ತಿಳಿಸಿದೆ.

ಇದನ್ನೂ ಓದಿ ಫಿಫಾ ಅರ್ಹತಾ ಸುತ್ತಿನ ಪಂದ್ಯ; ಉರುಗ್ವೆ ವಿರುದ್ಧ ಆಘಾತಕಾರಿ ಸೋಲು ಕಂಡ ಮೆಸ್ಸಿ ಪಡೆ

ಕಳೆದ ತಿಂಗಳು ಲಿಯೋನೆಲ್​ ಮೆಸ್ಸಿ(Lionel Messi) ಅವರು ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ(Ballon d’Or 2023) ಗೆದ್ದಿದ್ದರು. ಇದು ಮೆಸ್ಸಿ ಗೆದ್ದ ದಾಖಲೆಯ 8ನೇ ಪ್ರಶಸ್ತಿಯಾಗಿದೆ. ಮೆಸ್ಸಿ ಅವರು ಈ ಹಿಂದೆ 2009, 2010, 2011, 2012, 2015, 2019 ಮತ್ತು 2021 ರಲ್ಲಿ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದರು.  ಫಿಫಾ ವಿಶ್ವಕಪ್​ ಟೂರ್ನಿಯಲ್ಲಿ ಮೆಸ್ಸಿ  7 ಸೊಗಸಾದ ಗೋಲುಗಳನ್ನು ಬಾರಿಸಿದ್ದರು. ಇತ್ತೀಚೆಗಷ್ಟೇ ಫ್ರಾನ್ಸ್‌ನ ಪ್ಯಾರಿಸ್‌ ಸೈಂಟ್ ಜರ್ಮೈನ್‌ (PSG) ಫುಟ್​ಬಾಲ್​ ಕ್ಲಬ್​ನಿಂದ ಹೊರ ಬಂದಿರುವ ಮೆಸ್ಸಿ, ಅಮೆರಿಕದ ಮಿಯಾಮಿ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

ಭಾರತದಲ್ಲಿ ಸೌಹಾರ್ದ ಪಂದ್ಯ ಆಡಲಿದ್ದಾರೆ ಮೆಸ್ಸಿ…

ಅರ್ಜೆಂಟೀನಾ ತಂಡವು(Argentina football Team) ಕೇರಳಕ್ಕೆ ಬರಲಿದ್ದು ಭಾರತ ತಂಡದ ಜತೆ ಸೌಹಾರ್ದ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ ಎಂದು ಕೇರಳ(Kerala) ಸರ್ಕಾರ ಇತ್ತೀಚೆಗೆ ಮಾಹಿತಿ ನೀಡಿತ್ತು. ಹೀಗಾಗಿ ಮೆಸ್ಸಿ ಕೂಡ ಭಾರತಕ್ಕೆ ಬರಲಿದ್ದಾರೆ. ಭಾರತದಲ್ಲಿ ಸ್ನೇಹಾರ್ಥ ಪಂದ್ಯವನ್ನಾಡುಲು ಅರ್ಜೆಂಟೀನಾ ತಂಡ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(All India Football Federation)ಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಪಂದ್ಯ ಆಯೋಜನೆಗೆ ಭಾರಿ ಹಣದ ಅವಶ್ಯಕತೆ ಇರುವುದರಿಂದಾಗಿ ಈ ಮನವಿಯನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ತಿರಸ್ಕರಿಸಿತ್ತು. ಇದೇ ವೇಳೆ ಕೇರಳ ಸರ್ಕಾರ ತಮ್ಮ ರಾಜ್ಯದಲ್ಲಿ ಪಂದ್ಯವನ್ನು ಆಡಿಸಲು ಮುಂದೆ ಬಂದಿತ್ತು. ಅಲ್ಲದೆ ಅರ್ಜೆಂಟೀನಾ ತಂಡವು ಭಾರತದಲ್ಲಿ ಪಂದ್ಯ ಆಡುವ ಆತಿಥ್ಯವನ್ನು ವಹಿಸಿಕೊಂಡಿತು. ಈ ವಿಚಾರವನ್ನು ಅಧಿಕೃತವಾಗಿಯೂ ಪಿಣರಾಯಿ ಸರ್ಕಾರ ಪ್ರಕಟಿಸಿತ್ತು.

ಇದೇ ವಿಚಾರವಾಗಿ ಮಾತನಾಡಿದ್ದ ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್(V. Abdurahiman), ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಭಾರತಕ್ಕೆ ಬರುವುದು ಬಹುತೇಕ ಖಚಿತವಾಗಿ ಈಗಾಗಲೇ ಎಲ್ಲ ಮಾತುಕತೆಗಳು ಮುಕ್ತಾಯಗೊಂಡಿದೆ. ಪಂದ್ಯಕ್ಕೆ ಖರ್ಚಾಗುವ ಎಲ್ಲ ಹಣವನ್ನು ಕೇರಳ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದರು. ಆದರೆ, ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎನ್ನುವುದು ಇನಷ್ಟೇ ತಿಳಿದು ಬರಬೇಕಿದೆ.

ಕೇರಳದಲ್ಲಿ ಫುಟ್ಬಾಲ್​ ಕ್ರೇಜ್​ ಕ್ರಿಕೆಟ್​ಗಿಂತ ಹೆಚ್ಚು. ಅದರಲ್ಲೂ ಮೆಸ್ಸಿ ಅವರಿಗಂತೂ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ಕಳೆದ ಕತಾರ್​ ಫಿಫಾ ವಿಶ್ವ ಕಪ್​ ವೇಳೆ ಸಾಗರದ ಆಳದಲ್ಲಿ ಮೆಸ್ಸಿಯ ಕಟೌಟ್ ನಿಲ್ಲಿಸಿದ್ದು ಭಾರಿ ಸುದ್ದಿಯಾಗಿತ್ತು. ಅರ್ಜೆಂಟೀನಾ ತಂಡಕ್ಕೆ ಬೆಂಬಲ ಸೂಚಿಸಿದ್ದಕ್ಕಾಗಿ ಸ್ವತಃ ಮೆಸ್ಸಿ ಅವರೇ ಟ್ವೀಟ್​ ಮೂಲಕ ಕೇರಳದ ಜನತೆಗೆ ಧನ್ಯವಾದ ತಿಳಿಸಿದ್ದರು. ಇದೀಗ ನೆಚ್ಚಿನ ಆಟಗಾರ ತಮ್ಮ ತವರಿಗೆ ಬರುತ್ತಿದ್ದಾರೆ ಎನ್ನುವ ವಿಷಯ ತಿಳಿದಿರುವ ಕೇರಳದ ಜನತೆಯಲ್ಲಿ ಸಂಭ್ರಮ ಮನೆ ಮಾಡಿದೆ.

Exit mobile version