Site icon Vistara News

IPL 2023 : ನಾಯಕತ್ವದಿಂದ ರಾಹುಲ್ ಪ್ರದರ್ಶನಕ್ಕೆ ಅಡಚಣೆಯಾಗಿಲ್ಲ ಎಂದ ಎಲ್​ಎಸ್​ಜಿ ಫೀಲ್ಡಿಂಗ್​ ಕೋಚ್​

lsg-fielding-coach-said-that-rahuls-performance-was-not-hindered-by-leadership

#image_title

ಲಖನೌ: ಲಕ್ನೊ ಸೂಪರ್​ ಜೈಂಟ್ಸ್ ತಂಡದ ತಂಡದ ನಾಯಕ ಕೆ. ಎಲ್​ ರಾಹುಲ್ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2023) ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿಲ್ಲ. ಈ ಬಗ್ಗೆ ಟೀಕೆಗಳು ವ್ಯಕ್ತಗೊಳ್ಳುತ್ತಿವೆ. ಆದಾಗ್ಯೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು 55 ಎಸೆತಗಳಲ್ಲಿ 74 ರನ್​ ಬಾರಿಸಿ ಏಕಾಂಗಿ ಹೋರಾಟ ನಡೆಸಿದ್ದರು. ಈ ಪಂದ್ಯದಲ್ಲೂ ಅವರು ಸ್ಟ್ರೈಕ್​ ರೇಟ್​ ಹೇಳುವ ಮಟ್ಟಕ್ಕೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡಿದ ಲಕ್ನೊ ಸೂಪರ್​ ಜೈಂಟ್ಸ್​ ತಂಡದ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್​​, ನಾಯಕತ್ವದಿಂದ ರಾಹುಲ್ ಪ್ರದರ್ಶನಕ್ಕೆ ಅಡಚಣೆಯಾಗಿಲ್ಲ ಎಂದು ಹೇಳಿದ್ದಾರೆ.

ಕೆ. ಎಲ್ ರಾಹುಲ್​ ಲಕ್ನೊ ಸೂಪರ್​ ಜೈಂಟ್ಸ್ ತಂಡಕ್ಕೆ 2022ರಲ್ಲಿ ನಾಯಕರಾಗಿದ್ದರು. ಉದ್ಘಾಟನಾ ವರ್ಷದಲ್ಲಿ ಅವರು ತಂಡವನ್ನು ಪ್ಲೇಆಫ್​ ಹಂತಕ್ಕೆ ಕೊಂಡೊಯ್ದಿದ್ದರು. ಕಳೆದ ವರ್ಷ ಅವರು ಉತ್ತಮ ಬ್ಯಾಟಿಂಗ್​ ಪ್ರದರ್ಶನವನ್ನೂ ನೀಡಿದ್ದರು. ತಂಡದ ಗೆಲುವುಗಳಿಗೆ ಅವರ ಬ್ಯಾಟಿಂಗ್​ ಕೂಡ ನೆರವು ಕೊಟ್ಟಿತ್ತು. ಆದರೆ, ಹಾಲಿ ಆವೃತ್ತಿಯಲ್ಲಿ ಮಿತಿ ಮೀರಿದ ಎಚ್ಚರಿಕೆಯಲ್ಲಿ ಆಡುತ್ತಿರುವ ಅವರ ಬ್ಯಾಟ್​​ನಿಂದ ರನ್​ಗಳು ಹೊರಹೊಮ್ಮುತ್ತಿಲ್ಲ. ಹೀಗಾಗಿ ನಾಯಕತ್ವವೇ ಅವರಿಗೆ ಹೊರೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ವಾದವನ್ನು ಜಾಂಟಿ ರೋಡ್ಸ್​​ ನಿರಾಕರಿಸಿದ್ದಾರೆ. ನಾಯಕ ಅಂದರೆ ತಂಡದ ಉತ್ತಮ ಪ್ರದರ್ಶನಕ್ಕೆ ಮುಂದಾಳತ್ವ ವಹಿಸುವವರು. ಅವರು ಯಾವತ್ತೂ ಯಶಸ್ಸು ಕಾಣುತ್ತಿರಬೇಕು. ಅಂತೆಯೇ ರಾಹುಲ್​ ಕೂಡ ಈ ಹಿಂದಿನ ಎಲ್ಲ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹಾಗೆಂದು ಈ ಬಾರಿ ಅವರಿಗೆ ನಾಯಕತ್ವದ ಹೊರೆ ಬಿದ್ದಿಲ್ಲ. ಬಲಿಷ್ಠ ಬ್ಯಾಟರ್​ಗಳು ಅನೇಕ ಬಾರಿ ನಾಯಕತ್ವವನ್ನು ಹೊತ್ತುಕೊಳ್ಳುವಲ್ಲಿ ವೈಫಲ್ಯ ಕಂಡಿದ್ದಾರೆ. ಆದರೆ ರಾಹುಲ್​ ಉತ್ತಮವಾಗಿ ತಂಡವನ್ನು ನಿರ್ವಹಣೆ ಮಾಡುತ್ತಿದ್ದು ನೋಡಲು ಖುಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನಾಯಕ ಉತ್ತಮ ರೀತಿಯಲ್ಲಿ ರನ್ ಗಳಿಸುತ್ತಿರುವಾಗ, ಅವನು ಆಡುವ ರೀತಿ ಇತರರಿಗೆ ಮಾದರಿ ಎನಿಸುತ್ತದೆ. ಅದೇ ರೀತಿ ರಾಹುಲ್​ ಬಾರಿಸಿರುವ ಅರ್ಧ ಶತಕ ಇತರ ಬ್ಯಾಟರ್​​ಗಳಿಗೆ ಪ್ರೇರಣೆ ನೀಡಿದೆ. ರಾಹುಲ್​ ನೆಟ್ಸ್‌ನಲ್ಲಿ ಅಮೋಘವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಂತೆಯೇ ಸದ್ಯದಲ್ಲಿಯೇ ಶತಕ ಬಾರಿಸಲಿದ್ದಾರೆ ಎಂದು ಹೇಳಿದರು.

ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಏನಾಯಿತು?

ಬೌಲರ್​ಗಳ ಪರಾಕ್ರಮ ಹಾಗೂ ಸಿಕಂದರ್​ ರಾಜಾ (57) ಅವರ ಅರ್ಧ ಶತಕದ ನೆರವು ಪಡೆದ ಪಂಜಾಬ್​ ಕಿಂಗ್ಸ್​ ತಂಡ ಐಪಿಎಲ್​ನ 21ನೇ ಪಂದ್ಯದಲ್ಲಿ ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ 2 ವಿಕೆಟ್ ವಿಜಯ ಸಾಧಿಸಿದೆ. ಇದರೊಂದಿಗೆ ಕಳೆದ ಎರಡು ಪಂದ್ಯಗಳ ಸೋಲಿನ ಬಳಿಕ ಪಂಜಾಬ್​ ತಂಡ ಗೆಲುವಿನ ಹಳಿಗೆ ಮರಳಿತು. ಅತ್ತ ಹಿಂದಿನ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಕೊನೇ ಎಸೆತದಲ್ಲಿ ಗೆಲುವು ಪಡೆದಿದ್ದ ಲಕ್ನೊ ತಂಡ, ತವರಿನ ಮೈದಾನದಲ್ಲಿ ಸೋಲು ನಿರಾಸೆ ಎದುರಿಸಿತು. ಕಾಯಂ ನಾಯಕ ಶಿಖರ್​ ಧವನ್​ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಸ್ಯಾಮ್ ಕರ್ರನ್​ ಗೆಲುವಿನ ದಡ ಮುಟ್ಟಿಸಿ ಸಂಭ್ರಮಿಸಿದರು.

ಭಾರತರತ್ನ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಕೆ. ಎಲ್​ ರಾಹುಲ್ ನೇತೃತ್ವದ ಲಖನೌ ಸೂಪರ್​ ಜೈಂಟ್ಸ್​ ತಂಡ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 159 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್​ ಕಿಂಗ್ಸ್ ಬಳಗ 19.3 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 161 ರನ್​ ಬಾರಿಸಿ ಜಯ ಸಾಧಿಸಿತು.

Exit mobile version