Site icon Vistara News

ind vs aus : ಆಸ್ಟ್ರೇಲಿಯಾ- ಭಾರತ ಟಿ20 ಪಂದ್ಯದ ಅಂಪೈರ್​ ಮೇಲೆ ಮೋಸದ ಅರೋಪ!

Cricket news

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ (ind vs aus) ಐದನೇ ಮತ್ತು ಅಂತಿಮ ಟಿ 20 ಪಂದ್ಯದಲ್ಲಿ ಭಾರತ ತಂಡವು ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 4-1 ರಿಂದ ಗೆದ್ದುಕೊಂಡು ಬೀಗಿದೆ. ಭಾರತ ತಂಡಕ್ಕೆ ಇದು ಉತ್ತಮ ಫಲಿತಾಂಶವಾಗಿದ್ದು, ವಿಶ್ವಕಪ್ ಫೈನಲ್ ಸೋಲಿನ ನಂತರ ನಿರಾಶೆಗೊಂಡ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಸ್ವಲ್ಪ ಉತ್ಸಾಹ ತಂದಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಮ್ಯಾಥ್ಯೂ ವೇಡ್ ಅವರು ಮೊದಲು ಬ್ಯಾಟಿಂಗ್ ಮಾಡವಂತೆ ಭಾರತಕ್ಕೆ ಆಹ್ವಾನ ಕೊಟ್ಟಿತು/ ಶ್ರೇಯಸ್ ಅಯ್ಯರ್ 53 ರನ್ ಗಳಿಸಿದರೆ, ಅಕ್ಷರ್ ಪಟೇಲ್ 31 ರನ್ ಗಳಿಸಿದ್ದರಿಂದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಅಂತೆಯೇ ಪಂದ್ಯದ ಕೊನೇ ಹಂತದಲ್ಲಿ ಬೌಲಿಂಗ್​ನಲ್ಲಿ ಮಿಂಚಿದ ಮುಕೇಶ್ ಕುಮಾರ್ (32ಕ್ಕೆ 3) ಹಾಗೂ ಅರ್ಷ್ದೀಪ್ ಸಿಂಗ್ (40ಕ್ಕೆ 2) ಭಾರತ ತಂಡವನ್ನು ಗೆಲ್ಲಿಸಿದರು. ಅದರಲ್ಲೂ ಅರ್ಶ್​ ದೀಪ್​ ಕೊನೇ ಓವರ್​ನಲ್ಲಿ ಬೇಕಾಗಿದ್ದ 10 ರನ್ ಕಾಪಾಡಿ ಭಾರತಕ್ಕೆ 6 ರನ್ ಗಳ ಜಯ ತಂದಕೊಟ್ಟಿದ್ದರು. ಈ ಓವರ್ ಅತ್ಯಂತ ರೋಚಕವಾಗಿತ್ತು. ಇದೀಗ ಆ ಓವರ್​ನ ಎರಡು ಎಸೆತಗಳು ವಿವಾದಕ್ಕೆ ಒಳಗಾಗಿದೆ. ಆಸ್ಟ್ರೇಲಿಯಾದ ಮಾಜಿ ಆಟಗಾರರು ಇದು ಮೋಸದಾಟ ಎಂಬಂತೆ ಅದನ್ನು ಬಿಂಬಿಸಿದ್ದಾರೆ. ಅಂಪೈರ್​ಗಳ ಮೇಲೆ ಪಕ್ಷಪಾತದ ಗೂಬೆ ಕೂರಿಸಿದ್ದಾರೆ.

ಹೇಡನ್ ವಿವಾದಾತ್ಮಕ ಹೇಳಿಕೆ

ಪಂದ್ಯದ ವೀಕ್ಷಕ ವಿವರಣೆಯ ಸಮಯದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ನೀಡಿದ ಹೇಳಿಕೆ ಸ್ವಲ್ಪ ಕೋಲಾಹಲಕ್ಕೆ ಕಾರಣವಾಯಿತು. ಅರ್ಶ್​ದೀಪ್​ ಅವರು ಎಸೆದ ಬೌನ್ಸರ್ ಮ್ಯಾಥ್ಯೂ ವೇಡ್ ಅವರ ತಲೆಯ ಮೇಲೆ ಹಾರಿ ಹೋಗಿತ್ತು. ಬ್ಯಾಟರ್​ ಮನವಿಯ ಹೊರತಾಗಿಯೂ, ಲೆಗ್-ಅಂಪೈರ್ ಅದಕ್ಕೆ ವೈಡ್​ ನೀಡಲಿಲ್ಲ. ಇದು ವೇಡ್ ಅವರ ಕೋಪಕ್ಕೆ ಕಾರಣವಾಯಿತು.

ಇದನ್ನೂ ಓದಿ : Suryakumar Yadav : ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಸೂರ್ಯಕುಮಾರ್​

ಹೇಡನ್ ಈ ಕುರಿತು ವಿವರಣೆ ನೀಡಿ, ವೇಡ್​ ಕೋಪಗೊಂಡಿದ್ದು ಸರಿಯಾಗಿದೆ. ಅದು ಖಂಡಿತವಾಗಿಯೂ ವೈಡ್​ ಎಸೆತ. ಅವರ ತಲೆಯ ಮೇಲೆ ಹಾರಿ ಹೋಗಿದೆ. ಅವರು ತಮ್ಮ ಸ್ಥಾನದಲ್ಲಿ ನಿಂತಿದ್ದ ಹೊರತಾಗಿಯೂ ಚೆಂಡು ಮೇಲಕ್ಕೆ ಹಾರಿದೆ. ಹೀಗಾಗಿ ವೈಡ್​ ನೀಡಬೇಕಾಗಿತ್ತು ಎಂದು ವಾದಿಸಿದ್ದಾರೆ. ಇದು ಅಂಪೈರ್ ಮಾಡಿದ ಮೊದಲ ತಪ್ಪು ಎಂಬುದಾಗಿ ಹೇಡನ್ ಆರೋಪಿಸಿದ್ದಾರೆ.

ಅಂಪೈರ್​ ದೇಹಕ್ಕೆ ಬಡಿದಿತ್ತು ಚೆಂಡು

ಕೊನೆಯ 2 ಎಸೆತಗಳಲ್ಲಿ ಆಸೀಸ್​ ಬಳಗಕ್ಕೆ 8 ರನ್​ಗಳ ಅಗತ್ಯವಿತ್ತು. ನಥನ್ ಎಲ್ಲಿಸ್ ಸ್ಟ್ರೈಟ್​ ಬೌಂಡರಿಯನ್ನು ಗುರಿಯಾಗಿಸಿ ಬಾರಿಸಿದ ಚೆಂಡು ಬೌಲರ್ ಅರ್ಶ್​ದೀಪ್ ಅವರ ಕೈಸವರಿ ಅಂಪೈರ್​ನ ಮೈ ಮೇಲೆ ಬಿದ್ದಿತ್ತು. ಅಂಪೈರ್​ ಚೆಂಡಿನಿಂದ ತಪ್ಪಿಸಿಕೊಳ್ಳುವುದಕ್ಕೆ ನಾನಾ ರೀತಿ ಯತ್ನಿಸಿದರೂ ಅದು ಅವರ ತೊಡೆಗೆ ಬಡಿದಿತ್ತು. ಎಲ್ಲಿಸ್ ಸಂಭಾವ್ಯ ಬೌಂಡರಿಯನ್ನು ತಪ್ಪಿಸಿಕೊಂಡಿರುವ ಬಗ್ಗೆ ಸನ್ನೆ ಮಾಡಿದರೂ ಅಂಪೈರ್​ ಮರುತ್ತರ ಕೊಟ್ಟಿರಲಿಲ್ಲ.

ಈ ಎರಡೂ ಪ್ರಸಂಗವನ್ನು ನೋಡಿದ ಹೇಡನ್, ಅಂಪೈರ್ ಈ ಓವರ್​ನಲ್ಲಿ ಎರಡನೇ ಬಾರಿಗೆ ತಮ್ಮ ಕರ್ತವ್ಯ ಪೂರೈಸಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಮಾತು ಅಂಪೈರ್​ಗಳ ಮೋಸ ಹಾಗೂ ಸ್ವಜನಪಕ್ಷಪಾತ ಎಂಬ ಹೇಳಿಕೆಯಾಗಿತ್ತು.

ಹೇಡನ್ ಅವರ ಹೇಳಿಕೆಗಳು ಅನಗತ್ಯ ಎಂದು ನೆಟ್ಟಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಲಾಂಗ್ ಆನ್ ನಲ್ಲಿ ಫೀಲ್ಡರ್​ಗಳಿದ್ದರು. ಇದರಿಂದ ಯಾವುದೇ ವ್ಯತ್ಯಾಸ ಉಂಟಾಗುತ್ತಿರಲಿಲ್ಲ ಎಂದ ಹೇಳಿದ್ದಾರೆ. ಮೊದಲ ಎಸೆತವನ್ನು ವೈಡ್ ಕೊಟ್ಟಿದ್ದರೆ ಆಸ್ಟ್ರೇಲಿಯಾ ಐದು ರನ್​ನಿಂದ ಸೋಲುತ್ತಿತ್ತು ಎಂಬುದಾಗಿಯೂ ಅವರು ಹೇಳಿದ್ದಾರೆ.

Exit mobile version